ವಿಮೆ ಹಣದ ಕೊಲೆ ರಹಸ್ಯ ಬಯಲು ಮಾಡಿದ ಜೈ ಶ್ರೀರಾಮ್ ಹಚ್ಚೆ!
ಹುಬ್ಬಳ್ಳಿ, ಅಕ್ಟೋಬರ್ 11 : 50 ಲಕ್ಷ ವಿಮೆ ಹಣದ ಆಸೆಗಾಗಿ ವ್ಯಕ್ತಿಯನ್ನು ಕೊಲೆ ಮಾಡಿ ತಾನೇ ಸತ್ತು ಹೋಗಿದ್ದೇನೆ ಎಂದು ನಾಟಕವಾಡಿದ ಪ್ರಕರಣ ಬಯಲಾಗಿದೆ. ಆರೋಪಿಗಳು ತಲೆಮರಿಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಈ ಪ್ರಕರಣದ ಆರೋಪಿ ಗೋಕುಲ ಗ್ರಾಮದ ನಿವಾಸಿ ಸಂಜೀವ ಕುಮಾರ ಬೆಂಗೇರಿ. ಸ್ನೇಹಿತ ಮಹಾಂತೇಶ ದುಗ್ಗಾಟಿ ಜೊತೆ ಸೇರಿ ಮಂಗಳವಾರ ರಾತ್ರಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ. ತಾನೇ ಸುತ್ತು ಹೋಗಿದ್ದಾನೆ ಎಂದು ನಂಬಿಸಿ ಎಚ್ಡಿಎಫ್ಸಿ ಬ್ಯಾಂಕ್ನ 50 ಲಕ್ಷ ವಿಮೆ ಪಡೆಯಲು ಸಂಚು ರೂಪಿಸಿದ್ದ.
ಕೊಲೆ ಮಾಡಿದ ವ್ಯಕ್ತಿಯ ಶವಕ್ಕೆ ತನ್ನ ಪ್ಯಾಂಟ್, ಶರ್ಟ್ ತೊಡಿಸಿದ್ದ. ಶವವನ್ನು ಗೋಕುಲ ರಸ್ತೆಯ ರೇವಡಿಹಾಳ ಸೇತುವೆ ಬಳಿ ಹಾಕಿದ್ದ. ತನ್ನ ಬೈಕ್ ಮತ್ತು ಚಪ್ಪಲಿಯನ್ನು ಅಲ್ಲಿ ಹಾಕಿದ್ದ. ಶವದ ಗುರುತು ಸಿಗಬಾರದು ಎಂದು ಮುಖವನ್ನು ಕಲ್ಲಿನಿಂದ ಜಜ್ಜಿದ್ದ.

ಆರೋಪಿ ಸಂಜೀವ ಸಹೋದರ ಮಂಜು ಬೆಂಗೇರಿ ನನ್ನ ತಮ್ಮ ಅಪಘಾತದಲ್ಲಿ ಸತ್ತಿಲ್ಲ, ಯಾರೋ ಕೊಲೆ ಮಾಡಿದ್ದಾರೆ ಎಂದು ಗೋಕುಲ ಠಾಣೆಗೆ ದೂರು ನೀಡಿದ್ದರು. ಶವವನ್ನು ಪರಿಶೀಲನೆ ನಡೆಸಿದ್ದ ಪೊಲೀಸರು ಇದು ಅಪಘಾತವಲ್ಲ ಕೊಲೆ ಎಂದು ಶಂಕಿಸಿದ್ದರು.
ಬುಧವಾರ ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಸ್ಥಳಕ್ಕೆ ಬಂದಿದ್ದ ಮಂಜು ಬೆಂಗೇರಿ ಇದು ನನ್ನ ಸಹೋದರನ ಶವವಲ್ಲ. ಅವರ ಕೈ ಮೇಲೆ ಜೈ ಶ್ರೀರಾಮ್ ಎಂಬ ಹಚ್ಚೆ ಇತ್ತು ಎಂದು ಹೇಳಿದ್ದರು. ಪರಿಶೀಲನೆ ನಡೆಸಿದಾಗ ಶವ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ವ್ಯಕ್ತಿಯದ್ದಾಗಿತ್ತು.
ಗೋಕುಲ ಠಾಣೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಹತ್ಯೆ ಪ್ರಕರಣದ ಆರೋಪಿಗಳಾದ ಸಂಜೀವ ಕುಮಾರ ಬೆಂಗೇರಿ ಮತ್ತು ಮಹಾಂತೇಶ ದುಗ್ಗಾಟಿ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.












Click it and Unblock the Notifications