ಕಾಂಗ್ರೆಸ್ನಿಂದಲೇ 'ನೇಹಾ ಕೊಲೆ' ತನಿಖೆ ದಾರಿ ತಪ್ಪಿಸಲು ಯತ್ನ: ತಂದೆಯನ್ನೇ ಕೊಲ್ಲಲು ಹೋಗಿದ್ದ ಫಯಾಜ್: ನಿರಂಜನ್ ಹಿರೇಮಠ
ಹುಬ್ಬಳ್ಳಿ, ಏಪ್ರಿಲ್ 20: ಮಗಳು ನೇಹಾಳನ್ನು ಕಳೆದುಕೊಂಡಿರುವ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ್ ಹಿರೇಮಠ ಅವರು ಕಾಂಗ್ರೆಸ್ ಸರ್ಕಾರ ಮತ್ತು ಸ್ವಪಕ್ಷದ ನಾಯಕರ ವಿರುದ್ಧ ಆಕ್ರೋಶ ಮತ್ತು ಅಸಮಾಧಾನ ಹೊರ ಹಾಕಿದ್ದಾರೆ.
ಹೌದು, ನನ್ನ ಮಗಳು ನೇಹಾಳ ಹತ್ಯೆ ಪ್ರಕರಣದ ತನಿಖೆಯ ದಾರಿ ತಪ್ಪಿಸುವ ಕೆಲಸ ಆಡಳಿತ ಪಕ್ಷದವರಿಂದಲೇ ನಡೆಯುತ್ತಿದೆ ಎಂದು ಅವರು ತಮ್ಮ ಕಾಂಗ್ರೆಸ್ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಘಟನೆ ನಡೆದ ಮೊದಲ ದಿನ ನನ್ನ ಜೊತೆಗೆ ಇದ್ದವರು, ಇಂದು ನನ್ನ ಬೆನ್ನಿಗೆ ನಿಂತಿಲ್ಲ ಎಂದು ಅವರು ಕಾಂಗ್ರೆಸ್ ನಾಯಕರ ಕುರಿತು ತೀವ್ರ ಬೇಸರ, ಆಕ್ರೋಶ ವ್ಯಕ್ತಪಡಿಸಿದರು.
ತನಿಖೆಯ ದಾರಿ ತಪ್ಪಿಸುವ ಪ್ರಯತ್ನ
ಘಟನೆ ವೈಯಕ್ತಿಕ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಜಿ.ಪರಮೇಶ್ವರ ಅವರು ಇಂದು ವಿಷಾದ ವ್ಯಕ್ತಪಡಿಸಿದ್ದಾರೆ. ಆಡಳಿತ ಪಕ್ಷದಲ್ಲಿ ಇದ್ದವರೇ ಪೋಲಿಸ್ ಆಯುಕ್ತೆ ರೇಣುಕಾ ಸುಕುಮಾರ ಮೂಲಕ ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಸ್ವತಃ ಪಕ್ಷದ ನಾಯಕರು ಆಗಿರುವ ನೇಹಾಳ ತಂದೆ ವಿವರಿಸಿದ್ದಾರೆ.

ಮಗಳು ನೇಹಾ ಹತ್ಯೆಯಲ್ಲಿ ಫಯಾಜ್ ಒಬ್ಬನೇ ಇಲ್ಲ, ಈತನ ಹಿಂದೆ ನಾಲ್ಕು ಜನರಿದ್ದಾರೆ. ಅವರ ಹೆಸರನ್ನು ಪೋಲಿಸರಿಗೆ ಕೊಟ್ಟಿದ್ದೇನೆ. ಪೋಲಿಸರು ಈ ಕುರಿತು ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ನೇಹಾ ಹೆಸರಲ್ಲಿ ನಕಲಿ ಖಾತೆ ಸೃಷ್ಟಿ: ತಂದೆ
ಇನ್ಸ್ಟಾಗ್ರಾಂನಲ್ಲಿ ನನ್ನ ಮಗಳ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ನನ್ನ ಮಗಳ ಬಗ್ಗೆ ಸಮಾಜದಲ್ಲಿ ತಪ್ಪು ತಿಳುವಳಿಕೆ ಬರುವಂತೆ ಮಾಡಿದ್ದಾರೆ. ಆರೋಪಿ ಜೈಲಿನಲ್ಲಿದ್ದರು ಖಾತೆಯನ್ನು ಯಾರು ಸೃಷ್ಟಿ ಮಾಡಿದ್ದಾರೆ ಎಂದು ಪೋಲಿಸರು ತನಿಖೆ ನಡೆಸಬೇಕು.
ಈ ವಿಚಾರ ಕುರಿತು ವಕೀಲರೊಂದಿಗೆ ಮಾತನಾಡಿದ್ದೇನೆ. ಸೈಬರ್ ಪೋಲಿಸರಿಗೆ ಈ ಬಗ್ಗೆ ದೂರು ನೀಡಲಿದ್ದೇನೆ ಎಂದು ಅವರು ತಿಳಿಸಿದರು.
ತಂದೆಯನ್ನೇ ಕೊಲ್ಲಲು ಹೋಗಿದ್ದ ಫಯಾಜ್
ಈ ಹಿಂದೆ ಆರೋಪಿ ಫಯಾಸ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ತಂದೆಯನ್ನೇ ಪೋಲಿಸ್ ಠಾಣೆಯಲ್ಲಿ ಕೊಲೆ ಮಾಡಲು ಹೋಗಿದ್ದ. ಇದನ್ನು ಸಮಾಜದ ಮುಖಂಡರು ನನಗೆ ತಿಳಿಸಿದ್ದಾರೆ. ಪೋಲಿಸರು ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದಾರೆ. ಈ ವಿಷಯ ನನ್ನ ಗಮನಕ್ಕೆ ಬಂದಿದ್ದರೇ ನನ್ನ ಮಗಳ ರಕ್ಷಣೆಯನ್ನು ನಾನು ಮಾಡಿಕೊಳ್ಳುತ್ತಿದ್ದೆ, ಮಗಳು ಇಂದು ಬದುಕುಳಿಯುತ್ತಿದ್ದಳು ಎಂದು ಅವರು ಕಣ್ಣೀರು ಹಾಕಿದರು.
ಸಿಎಂ ವೈಯಕ್ತಿಕ ಹೇಳಿಕೆಗೆ ನಿರಂಜನ್ ಬೇಸರ
ನೇಹಾ ಹಿರೇಮಠ ಕೊಲೆ ಬಳಿಕ ಕಾಂಗ್ರೆಸ್ ನಾಯಕರು ಇದು ವೈಯಕ್ತಿಕ ವಿಚಾರಕ್ಕೆ ನಡೆದ ಕೊಲೆ. ಲವ್ ಜಿಹಾದ್ ಅಲ್ಲ ಎಂದು ಹೇಳಿಕೆ ನೀಡಿದ್ದರು. ಕಾರ್ಮಿಕ ಸಂತೋಷ್ ಲಾಡ್ ಅವರು ಎನ್ಕೌಂಟರ್ ಕಾನೂನು ಜಾರಿಗೆ ಬರಬೇಕು ಎಂದಿದ್ದರು. ಆದರೆ ಇಂದು ನೇಹಾ ತಂದೆ ನಿರಂಜನ್ ತಾವು ಒಬ್ಬಂಟಿಯಾಗಿರುವುದಾಗಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ, ಆಕ್ರೋಶ ಹೊರ ಹಾಕಿದ್ದ ನಿರಂಜನ್ ಹಿರೇಮಠ ಅವರು, ಫಯಾಜ್ ನನ್ನ ಸಂಬಂಧಿಯಲ್ಲ. ನನ್ನ ಮತ್ತು ಅವರ ಮಧ್ಯೆ ವೈಯಕ್ತಿ ಕಾರಣ ಯಾವುದು ಇಲ್ಲ ಸಿದ್ದರಾಮಯ್ಯನವರೇ ಎಂದು ಪ್ರತಿಕ್ರಿಯಿಸಿದ್ದರು. ಈ ಕೊಲೆಯನ್ನು ಪ್ಲಾನ್ ಮಾಡಿ ಮಾಡಲಾಗಿ, ಇವರ ಹಿಂದಿನವರನ್ನು ಪತ್ತೆ ಮಾಡಬೇಕು. ಮಗಳ ಆತ್ಮಕ್ಕೆ ಶಾಂತಿ ದೊರಕಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದರು.












Click it and Unblock the Notifications