ಹುಬ್ಬಳ್ಳಿ ಯೋಧ ಸತ್ತಿದ್ದು ಉಗ್ರರ ದಾಳಿಯಿಂದಲ್ಲ, ಆತ್ಮಹತ್ಯೆಯಿಂದ
ಹುಬ್ಬಳ್ಳಿ, ಅಕ್ಟೋಬರ್ 3: ಅಕ್ಟೋಬರ್ 1ರಂದು ಜಮ್ಮು ಕಾಶ್ಮೀರದಲ್ಲಿ ಹುಬ್ಬಳ್ಳಿಯ ಯೋಧ ಮಂಜುನಾಥ ಓಲೇಕಾರ ಅವರು ಉಗ್ರರ ಗುಂಡೇಟಿಗೆ ಬಲಿಯಾಗಿರುವ ಮಾಹಿತಿ ತಿಳಿದುಬಂದಿತ್ತು. ಇದೀಗ ಆ ಸಾವು ಆತ್ಮಹತ್ಯೆಯಿಂದ ಸಂಭವಿಸಿದ್ದು ಎನ್ನಲಾಗಿದೆ.
ಮಂಜುನಾಥ ಅವರು ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸೇನಾ ಮೂಲಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ. ಈವರೆಗೂ ಮಂಜುನಾಥ ಅವರು ಉಗ್ರರ ದಾಳಿಯಲ್ಲಿ ಬಲಿಯಾಗಿದ್ದಾರೆ ಎಂದೇ ಎಲ್ಲರೂ ನಂಬಿದ್ದರು. ಆದರೆ ಸೇನೆ ಇಂದು ಜಿಲ್ಲಾಡಳಿತಕ್ಕೆ ಮಂಜುನಾಥ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದೆ.
ಮೃತ ಯೋಧನ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಸೇನಾ ಹೆಲಿಕಾಪ್ಟರ್ ಮೂಲಕ ಇಂದು ಬೆಳಗಿನ ಜಾವ ಹುಬ್ಬಳ್ಳಿಗೆ ತಲುಪಿಸಲಾಯಿತು. ವಾಹನದ ಮೂಲಕ ಸ್ವಗ್ರಾಮವಾದ ಹುಬ್ಬಳ್ಳಿಯ ಇನಾಮ್ ವೀರಾಪುರ ಗ್ರಾಮಕ್ಕೆ ತರಲಾಯಿತು. ಗ್ರಾಮದಲ್ಲಿ ಸಾವಿರಾರು ಜನ ಯೋಧನ ಅಂತಿಮ ದರ್ಶನ ಪಡೆದರು.

ಇತ್ತ ಜಿಲ್ಲಾಡಳಿತದಿಂದ ಅಂತ್ಯ ಸಂಸ್ಕಾರಕ್ಕೆ ಎಲ್ಲ ನೆರವು ನೀಡಲಾಗಿತ್ತು. ಆದರೆ ಯೋಧ ಆತ್ಮಹತ್ಯೆ ಮಾಡಿಕೊಂಡ ಕಾರಣ ಯಾವುದೇ ಸರ್ಕಾರಿ ಗೌರವವನ್ನು ನೀಡುವುದಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಕಾರಣ ಖಾಸಗಿಯಾಗಿ ಅಂತ್ಯಸಂಸ್ಕಾರ ನಡೆಸಲಾಯಿತು. ಆದರೆ ಮನೆಯವರು ಮಂಜುನಾಥನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಯಾವುದೇ ಸಮಸ್ಯೆ ಇರಲಿಲ್ಲ ಎನ್ನುತ್ತಾರೆ. ಮಂಜುನಾಥ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮಾತ್ರ ನಿಗೂಢವಾಗಿದೆ.












Click it and Unblock the Notifications