ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ಕಾನೂನಿನ ಪ್ರಕಾರ ತನಿಖೆ ನಡೆಯುತ್ತಿದೆ: ಅಲೋಕ್ ಕುಮಾರ್
ಹುಬ್ಬಳ್ಳಿ, ಆಗಸ್ಟ್ 29: ''ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ತನಿಖೆ ಕಾನೂನಿನ ಪ್ರಕಾರ ನಡೆಯುತ್ತಿದೆ'' ಎಂದು ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ನಗರದ ಈದ್ಗಾ ಮೈದಾನದ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿಗೆ ನೀಡುವ ಬಗ್ಗೆ ಪಾಲಿಕೆ ಸೋಮವಾರ ಅಂತಿಮ ನಿರ್ಧಾರ ಹೊರಡಿಸಲಿದೆ. ಈ ಹಿನ್ನಲೆಯಲ್ಲಿ ಈದ್ಗಾ ಮೈದಾನಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಹುಬ್ಬಳ್ಳಿ; ಈದ್ಗಾ ಮೈದಾನದಲ್ಲಿ ಗಣೇಶೋತ್ಸವ, ಸೋಮವಾರ ಅಂತಿಮ ವರದಿ
ಮುರುಘಾ ಶರಣರ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, "ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದೇವೆ. ಜೊತೆಗೆ ಪೋಷಕರನ್ನು ಕೂಡಾ ಸಂಪರ್ಕಿಸಿ ಮಾಹಿತಿ ಪಡೆಯಲು ಪ್ರಯತ್ನ ಮಾಡಲಾಗುತ್ತಿದೆ. ತನಿಖಾಧಿಕಾರಿಗಳಿಗೆ ಕಾನೂನಿನ ಪ್ರಕಾರ ತನಿಖೆ ನಡೆಸಲು ಮಾತ್ರ ಸೂಚನೆ ನೀಡಿದ್ದೇವೆ. ಪ್ರತಿಯೊಂದು ಹಂತದಲ್ಲಿ ಅವರಿಗೆ ನಿರ್ದೇಶನ ನೀಡುವುದು ಸರಿಯಲ್ಲ, ತನಿಖೆ ಅವರ ವಿವೇಚನೆಗೆ ಬಿಟ್ಟಿದ್ದು" ಎಂದು ತಿಳಿಸಿದ್ದಾರೆ.
''ಮುರಘಾ ಮಠದ ಸ್ವಾಮೀಜಿಗಳನ್ನು ವಶಕ್ಕೆ ಪಡೆದಿದ್ದು ನನ್ನ ಗಮನಕ್ಕೆ ಬಂದಿಲ್ಲ. ನಾನೂ ಅಲ್ಲಿನ ಪೊಲೀಸರಿಗೆ ಪೋನ್ ಮಾಡಿ ಮಾಹಿತಿ ಪಡೆಯುತ್ತೇನೆ. ನಮ್ಮ ಸಿಬ್ಬಂದಿ ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತಿದ್ದಾರೆ. ಈ ಹಂತದಲ್ಲಿ ಮಾಧ್ಯಮಕ್ಕೆ ಯಾವುದೇ ಮಾಹಿತಿಯನ್ನು ನೀಡಬಾರದೆಂದು ಕೋರ್ಟ್ ಆದೇಶವಿದೆ'' ಎಂದು ತಿಳಿಸಿದರು.
ಈದ್ಗಾ ಮೈದಾನದ ವಿವಾದ
ಈದ್ಗಾ ಮೈದಾನದ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ಹುಬ್ಬಳ್ಳಿಯ ಈದ್ಗಾದಲ್ಲಿ ಗಣೇಶೋತ್ಸವ ಆಚರಣೆ ಅವಕಾಶ ಕೊಡುವ ವಿಚಾರ ಮಹಾನಗರ ಪಾಲಿಕೆಗೆ ಬಿಟ್ಟಿದ್ದು, ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅದರ ಮೇಲೆ ನಾವು ಕೆಲಸ ಮಾಡುತ್ತೇವೆ ಎಂದು ಅಲೋಕ್ ಕುಮಾರ್ ಹೇಳಿದರು.
ಕಾನೂನು ಸುವ್ಯವಸ್ಥೆ ಕಾಪಾಡೋದು ನಮ್ಮ ಉದ್ದೇಶ. ಹುಬ್ಬಳ್ಳಿ ಧಾರವಾಡ, ಶಿವಮೊಗ್ಗ, ಬೆಳಗಾವಿ ಸೇರಿ ರಾಜ್ಯದ ಮೂರು ಕಡೆ ಗಣೇಶ ಹಬ್ಬ ಜೋರಾಗಿ ಮಾಡುತ್ತಾರೆ. ಹೀಗಾಗಿ ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಭೇಟಿ ನೀಡಿದ್ದೇನೆ. ಈ ಬಾರಿ ಈದ್ಗಾದಲ್ಲಿ ಗಣೇಶ ಪ್ರತಿಷ್ಟಾಪನೆಗೆ ಅವಕಾಶ ಕೇಳಿದ್ದಾರೆ. ಪಾಲಿಕೆ ಸದನ ಸಮೀತಿ ಮಾಡಿದ್ದಾರೆ. ಸರಕಾರ ಏನ್ ನಿರ್ಧಾರ ತೆಗೆದುಕೊಳ್ಳುತ್ತೆ, ಅದರ ಪ್ರಕಾರ ಕೆಲಸ ಮಾಡುತ್ತೇವೆ ಎಂದರು.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಡಿಜೆ ಬಳಸಬೇಕು. ಆದೇಶ ಮೀರಿದ್ರೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹುಬ್ಬಳ್ಳಿ ಭೇಟಿ ವೇಳೆ ಅಲೋಕ್ ಕುಮಾರ್ ಹೇಳಿದರು. ಈ ಸಂದರ್ಭದಲ್ಲಿ ಪೊಲೀಸ್ ಕಮೀಷನರ್ ಲಾಬೂರಾಮ್, ಡಿಸಿಪಿಗಳಾದ ಸಾಹೀಲ್ ಬಾಗ್ಲಾ, ಗೋಪಾಲ ಬ್ಯಾಕೋಡ್, ಎಸ್.ಪಿ. ಲೋಕೇಶ ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ನಿರ್ಧಾರ ತಿಳಿಸಲಿರುವ ಪಾಲಿಕೆ ಸಮಿತಿ
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ಕುರಿತು ತೀರ್ಮಾನ ಕೈಗೊಳ್ಳಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದನ ಸಮಿತಿ ರಚಿಸಿದೆ. ಆ ಸಮಿತಿ ಸೋಮವಾರ ಗಣೇಶೋತ್ಸವ ಕುರಿತು ಅಂತಿಮ ವರದಿ ನೀಡಲಿದೆ. ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು. ಅದಕ್ಕಾಗಿ ಸದನ ಸಮಿತಿ ರಚಿಸುವುದು ಸೂಕ್ತ ಎಂಬ ಅಭಿಪ್ರಾಯದಲ್ಲಿದ್ದಾರೆ.
ಭಗತ್ಸಿಂಗ್ ಸೇವಾ ಸಮಿತಿ, ಹಿಂದೂ ಜಾಗರಣಾ ವೇದಿಕೆ, ರಾಣಿಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ, ಗಜಾನನ ಮಹಾಮಂಡಳ, ಶ್ರೀರಾಮಸೇನಾ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿವೆ. ಅದಕ್ಕಾಗಿ ಈ ಸಾಮಾನ್ಯಸಭೆಯಲ್ಲಿ ಚರ್ಚಿಸಲು ಹೆಚ್ಚಿನ ವಿಷಯ ಪಟ್ಟಿಯಲ್ಲಿ ಸೇರಿಸಲಾಗಿತ್ತು.
ಹುಬ್ಬಳ್ಳಿಯಲ್ಲಿ ಪೊಲೀಸ್ ಬಂದೋಬಸ್ತ್
ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಗಣೇಶ ಮಹೋತ್ಸವನ್ನು ಬಹಳ ವಿಜೃಂಭಣೆಯಿಂದ ಆಚರಿಸುವ ಹಿನ್ನೆಲೆ ಅವಳಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜಿಲ್ಲೆಯ 2000 ಪೊಲೀಸ್ ಸೇರಿ ಸುಮಾರು 3000 ಪೊಲೀಸರನ್ನು ನಿಯೋಜಿಸಲಾಗಿದೆ.