ರಕ್ಷಣೆ ಇಲ್ಲದ ಎಟಿಎಂ ಮುಲಾಜಿಲ್ಲದೆ ಮುಚ್ಚಿ ಎಂದ ಹುಬ್ಬಳ್ಳಿ ಪೊಲೀಸರು
ಹುಬ್ಬಳ್ಳಿ ಅಕ್ಟೋಬರ್ 14: ಎಟಿಎಂ ಅಂದರೆ ಎನಿ ಟೈಮ್ ಮನಿ ಎಂದು ತಮಾಷೆಗೆ ಹೇಳುವುದು ಉಂಟು. ಹಣ ಡ್ರಾ ಮಾಡುವ ವಿಷಯಕ್ಕೆ ಬಂದರೆ ಈ ವರೆಗೆ ತಮಾಷೆ ಎಂಬುದು ಸತ್ಯ ಕೂಡ ಹೌದು. ಆದರೆ ಹುಬ್ಬಳ್ಳಿಯಲ್ಲಿ ಇನ್ನು ಮುಂದೆ ಎಟಿಎಂಗಳಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಯೂ ಹಣ ಸಿಗುವುದಿಲ್ಲ. ಈ ಮಾತು ನೆನಪಿನಲ್ಲಿರಲಿ.
ಏಕೆಂದರೆ, ಭದ್ರತಾ ಸಿಬ್ಬಂದಿ ನಿಯೋಜಿಸದ ಎಟಿಎಂ ಕೇಂದ್ರಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಬ್ಯಾಂಕ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಹೀಗಾಗಿ ಅವಳಿ ನಗರದ ಬಹುತೇಕ ಎಟಿಎಂ ಗಳು ಬಾಗಿಲು ಮುಚ್ಚಲಿವೆ.

ಒಂದು ತಿಂಗಳ ಹಿಂದೆ ದೇಶಪಾಂಡೆ ನಗರದ ಸರ್ಕಲ್ ಬಳಿ ಇರುವ ಎಸ್ ಬಿಐ ಬ್ಯಾಂಕಿಗೆ ಸೇರಿದ ಎಟಿಎಂನಲ್ಲಿ 18 ಲಕ್ಷ ರುಪಾಯಿ ಹಣ ಕಳವಾಗಿತ್ತು. ಇನ್ನು ಕಾರವಾರ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಕಳ್ಳತನವಾಗಿತ್ತು. ಹೀಗಾಗಿ ಬ್ಯಾಂಕ್ ನವರೇ ಎಟಿಎಂಗಳಿಗೆ ಭದ್ರತೆ ನೀಡಬೇಕು ಎಂದು ಆದೇಶ ಹೊರಡಿಸಲಾಯಿತು.
ಎಲ್ಲ ಎಟಿಎಂಗಳಲ್ಲೂ ದಿನದ 24 ಗಂಟೆಯೂ ಭದ್ರತಾ ಸಿಬ್ಬಂದಿ ನಿಯೋಜಿಸುವ ಜತೆಗೆ ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಆದೇಶ ಮಾಡಿದ್ದಾರೆ. ಸುರಕ್ಷತಾ ಕ್ರಮಗಳನ್ನು ಅನುಸರಿಸದ ಎಟಿಎಂ ಕೇಂದ್ರಗಳನ್ನು ಮುಚ್ಚುವ ಜೊತೆಗೆ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಅಕ್ಟೋಬರ್ 30ರವರೆಗೆ ಗಡುವು ನೀಡಿದ್ದಾರೆ.
ಇನ್ನು ಅವಳಿ ನಗರದಲ್ಲಿ ರಾಷ್ಟ್ರೀಕೃತ ಮತ್ತು ಖಾಸಗಿ ಸೇರಿದಂತೆ ಒಟ್ಟು 47 ಬ್ಯಾಂಕ್ ಗಳು, 450 ಎಟಿಎಂಗಳಿವೆ. ಆದರೆ ಈ ಪೈಕಿ 270 ಎಟಿಎಂ ಕೇಂದ್ರಗಳಿಗೆ ಭದ್ರತಾ ಸಿಬ್ಬಂದಿ ನಿಯೋಜಿಸಿಲ್ಲ. ಹೀಗಾಗಿ ಸುರಕ್ಷತಾ ಕ್ರಮಗಳನ್ನು ಪಾಲಿಸದ ಎಟಿಎಂ ಕೇಂದ್ರಗಳನ್ನು ನವಂಬರ್ 1ರ ನಂತರ ಕಡ್ಡಾಯವಾಗಿ ಬಂದ್ ಮಾಡಿಸುತ್ತೇವೆ ಎಂಬ ಖಡಕ್ ಸಂದೇಶ ನೀಡಿದ್ದಾರೆ.
ಅಲ್ಲದೆ ಅವಳಿ ನಗರದ ಬಹುತೇಕ ಎಟಿಎಂ ಕೇಂದ್ರಗಳನ್ನು ಈಗಾಗಲೇ ಮುಚ್ಚಲಾಗಿದೆ. ಇದರಿಂದ ಸಕಾಲಕ್ಕೆ ಹಣ ಸಿಗದೆ ಗ್ರಾಹಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಹಣ ಡ್ರಾ ಮಾಡಲು ಬ್ಯಾಂಕ್ ಗಳಿಗೆ ಹೋಗಬೇಕಾದ ಅನಿವಾರ್ಯ ಇದೆ. ಒಟ್ಟಿನಲ್ಲಿ ಪೊಲೀಸ್ ಇಲಾಖೆಯ ಈ ಆದೇಶದಿಂದ ಜನರಿಗೆ ತೊಂದರೆ ಮಾತ್ರ ತಪ್ಪಿದಲ್ಲ.












Click it and Unblock the Notifications