ಸ್ಥಳಾಂತರಗೊಂಡ ಬಾರ್ಗಳಿಂದ ಜಮೀನುಗಳಲ್ಲಿ ಅಕ್ರಮ ಮದ್ಯ ಮಾರಾಟ
ಹುಬ್ಬಳ್ಳಿ, ಜುಲೈ 3: ಸುಪ್ರೀಂ ಕೋರ್ಟ್ ಆದೇಶದಿಂದ ನಿರಾಶ್ರಿತರಾಗಿರುವ ಬಾರ್ ಮಾಲೀಕರು ಪರಿಹಾರಕ್ಕಾಗಿ ಅಡ್ಡ ಹಾದಿ ಹಿಡಿದಿದ್ದಾರೆ. ಹೆದ್ದಾರಿಯಿಂದ ಅರ್ಧ ಕಿ.ಮೀ ದೂರದಲ್ಲಿರುವ ಜಮೀನನಲ್ಲಿ ಅಕ್ರಮವಾಗಿ ಬಾರ್ಗಳನ್ನು ಆರಂಭಿಸಿರುವ ಕೆಲ ಬಾರ್ ಮಾಲೀಕರು ನಿಯಮ ಬಾಹಿರವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದಾರೆ.
ಹೆದ್ದಾರಿಯಿಂದ 500 ಮೀಟರ್ ದೂರಕ್ಕೆ ಈಗಿರುವ ಬಾರ್ಗಳನ್ನು ಸ್ಥಳಾಂತರಿಸಬೇಕು ಎಂಬ ನ್ಯಾಯಾಲಯದ ಆದೇಶದಿಂದ ಕಂಗೆಟ್ಟಿರುವ ಬಾರ್ ಮಾಲೀಕರು ಈ ಆದೇಶ ಪಾಲಿಸಲು ಹೋಗಿ ಈಗ ಮತ್ತೊಂದು ಅಕ್ರಮಕ್ಕೆ ನಾಂದಿ ಹಾಡಿದ್ದಾರೆ.
ಇಲ್ಲಿನ ನೇಕಾರ ನಗರದಲ್ಲಿನ ಬಾರ್ವೊಂದು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜೂನ್ 30ರಂದು ಸ್ಥಗಿತಗೊಂಡಿತ್ತು. ಆದರೆ, ಸೋಮವಾರ ಇದ್ದಕ್ಕಿದ್ದಂತೆ ಪಕ್ಕದಲ್ಲಿರುವ ಜಮೀನಿನಲ್ಲಿ ನಿರ್ಮಾಣವಾದ ತಾತ್ಕಾಲಿಕ ಶೆಡ್ನಲ್ಲಿ ಮದ್ಯ ಮಾರಾಟ ಮಾಡಲು ಆರಂಭಿಸಿದೆ.
ಇದರಿಂದ ಆಕ್ರೋಶಗೊಂಡ ಸ್ಥಳೀಯರು ಅಕ್ರಮವಾಗಿ ಜಮೀನಿನಲ್ಲಿ ನಡೆಯುತ್ತಿರುವ ಬಾರ್ನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ನವನಗರದಲ್ಲಿರುವ ಅಬಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಜಮಾವಣೆಯಾದ ಸ್ಥಳೀಯರು ಅಕ್ರಮವಾಗಿ ಜಮೀನಿನಲ್ಲಿ ಮದ್ಯ ಮಾರಾಟಕ್ಕೆ ಮುಂದಾಗಿರುವ ಬಾರ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ನೋಡಿಯೂ ನೋಡದಂತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಕ್ಕದಲ್ಲಿಯೇ ಬುದ್ದಿಮಾಂದ್ಯ ಮಕ್ಕಳ ಶಾಲೆ ಇದೆ. ಅಲ್ಲದೆ ಪಕ್ಕದ ಜಮೀನುಗಳಲ್ಲಿ ಮದ್ಯದ ಬಾಟಲಿಗಳನ್ನು ಎಸೆಯಲಾಗುತ್ತಿದ್ದು, ಇಲ್ಲಿನ ವಾತಾವರಣವನ್ನು ಹಾಳು ಮಾಡಲಾಗುತ್ತಿದೆ. ಕೂಡಲೇ ಈ ಬಾರನ್ನು ಬಂದ್ ಮಾಡಬೇಕು ಎಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಅಬಕಾರಿ ಅಧಿಕಾರಿಗಳು ಜಮೀನಿನ ಶೆಡ್ನಲ್ಲಿ ಮದ್ಯ ಮಾರಾಟ ಮಾಡಬಾರದು ಎಂದು ಬಾರ್ ಮಾಲೀಕರಿಗೆ ಸೂಚಿಸದ್ದರಿಂದ ಸ್ಥಳೀಯರು ಪ್ರತಿಭಟನೆ ಹಿಂಪಡೆದರು.