ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎಸಿಬಿ ರದ್ದು: ಶೆಟ್ಟರ್
ಹುಬ್ಬಳ್ಳಿ, ಅಕ್ಟೋಬರ್ 6: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ರಚನೆ ಮಾಡಿರುವ ಭಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು ರದ್ದು ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಶುಕ್ರವಾರ ಹೇಳಿದರು.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯು ಸ್ವಾಯತ್ತ ಸಂಸ್ಥೆ. ಆ ಇಲಾಖೆಯವರ ಮೇಲೆ ಎಸಿಬಿ ಮೂಲಕ ದಾಳಿ ಮಾಡಿಸಲು ಹೊರಟಿದ್ದು ಖಂಡನೀಯ. ಸಿದ್ದರಾಮಯ್ಯ ಅವರು ಕೇಂದ್ರದೊಂದಿಗೆ ಸಂಘರ್ಷಕ್ಕೆ ಇಳಿಯಲು ಹೊರಟಿದ್ದಾರೆ ಎಂದು ಶೆಟ್ಟರ್ ಕಿಡಿ ಕಾರಿದರು.

ಕೇಂದ್ರದ ಸ್ವಾಯತ್ತ ಸಂಸ್ಥೆಯ ಮೇಲೆ ದಾಳಿ ಮಾಡಲು ಎಳ್ಳಷ್ಟೂ ಅವಕಾಶವಿಲ್ಲ. ಮುಖ್ಯಮಂತ್ರಿ ಅಧೀನದಲ್ಲಿರುವ ಎಸಿಬಿ ನಡೆ ಹಲವು ಅನುಮಾನಕ್ಕೆ ಕಾರಣವಾಗಿದೆ. ತಮ್ಮ ಅಭಿಲಾಷೆ ಈಡೇರಿಸಿಕೊಳ್ಳಲು ಎಸಿಬಿ ದುರ್ಬಳಕೆ ಮಾಡುತ್ತಿದ್ದು, ಸಿಐಡಿ ಮೂಲಕ ಭ್ರಷ್ಟ ಸಚಿವರು, ಶಾಸಕರಿಗೆ ಕ್ಲೀನ್ ಚಿಟ್ ಕೊಡಿಸಲಾಗಿದೆ ಎಂದು ಆರೋಪ ಮಾಡಿದರು.
ಇನ್ನು ಮೂಲ ಕಾಂಗ್ರೆಸ್ಸಿಗರನ್ನು ಸಿದ್ದರಾಮಯ್ಯ ಮೂಲೆಗುಂಪು ಮಾಡಿದ್ದಾರೆ. ವಲಸೆ ಬಂದು, ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಿದ್ದಾರೆ. ಅವರದ್ದು ಮನ್ ಕಿ ಬಾತ್, ಕಾಮ್ ಕಿ ಬಾತ್ ಯಾವುದೂ ಇಲ್ಲ. ರಾಜ್ಯ ಸರಕಾರವು ಸಾಲಮನ್ನಾ ಹಸರಲ್ಲಿ ರೈತರಿಗೆ ಮೋಸ ಮಾಡಿದೆ. ಡಿವೈಎಸ್ ಪಿ ಗಣಪತಿ ಸಾವು ಪ್ರಕರಣದ ಸಾಕ್ಷ್ಯ ನಾಶ ಮಾಡಿದ್ದು, ಕೆ.ಜೆ. ಜಾರ್ಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.












Click it and Unblock the Notifications