ಗೋವಾ ಕನ್ನಡಿಗರ ಮನೆ ತೆರವು: ಹುಬ್ಬಳ್ಳಿಯಲ್ಲಿ ವಿನೂತನ ಪ್ರತಿಭಟನೆ
ಹುಬ್ಬಳ್ಳಿ, ಅಕ್ಟೋಬರ್ 3: "ಗೋವಾ ರಾಜ್ಯ ನಮಗೆ ಎಷ್ಟೇ ಕೆಟ್ಟದ್ದನ್ನು ಮಾಡಿದರೂ, ನಾವು ಒಳ್ಳೆಯದನ್ನೇ ಮಾಡುತ್ತೇವೆ" ಕನ್ನಡಿಗರ ಮನೆಗಳನ್ನು ತೆರವು ಮಾಡಿದ ಗೋವಾ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳ ವಿನೂತನ ಪ್ರತಿಭಟನೆ ಇದು. ಗೋವಾ ರಾಜ್ಯದ ವಾಸ್ಕೋದಲ್ಲಿರುವ ಬೈನಾ ಕಡಲ ತೀರದಂಚಿನಲ್ಲಿ ವಾಸಿಸುತ್ತಿದ್ದ ಕನ್ನಡಿಗರ ಮನೆಗಳನ್ನು ತೆರವು ಮಾಡಿದರ ಪ್ರತಿಫಲವಾಗಿ ಗೋವಾ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಈ ರೀತಿ ಪ್ರತಿಭಟನೆ ಆರಂಭಿಸಿದ್ದಾರೆ.
ಸುಮಾರು 40 ವರ್ಷಗಳ ಹಿಂದೆ ಉತ್ತರ ಕರ್ನಾಟಕ ಭಾಗದ ಸಾವಿರಾರು ಕನ್ನಡಿಗರು ಬದುಕು ಕಟ್ಟಿಕೊಳ್ಳಲು ಗೋವಾ ರಾಜ್ಯಕ್ಕೆ ವಲಸೆಹೋಗಿ, ಇಲ್ಲಿನ ವಾಸ್ಕೋದ ಬೈನಾ ಕಡಲತೀರದ ಬಳಿ ಮನೆ ನಿರ್ಮಿಸಿಕೊಂಡು ವಾಸ್ತವ್ಯ ಹೂಡಿದ್ದರು. ಆದ್ರೆ ಅಲ್ಲಿನ ಸರ್ಕಾರ ಓಟ್ ಬ್ಯಾಂಕ್ ಗಾಗಿ ಎಲ್ಲಿನ ಕನ್ನಡಿಗರ ಮನೆಯನ್ನು ನೆಲಸಮ ಮಾಡಿ 55 ಕ್ಕೂ ಹೆಚ್ಚು ಕುಟುಂಬಗಳನ್ನು ನಡು ರಸ್ತೆಯಲ್ಲಿ ನಿಲ್ಲಿಸಿತ್ತು.
ಇದೀಗ ಗೋವಾ ಸರ್ಕಾರ ಕನ್ನಡಿಗರ ಮನೆಗಳನ್ನು ತೆರವು ಮಾಡಿರುವುದಕ್ಕೆ ನಾಚಿಕೆ ಪಡುವ ರೀತಿಯಲ್ಲಿ ಕನ್ನಡಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯ ಕರ್ನಾಟಕ ಸಂಗ್ರಾಮ ಸೇನಾ ಕಾರ್ಯಕರ್ತರು ಈ ವಿನೂತನ ಕಾರ್ಯ ಮಾಡಿದ್ದಾರೆ. ಅಕ್ಟೋಬರ್ 3 ರ ರಾತ್ರಿ ಹತ್ತು ಘಂಟೆಯ ಸುಮಾರಿಗೆ ಗೋವಾ ರಾಜ್ಯದ ಸಾರಿಗೆ ಬಸ್ಸೊಂದು ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಿಂದ ವಾಸ್ಕೋಗೆ ತೆರಳಬೇಕಿತ್ತು.
ರಾತ್ರಿ 9.30 ರ ಸುಮಾರಿಗೆ ಗೋವಾ ಸಾರಿಗೆ ಸಂಸ್ಥೆಯ ಬಸ್ ಚಾಲಕರಾದ ಕಿರಣ್ ಕನಗಿ ಮತ್ತು ಕಂಡಕ್ಟರ ಚಂದ್ರು ಎಂಬುವರಿಗೆ ಶಾಲು ಹೊದಿಸಿ ಹೂಗುಚ್ಛ ನೀಡಿ ಸನ್ಮಾನ ಮಾಡಿ, ಕನ್ನಡಿಗರ ಮನೆ ನೆಲಸಮ ಮಾಡಿದರೂ, ನಿಮ್ಮ ಜೊತೆಯಲ್ಲಿ ಸ್ನೇಹದಿಂದ ನಡೆದುಕೊಳ್ಳುವ ಮನೋಭಾವ ಕನ್ನಿಡಿಗರದ್ದು ಎನ್ನುವ ಸಂದೇಶವನ್ನು ಈ ಮೂಲಕ ರವಾನಿಸಲಾಗಿದೆ.












Click it and Unblock the Notifications