Breaking; ಹುಬ್ಬಳ್ಳಿ ಗಲಭೆ, ಪಿಯು ಪರೀಕ್ಷೆ ಬರೆಯಲಿರುವ ಮುಖ್ಯ ಆರೋಪಿ
ಹುಬ್ಬಳ್ಳಿ, ಏಪ್ರಿಲ್ 22; ಹುಬ್ಬಳ್ಳಿ ಗಲಭೆಯ ಪ್ರಮುಖ ಆರೋಪಿ ಅಭಿಷೇಕ್ ಹಿರೇಮಠ ಶುಕ್ರವಾರ ಪೊಲೀಸರ ಭದ್ರತೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾನೆ. ಆರೋಪಿಯ ಜಾಮೀನು ಅರ್ಜಿ ವಜಾಗೊಂಡಿದ್ದು, ಪರೀಕ್ಷೆ ಬರೆಯಲು ಕೋರ್ಟ್ ಅನುಮತಿ ನೀಡಿದೆ.
ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಅಭಿಷೇಕ್ ಹಿರೇಮಠ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ. ಶುಕ್ರವಾರ ಹುಬ್ಬಳ್ಳಿಯ ಮಹೇಶ್ ಪಿಯು ಕಾಲೇಜಿನಲ್ಲಿ ಅಭಿಷೇಕ್ ಪರೀಕ್ಷೆ ಬರೆಯಲಿದ್ದಾನೆ. 10.15ಕ್ಕೆ ಪರೀಕ್ಷಾ ಕೇಂದ್ರಕ್ಕೆ ಆತ ಆಗಮಿಸಲಿದ್ದಾನೆ.
ಕೋರ್ಟ್ ಆದೇಶದಂತೆ ಜೈಲಿನಿಂದ ಅಭಿಷೇಕ್ ಹಿರೇಮಠನನ್ನು ಪೊಲೀಸರು ಮಹೇಶ್ ಪಿಯು ಕಾಲೇಜಿಗೆ ಕರೆದುಕೊಂಡು ಬರಲಿದ್ದಾರೆ. ಪರೀಕ್ಷೆ ಮುಗಿದ ಬಳಿಕ ಜೈಲಿಗೆ ವಾಪಸ್ ಕರೆದುಕೊಂಡು ಹೋಗಲಿದ್ದಾರೆ.

ಹುಬ್ಬಳ್ಳಿಯ ಕೋರ್ಟ್ಗೆ ಅಭಿಷೇಕ್ ಹಿರೇಮಠ ಪರ ವಕೀಲರು ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅರ್ಜಿ ವಜಾಗೊಳಿಸಿದೆ. ಆರೋಪಿ ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದೆ.
ಆರೋಪಿಗೆ ಜೈಲಿನಲ್ಲಿ ಓದಲು, ಪುಸ್ತಕ ಮತ್ತು ಇತರ ವ್ಯವಸ್ಥೆ ಮಾಡಬೇಕು ಎಂದು ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ. ಅಭಿಷೇಕ್ ಹಿರೇಮಠ ನ್ಯಾಯಾಂಗ ಬಂಧನದ ಅವಧಿ ಏಪ್ರಿಲ್ 30ರ ತನಕ ಇದೆ.
ಮಸೀದಿ ಮೇಲೆ ಭಗವಾಧ್ವಜ ಹಾರಿಸುವ ಎಡಿಟ್ ಮಾಡಿದ ಫೋಟೋವನ್ನು ವಾಟ್ಸಪ್ ಸ್ಟೇಟಸ್ನಲ್ಲಿ ಅಭಿಷೇಕ್ ಹಿರೇಮಠ ಹಾಕಿಕೊಂಡಿದ್ದ. ಆತನನ್ನು ಬಂಧಿಸುವಂತೆ ಒಂದು ಸಮುದಾಯದ ಜನರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಒತ್ತಾಯಿಸುತ್ತಿದ್ದರು. ಆಗ ಗಲಭೆ ನಡೆದಿತ್ತು.
ಹುಬ್ಬಳ್ಳಿಯ ಹಳೇ ಪೊಲೀಸ್ ಠಾಣಾ ಬಳಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. 12 ಪೊಲೀಸರು ಗಾಯಗೊಂಡಿದ್ದರು. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 134 ಆರೋಪಿಗಳನ್ನು ಬಂಧಿಸಲಾಗಿದೆ. ಗುರುವಾರ ಪೊಲೀಸರು ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೌಲ್ವಿ ವಾಸಿಂ ಪಠಾಣ್ ಸಹ ಬಂಧಿಸಿದ್ದಾರೆ.












Click it and Unblock the Notifications