ನೇಹಾ ಆತ್ಮಕ್ಕೆ ನೀವೇ ಶಾಂತಿ ಕೊಡಿಸಬೇಕು, ನಿಮ್ಮಿಂದ ಸಾಧ್ಯ: ಪ್ರಹ್ಲಾದ್ ಜೋಶಿ ಬಳಿ ತಂದೆ ನಿರಂಜನ್ ಮನವಿ
ಹುಬ್ಬಳ್ಳಿ, ಏಪ್ರಿಲ್ 20: ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಘಟನೆ ರಾಜ್ಯವೇ ಮಮ್ಮಲ ಮರಗುವಂತೆ ಮಾಡಿದೆ. ನೇಹಾ ಆತ್ಮಕ್ಕೆ ನೀವೇ ಶಾಂತಿ ಕೊಡಿಸಬೇಕು. ಇದು ಬೇರೆಯವರ ಕೈಯಿಂದ ಸಾಧ್ಯವಿಲ್ಲ ಎಂದು ಸ್ವತಃ ತಂದೆ ನಿರಂಜನ್ ಹಿರೇಮಠ ಅವರು ಪ್ರಹ್ಲಾದ್ ಜೋಶಿಯವರ ಬಳಿ ಮನವಿ ಮಾಡಿದರು.
ಹುಬ್ಬಳ್ಳಿ ಕೊಲೆಯ ಆರೋಪಿಗೆ ತಕ್ಕ ಶಿಕ್ಷೆ ಕೊಡಿಸುವಂತೆ ರಾಜ್ಯದೆಲ್ಲಡೆ ಆಗ್ರಹ ಹೆಚ್ಚಾಗಿದೆ. ಈ ಸಂಬಂಧ ಘಟನೆ ದಿನ ನೇಹಾ ನಿವಾಸಕ್ಕೆ ಭೇಟಿ ಮಾಡಿದ ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರು ನಿರಂಜನ್ ಹಿರೇಮಠ ಅವರಿಗೆ ಸಾಂತ್ವನ ಹೇಳಿದರು.

ಕೇಂದ್ರ ಸಚಿರ ಜೊತೆ ಮಾತನಾಡಿದ ನೇಹಾ ತಂದೆ ಕಾಂಗ್ರೆಸ್ ಕಾರ್ಪೋರೇಟ್ ನಿರಂಜನ್ ಹಿರೇಮಠ ಅವರು, ನೇಹಾ ಆತ್ಮಕ್ಕೆ ಶಾಂತಿ ನೀವೇ ಕೊಡಿಸಬೇಕು. ಇದು ಬೇರೆ ಯಾರ ಕೈಯಲ್ಲೂ ಆಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಲ್ಲಿ ಮನವಿ ಮಾಡಿದರು.
ಮಗಳನ್ನು ಕೊಲೆ ಮಾಡಿದ ಆರೋಪಿ ಪರ ಯಾರೂ ವಕಾಲತ್ತು ವಹಿಸಬಾರದು. ಆತನಿಗೆ ಗಲ್ಲು ಶಿಕ್ಷೆ ಆಗೋವರೆಗೂ ನಮ್ಮ ಜೊತೆಯಲ್ಲಿರಬೇಕು. ಪ್ರಕರಣ ಕುರಿತು ಯಾವುದೇ ಊಹಾಪೋಹ ಬೇಡ, ನಾನು ನೇರವಾಗಿಯೇ ನಿಮ್ಮ ಬಳಿ ಮನವಿ ಮಾಡುತ್ತಿದ್ದೇನೆ. ನೀವು ನಮ್ಮ ಕುಟುಂಬಕ್ಕೆ ಸೂಕ್ತ ನ್ಯಾಯದೊರಕಿಸಿಕೊಡುತ್ತೀರಿ ಎಂದು ನಂಬಿದ್ದೇನೆ ಎಂದು ನಿರಂಜನ್ ಹಿರೇಮಠ ಅವರು ಜೋಶಿಯವರಲ್ಲಿ ಮನವಿ ಮಾಡಿದರು.

ಇಂತಹ ಘಟನೆಗಳಿಗೆ ಸರ್ಕಾರವೇ ಹೊಣೆ
ನೇಹಾ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಪ್ರಹ್ಲಾದ್ ಜೋಶಿಯವರು, ಲವ್ ಜಿಹಾದ್ ಹಿನ್ನೆಲೆಯಲ್ಲಿ ಯುವತಿಯನ್ನು ಹತ್ಯೆ ಮಾಡಲಾಗಿದೆ ಎಂದನಿಸುತ್ತದೆ. ಇದೇ ಆಯಾಮದಲ್ಲಿ ಪ್ರಕರಣದ ತನಿಖೆ ನಡೆಸಬೇಕು. ಇಂದಿನ ಘಟನೆ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣ ಫಲವಾಗಿದೆ ಎಂದು ಅವರು ದೂರಿದರು.
ಕಾಂಗ್ರೆಸ್ ಸರ್ಕಾರ ಕೇವಲ ಒಂದು ಸಮುದಾಯವನ್ನು ಓಲೈಸಲು ಮಾಡುತ್ತಿರುವ ಪ್ರಯತ್ನದ ಫಲವೇ ಈ ಕೊಲೆ. ಸರ್ಕಾರದ ದುರಾಡಳಿತದಿಂದ ಕರ್ನಾಟಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇದಕ್ಕೆಲ್ಲ ಸರ್ಕಾರವೇ ನೆರ ಹೋಣೆ ಎಂದು ಅವರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಈ ರೀತಿಯ ಘಟನೆಗಳು ಆಗುತ್ತಿವೆ. ನೇಹಾ ಪ್ರಕರಣದಲ್ಲಿ ಆರೋಪಿಗೆ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಜರುಗಿಸಬೇಕು. ಈ ಮೂಲಕ ಮುಂದಿನ ಇಂಥ ಘಟನೆಗಳು ನಡೆಯದಂತೆ ಸರ್ಕಾರ, ಪೊಲೀಸ್ ಎಚ್ಚರ ವಹಿಸಬೇಕು. ಸದ್ಯ ಸಮಾಜದಲ್ಲಿ ಎಂತಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಆರೋಪಿ ಪರ ವಕಾಲತ್ತು ಬೇಡ: ಜೋಶಿ ಮನವಿ
ಮುಸಲ್ಮಾನರ ರಂಜಾನ್ ಹಬ್ಬದ ವೇಳೆ ಕೆಲವು ಮುಸ್ಲಿಂ ಯುವಕರು ದುರ್ವರ್ತನೆ ಪ್ರದರ್ಶಿಸಿದ್ದರು. ಕಾಂಗ್ರೆಸ್ ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿ, ಹಳೆ ಹುಬ್ಬಳ್ಳಿ ಘಟನೆಗಳಲ್ಲಿ ಮೃಧು ಧೋರಣೆ ಅನುಸರಿಸಿತ್ತು. ನಂತರ ಏನಾಯಿತೆಂದು ಗೊತ್ತಿದೆ. ಈ ಪ್ರಕರಣದಲ್ಲಿ ಆರೋಪಿ ಪರ ಯಾರೂ ವಕಾಲತ್ತು ವಹಿಸಬಾರದು ಎಂದು ಜೋಶಿಯವರು ಮನವಿ ಮಾಡಿದರು.
ಪ್ರಕರಣವನ್ನು ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. ಕಾಂಗ್ರೆಸ್ ಇನ್ಮುಂದಾದರೂ ಓಲೈಕೆ, ತುಷ್ಟೀಕರಣ ರಾಜಕಾರಣ ಮಾಡುವುದನ್ನು ಬಿಡಬೇಕು. ನಿಮ್ಮಿಂದಲೇ ಸಮಾಜಘಾತುಕರಿಗೆ ಭಯ ಇಲ್ಲದಂತಾಗಿದೆ ಎಂದು ಅವರು ಆಗ್ರಹಿಸಿದರು.
ವಿವಿಧೆಡೆ ಪ್ರತಿಭಟನೆ: ಸರ್ಕಾರದ ವಿರುದ್ಧ ಆಕ್ರೋಶ
ಸದ್ಯ ನೇಹಾ ಕೊಲೆ ಪ್ರಕರಣ ಸಂಬಂಧ ರಾಜ್ಯಾದ್ಯಂತ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ವಿವಿಧ ಸಂಘಟನೆಗಳಿಂದ ಹುಬ್ಬಳ್ಳಿಯಲ್ಲಿ ಹೋರಾಟ ನಡೆದಿದೆ. ಜಯಕರ್ನಾಟಕ ಸಂಘಟನೆ ನಾಯಕರು ಚನ್ನಮ್ಮ ವೃತ್ತದಿಂದ ಬಿವಿಬಿ ಕಾಲೇಜುವರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಚಪ್ಪಲಿ ತೋರಿಸಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕರು ಘಟನೆಯನ್ನು ಖಂಡಿಸಿದ್ದಾರೆ. ಸಮಜಾದಲ್ಲಿನ ಶಾಂತಿ, ಸುವ್ಯವಸ್ಥೆ ಕುರಿತು ಪ್ರಶ್ನೆ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ಆಡಳಿತದಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಅವರೆಲ್ಲ ದೂರಿದ್ದಾರೆ.












Click it and Unblock the Notifications