ಮನಸಾಂತರ ಹೆಸರಿನಲ್ಲಿ ಮತಾಂತರ- ಹುಬ್ಬಳ್ಳಿಯಲ್ಲಿ ತಡರಾತ್ರಿ ಪ್ರತಿಭಟನೆ
ಹುಬ್ಬಳ್ಳಿ, ನವೆಂಬರ್ 16 : ನಗರದ ವಿವಿಧ ಬಡಾವಣೆಗಳಲ್ಲಿ ಮತಾಂತರದ ಹೊಸ ರೂಪ 'ಮನಸಾಂತರ' ಎಂಬ ನೂತನ ಆಯಾಮದ ಮೇಲೆ ಜನರನ್ನು ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಕೂಡಲೇ ಮತಾಂತರ ನಿಷೇಧ ಕಾಯ್ದೆ ಅಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ತಡರಾತ್ರಿ ಪ್ರತಿಭಟನೆ ನಡೆಸಲಾಯಿತು.
ಭಿಕ್ಷುಕರ, ನಿರ್ಗತಿಕರ ಹಸಿವು ನೀಗಿಸುತ್ತಿರುವ ಹುಬ್ಬಳ್ಳಿಯ ಶಿರಹಟ್ಟಿ ದಂಪತಿ
ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ನೂರಾರು ಹಿಂದೂ ಕಾರ್ಯಕರ್ತರು ಈ ಸಂದರ್ಭದಲ್ಲಿ 10 ಪಾಸ್ಟರ್ ಸೇರಿದಂತೆ 30 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೇ ಹಾಕಿ ಬೇಕೇ ಬೇಕು ನ್ಯಾಯ ಬೇಕು ಘೋಷಣೆ ಕೂಗಿ, ಆರೋಪಿಗಳನ್ನು ಬಂಧಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು.
ಬಡ ಹಿಂದೂ ಸಮಾಜದವರ ಟಾರ್ಗೆಟ್
ಹುಬ್ಬಳ್ಳಿ ಧಾರವಾಡ ಸೇರಿದಂತೆ ಎಲ್ಲೆಲ್ಲೂ ಮತಾಂತರ ಆರೋಪ ಕೇಳಿ ಬರುತ್ತಿದೆ. ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರು ಕೂಡ ಅದು ಸರಿಯಾಗಿ ಪಾಲನೆಯಾಗದೆ ಮತಾಂತರ ನಡೆಯುತ್ತಲೇ ಇದೆ. ಹುಬ್ಬಳ್ಳಿ ನಗರದ ಶಿವಾ ಕಾಲೋನಿ ಚಪ್ಪರ ಕಾಲೋನಿಯಲ್ಲಿ ಶಿಕ್ಕಲಗಾರ ಸಮಾಜ ಹಾಗೂ ಇತರ ಬಡ ಹಿಂದೂ ಸಮಾಜದವರನ್ನು ಟಾರ್ಗೆಟ್ ಮಾಡಿ ಮತಾಂತರ ಮಾಡಲಾಗುತ್ತದೆ. ಹೀಗಾಗಿ ಮತಾಂತರ ಮಾಡುವವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಠಾಣೆ ಮುಂಭಾದಲ್ಲಿ ಪ್ರತಿಭಟನೆ
ನಗರದ ಶಿವಾ ಕಾಲೋನಿ ಸೇರಿದಂತೆ ಹಳೆ ಹುಬ್ಬಳ್ಳಿಯಲ್ಲಿ ಬಡವರಿಗೆ ಹಣದೊಂದಿವೆ ವಿವಿಧ ಆಮೀಷಗಳನ್ನು ತೋರಿಸಿ ಹಿಂದೂ ಧರ್ಮದಿಂದ ಮತಾಂತರ ಮಾಡಲಾಗುತ್ತಿದೆ. ಎಂದು ಆರೋಪಿಸಿರುವ ಹಿಂದೂ ಕಾರ್ಯಕರ್ತರು ಮತಾಂತರ ತಡೆಯಬೇಕು, ಮತಾಂತರದಲ್ಲಿ ಭಾಗಿಯಾದವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ ಮಾಡಿ, ಸುಮಾರು ಎರಡು ಗಂಟೆಗಳ ಕಾಲ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾನೂನಿಗೆ ಮತಾಂತರ ಮಾಡುವವರು ಹೆದರುತ್ತಿಲ್ಲ
ಇನ್ನು ಪ್ರತಿಭಟನೆ ವೇಳೆ ಮಾತನಾಡಿದ ಹಿಂದೂ ಪರ ಸಂಘಟನೆಗಳ ಮುಖಂಡ ಜಯತೀರ್ಥ ಕಟ್ಟಿ,"ಕಳೆದ ಕೆಲವು ದಿನಗಳಿಂದ ಅಮಾಯಕರಿಗೆ ಹಿಂದು ಧರ್ಮೀಯರಿಗೆ ಹಣದ ಆಮಿಷ ತೋರಿಸಿ ಮತಾಂತರ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು. ಮತಾಂತರಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿ ಮಾಡಲಾಗಿದೆ ಆದರೂ ಇದಕ್ಕೆ ಕ್ರಿಶ್ಚಿಯನ್ ಧರ್ಮದ ಕೆಲವರು ಹೆದರುತಿಲ್ಲ" ಎಂದು ಆರೋಪಿಸಿದರು.
ಪಾಸ್ಟರ್ ಸೇರಿದಂತೆ ಇತರರ ವಿರುದ್ಧ ದೂರು
ಇನ್ನು "ಈಗಾಗಲೇ ಹುಬ್ಬಳ್ಳಿಯ ನವನಗರದಲ್ಲಿ ಕೆಲ ತಿಂಗಳುಗಳ ಹಿಂದೆ ಇದೇ ರೀತಿ ಮತಾಂತರ ನಡೆದು ಉಗ್ರ ಸ್ವರೂಪದ ಹೋರಾಟದ ಬಳಿಕ ಕೆಲವರ ಮೇಲೆ ಕ್ರಮ ಆಯಿತು. ಆದರೂ ಮತಾಂತರ ಇನ್ನೂ ನಿಂತಿಲ್ಲ ಆದ್ದರಿಂದ ಇದರಲ್ಲಿ ಸಾಕಷ್ಟು ಕಾಣದ ಕೈಗಳ ಕೈವಾಡ ಇದ್ದು ಕ್ರಮ ಆಗಲಿ. ಈಗ ಮತಾಂತರ ಬದಲಾಗಿ ಮನಸಾಂತರ ಹೊಸ ರೂಪದ ಮುಖಾಂತರ ಮತಾಂತರ ನಡೆಯುತ್ತದೆ," ಎಂದರು.
ಇನ್ನು ಮತಾಂತರದಲ್ಲಿ ಭಾಗಿಯಾದ ಆರೋಪದ ಮೇಲೆ ಹತ್ತು ಪಾಸ್ಟರ್ ಹಾಗೂ 30 ಮಂದಿ ಮತಾಂತರ ಆದವರ ಹಾಗೂ ಇತರರ ಮೇಲೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಧಾರವಾಡ ಪೊಲೀಸ್ ಕಮಿಷನರೇಟನ್ ಡಿಸಿಪಿ ಪ್ರತಿಭಟನಾಕಾರರ ಮನವಿ ಸ್ವೀಕಾರ ಮಾಡಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.