ಉಕ್ಕು ಮತ್ತು ಗಣಿ ಮಿತ್ತಲ್ ಕಂಪೆನಿಗೆ ಹುಬ್ಬಳ್ಳಿಯ ಅಶೋಕ ಪಾಟೀಲ್ ಸಿಇಒ
ಹುಬ್ಬಳ್ಳಿ, ಮೇ 05 : ವಿಶ್ವದ ಪ್ರತಿಷ್ಠಿತ ಉಕ್ಕು ಮತ್ತು ಗಣಿ ಕಂಪೆನಿ ಆರ್ಸೆಲರ್ ಮಿತ್ತಲ್ ನ ಜೆಕ್ ಗಣರಾಜ್ಯದ ಓಸ್ತ್ರಾವ ಘಟಕದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ಹುಬ್ಬಳ್ಳಿ ಮೂಲದ ಅಶೋಕ ಪಾಟೀಲ್ ನೇಮಕಗೊಂಡಿದ್ದಾರೆ.
ಓಸ್ತ್ರಾವ ಘಟಕದ ನಿರ್ದೇಶಕ ಮಂಡಳಿಯ ಸದಸ್ಯ ಹಾಗೂ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ ಪಾಟೀಲ್ ಅವರಿಗೆ ಕಳೆದ ಸೋಮವಾರ ಸಿಇಓ ಆಗಿ ಬಡ್ತಿ ಸಿಕ್ಕಿದೆ.
ಹುಬ್ಬಳ್ಳಿಯಲ್ಲಿಯೇ ಹುಟ್ಟಿ ಬೆಳೆದಿರುವ ಅಶೋಕ, ಇಲ್ಲಿನ ರೋಟರಿ ಸ್ಕೂಲ್ನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದಿದ್ದಾರೆ. ಬಿ.ವಿ.ಬಿ ಕಾಲೇಜಿನಲ್ಲಿ ಓದಿರುವ ಅವರು, ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ.
ನಂತರ, ಮಣಿಪಾಲದಲ್ಲಿ ಹಣಕಾಸು ಮತ್ತು ಮಾರುಕಟ್ಟೆ ವಿಷಯದಲ್ಲಿ ಎಂ.ಬಿ.ಎ ಪದವಿ ಪಡೆದಿದ್ದಾರೆ. ಬಳಿಕ 2001ರಲ್ಲಿ ಆರ್ಸೆಲರ್ ಮಿತ್ತಲ್ ಕಂಪೆನಿ ಸೇರಿರುವ ಅಶೋಕ ಪಾಟೀಲ್, ಬೆಂಗಳೂರು, ದೆಹಲಿ, ಮುಂಬೈ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ.
ರೊಮಾನಿಯ ಘಟಕದ ಹಣಕಾಸು ವ್ಯವಸ್ಥಾಪಕರಾಗಿ, ಕಂಪೆನಿಯ ಆಂತರಿಕ ವ್ಯವಹಾರಗಳ ಮುಖ್ಯಸ್ಥರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.