ವಾಣಿಜ್ಯ ನಗರಿ ಹುಬ್ಬಳ್ಳಿ ಜನರ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದೇನು?
ಹುಬ್ಬಳ್ಳಿ, ಸೆಪ್ಟೆಂಬರ್, 26: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಆತ್ಮನಿರ್ಭರ ಭಾರತಕ್ಕೆ ನಾವೆಲ್ಲ ಸಂಕಲ್ಪ ಮಾಡೋಣ. ಒಡಿಶಾದ ಸಾಮಾನ್ಯ ಕುಟುಂಬದಿಂದ ಬಂದಿರುವ ಮಹಿಳೆಯನ್ನು ಗೌರವಿಸುವ ಮೂಲಕ ಹುಬ್ಬಳ್ಳಿ ಧಾರವಾಡದ ಜನತೆ ದೇಶದ ಸಮಸ್ತ ಮಹಿಳೆಯರನ್ನು ಗೌರವಿಸಿದ್ದಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯು ಇಲ್ಲಿನ ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ರಾಷ್ಟ್ರಪತಿಯವರಿಗೆ ಪೌರಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಪೌರಸನ್ಮಾನ ಸ್ವೀಕರಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಹುಬ್ಬಳ್ಳಿ ಧಾರವಾಡ ಅವಳಿ ನಗರಗಳು ಕರ್ನಾಟಕ ಮಾತ್ರವಲ್ಲ, ಸಮಗ್ರ ಭಾರತದ ಸಾಂಸ್ಕೃತಿಕ, ಐತಿಹಾಸಿಕ ನಗರಗಳಾಗಿವೆ. ಉತ್ತರ ಕರ್ನಾಟಕದ ಈ ನಗರಗಳಲ್ಲಿ ಕನ್ನಡ, ಮರಾಠಿ ಭಾಷೆಗಳ ಅದ್ಭುತ ಸಂಗಮವಿದೆ. ಆಧ್ಯಾತ್ಮ, ಸಾಂಸ್ಕೃತಿಕ, ಶೈಕ್ಷಣಿಕ ಮಾತ್ರವಲ್ಲ. ಆಧುನಿಕವಾಗಿಯೂ ಈ ನಗರಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ. ಉತ್ತರ ಕರ್ನಾಟಕವು ಸಾಂಸ್ಕೃತಿಕ, ಅಧ್ಯಾತ್ಮಿಕತೆ, ಶೈಕ್ಷಣಿಕ ಸಾಧನೆ ಹಾಗೂ ಆಧುನಿಕ ಸೌಲಭ್ಯಗಳಿಂದ ದೇಶದಲ್ಲಿ ಹೆಸರುವಾಸಿಯಾಗಿದೆ ಎಂದರು.
ಹುಬ್ಬಳ್ಳಿಯಲ್ಲಿ ರಾಷ್ಟ್ರಪತಿ ಕಾರ್ಯಕ್ರಮ; ಶೆಟ್ಟರ್ಗೆ ಕೊನೆಗೂ ಸಿಕ್ಕಿತು ವೇದಿಕೆ ಅವಕಾಶ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಬಹಳ ವರ್ಷಗಳ ನಂತರ ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ದೇಶದ ರಾಷ್ಟ್ರಪತಿಯವರು ಆಗಮಿಸಿರುವುದು ಸಂತಸ ತಂದಿದೆ. ಧಾರವಾಡ ಜಿಲ್ಲೆಯ ಇತಿಹಾಸ ಐದನೇ ಶತಮಾನದಿಂದ ಪ್ರಾರಂಭವಾಗುತ್ತದೆ. ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರ ಅರಸರ ಆಳ್ವಿಕೆಗೆ ಈ ಪ್ರದೇಶ ಒಳಪಟ್ಟಿತ್ತು. ಸ್ವಾತಂತ್ರ್ಯ ಚಳುವಳಿಗೂ ಈ ಜಿಲ್ಲೆ ಗಮನಾರ್ಹ ಕೊಡುಗೆ ನೀಡಿದೆ. ಸಂಗೀತ, ಸಾಹಿತ್ಯಕ್ಕೆ ಈ ಭಾಗದ ಕೊಡುಗೆ ಮಹತ್ವವಾದದ್ದಾಗಿದೆ. ಭಾರತರತ್ನ ಪಂಡಿತ ಭೀಮಸೇನ ಜೋಷಿ, ಮಲ್ಲಿಕಾರ್ಜುನ ಮನಸೂರ ಸೇರಿದಂತೆ ಮತ್ತಿತರ ಮೇಧಾವಿ ಸಂಗೀತಗಾರರು ಇಲ್ಲಿಂದ ಹೊರಹೊಮ್ಮಿದ್ದಾರೆ ಎಂದರು.

ಮುರ್ಮು ರಾಜಕೀಯಕ್ಕೆ ಕಾಲಿಟ್ಟ ಕ್ಷಣಗಳು
ಕನ್ನಡಕ್ಕೆ ಬಂದಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳಲ್ಲಿ ಜಿಲ್ಲೆ ಬಹುಪಾಲು ಹೊಂದಿದೆ. ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ದ್ರೌಪದಿ ಮುರ್ಮು ಅವರು, ಗ್ರಾಮ ಪಂಚಾಯತಿ ಸದಸ್ಯರಾಗಿ, ಉತ್ತಮ ಶಾಸಕರಾಗಿ, ಸಚಿವರಾಗಿ, ರಾಜ್ಯಪಾಲರಾಗಿ ಇದೀಗ ರಾಷ್ಟ್ರಪತಿಯಾಗಿ ಉನ್ನತ ಹುದ್ದೆಗೆ ಏರಿದ್ದರೂ ಕೂಡ ಸರಳ ನಡತೆಯುಳ್ಳವರಾಗಿದ್ದಾರೆ. ಶೈಕ್ಷಣಿಕ ಕೇಂದ್ರವಾಗಿರುವ ಧಾರವಾಡ ಜಿಲ್ಲೆಗೆ ಐಐಐಟಿ ಉದ್ಘಾಟಿಸಲು ಅವರು ಆಗಮಿಸಿರುವುದು ಹೆಮ್ಮೆಯ ಸಂದರ್ಭವಾಗಿದೆ ಎಂದರು.
ಹುಬ್ಬಳ್ಳಿ: ರಾಷ್ಟ್ರಪತಿ ಕಾರ್ಯಕ್ರಮ ಬಹಿಷ್ಕರಿಸಲು ಕಾಂಗ್ರೆಸ್ ನಿರ್ಧಾರ

ಹು-ಧಾ ಪಾಲಿಕೆಯಿಂದ ಪೌರಸನ್ಮಾನ
ದೇಶದ ರಾಷ್ಟ್ರಪತಿಯಾಗಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಶ್ರೀ ಸಿದ್ಧಾರೂಢರ ಬೆಳ್ಳಿ ಪ್ರತಿಮೆ, ಬಿನ್ನವತ್ತಳೆ, ಯಾಲಕ್ಕಿ ಹಾರ, ಶ್ರೀಸಿದ್ಧಾರೂಢರ ಕುರಿತ ಗ್ರಂಥಗಳು, ಧಾರವಾಡ ಪೇಡಾವನ್ನು ನೀಡಿ ಪೌರಸನ್ಮಾನದ ಮೂಲಕ ಗೌರವಿಸಲಾಯಿತು. ಪೊಲೀಸ್ ವಾದ್ಯವೃಂದ ತಂಡವು ರಾಷ್ಟ್ರಗೀತೆಯನ್ನು ಪ್ರಸ್ತುತಪಡಿಸಿತು. ಇನ್ನು ಅಳ್ನಾವರ ತಾಲೂಕಿನ ಮಡಕಿಕೊಪ್ಪ, ಲಿಂಗನಕೊಪ್ಪ, ಶಿವನಗರ, ಚಂದ್ರಗಿರಿ, ಸಿಂಗನಕೊಪ್ಪದ ಧನಗರ ಗೌಳಿ ಬುಡಕಟ್ಟು, ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಜನಾಂಗದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಿ ಅಭಿಮಾನ ಮೆರೆದರು.

ಜಿಮ್ಖಾನ ಮೈದಾನದಲ್ಲಿ ಕಾರ್ಯಕ್ರಮ
ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತೊಮ್ಮೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ದೇಶಪಾಂಡೆ ನಗರದ ಜಿಮ್ಖಾನ ಕ್ಲಬ್ನ ಮೈದಾನದಲ್ಲಿ ಅದ್ದೂರಿಯಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಕಾರ್ಯಕ್ರಮ ನೇರವೇರಿಸಲಾಯಿತು.

ವಾಣಿಜ್ಯ ನಗರಿ ಬಗ್ಗೆ ಮುರ್ಮು ಹೇಳಿದ್ದೇನು?
ಹುಬ್ಬಳ್ಳಿಯಲ್ಲಿ ಪೌರ ಸನ್ಮಾನ ಸ್ವೀಕರಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾತನಾಡಿದ್ದು, ಧಾರವಾಡ ಜಿಲ್ಲೆ ವಿದ್ಯಾಕಾಶಿ ಎಂದು ಪ್ರಖ್ಯಾತಿ ಹೊಂದಿದೆ. ದ.ರಾ. ಬೇಂದ್ರೆ, ಗೋಕಾಕ್ ರಂತಹ ಮಹಾನ್ ಸಾಹಿತಿಗಳು ಇಲ್ಲಿನವರಾಗಿರುವುದು ತುಂಬಾ ವಿಶೇಷವಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿಮ್ಮ ನಡುವೆ ಹುಟ್ಟಿ ಬೆಳೆದ ಪುಣ್ಯ ಭೂಮಿ ಇದು. ಇಂತಹ ಉತ್ತಮ ನಾಯಕರನ್ನು ನೀವು ನಾಡಿಗೆ ಕೊಟ್ಟಿದ್ದೀರಿ. ಇಡೀ ದೇಶ ಬಸವೇಶ್ವರರ ಸಾಮಾಜಿಕ ಶಿಕ್ಷಣ, ಸಿದ್ಧಾರೂಢರ ಆಧ್ಯಾತ್ಮಿಕ ಸಂದೇಶದಿಂದ ಪ್ರೇರಿತವಾಗಿದೆ ಎಂದರು.
ಇನ್ನು ಗಂಗೂಬಾಯಿ ಹಾನಗಲ್, ಬಸವರಾಜ್ ರಾಜಗುರು ಅವರು ಹಿಂದೂಸ್ತಾನಿ ಸಂಗೀತಕ್ಕೆ ಹೊಸ ಆಯಾಮ ಕೊಟ್ಟಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ್ದಾರೆ. ಅವಳಿ ನಗರದಕ್ಕೆ ಆಗಮಿಸಿದ ನನಗೆ ತುಂಬಾ ಸಂತೋಷವಾಗಿದೆ. ಭಾರತದ ಗೌರವಾನ್ವಿತ ಅವಳಿ ನಗರ ಹುಬ್ಬಳ್ಳಿ- ಧಾರವಾಡ ಎಂದು ಬಣ್ಣಿಸಿದರು. ಐತಿಹಾಸಿಕ ನಗರದ ಭಾಗವಾಗಿರುವ ನಿಮಗೆಲ್ಲ ನನ್ನ ಶುಭಾಶಯಗಳು ಎಂದು ಹೇಳಿದರು.
ಕನ್ನಡ, ಮರಾಠಿ ಭಾಷೆಗಳ ಅತ್ಯುತ್ತಮ ಸಂಗಮ ಇಲ್ಲಿದೆ. ಎಲ್ಲಾ ಜಾತಿ, ಧರ್ಮದ ಜನರು ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದೀರಿ. ಎರಡನೇ ರಾಷ್ಟ್ರಪತಿ ರಾಧಾಕೃಷ್ಣನ್ ಅವರು ಇಲ್ಲಿಗೆ ಆಗಮಿಸಿದ್ದರು. ಇಲ್ಲಿಗೆ ಆಗಮಿಸಿದ್ದು, ನನಗೆ ಗೌರವದ ಭಾವನೆ ಬರುತ್ತಿದೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಆಭಾರಿಯಾಗಿದ್ದೇನೆ ಎಂದು ರಾಷ್ಟ್ರಪತಿ ಅವರು ಸಂತಸ ವ್ಯಕ್ತಪಡಿಸಿದರು. ಪೌರ ಸನ್ಮಾನ ಮಾಡಿ ಕೇವಲ ಒಡಿಸ್ಸಾದ ಬಡ ಕುಟುಂಬದ ಹೆಣ್ಣುಮಗಳನ್ನು ಸನ್ಮಾನಿಸಿಲ್ಲ. ಭಾರತದ ಎಲ್ಲಾ ಹೆಣ್ಣುಮಕ್ಕಳನ್ನು ಗೌರವಿಸಿದ್ದೀರಿ. ನಿಮಗೆಲ್ಲಾ ಧನ್ಯವಾದಗಳು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.