ಖಾದಿಗೂ ಬಂತು GST: ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ತೆರಿಗೆ ಬರೆ
ಹುಬ್ಬಳ್ಳಿ, ಜುಲೈ 31: ಕೇಂದ್ರ ಸರ್ಕಾರ ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೊಳಿಸಿ ಇಂದಿಗೆ (ಜುಲೈ 31ಕ್ಕೆ) ಒಂದು ತಿಂಗಳು ಕಳೆಯಿತು. ಆದರೆ, ಹೊಸ ತೆರಿಗೆ ವ್ಯವಸ್ಥೆಯ ಗೊಂದಲಗಳು ಇನ್ನೂ ಬಗೆ ಹರಿದಿಲ್ಲ. ಇದರ ಮಧ್ಯೆ ಸದಾ ರಾಷ್ಟ್ರೀಯತೆ, ದೇಶಪ್ರೇಮ, ಸ್ವದೇಶಿ ವಸ್ತುಗಳ ಬಳಕೆ ಕುರಿತು ಗಂಟೆಗಟ್ಟಲೇ ಮಾತನಾಡುವ ನರೇಂದ್ರ ಮೋದಿ ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಖಾದಿ ಬಟ್ಟೆಗೂ ತೆರಿಗೆ ವಿಧಿಸುವ ಮೂಲಕ ಸ್ವದೇಶಿ ಉದ್ಯಮಕ್ಕೆ ಪೆಟ್ಟುಕೊಟ್ಟಿದ್ದಾರೆ.
ಜಿಎಸ್ಟಿ ಜಾರಿಯಾದ ನಂತರ ಮೊದಲ ಬಾರಿಗೆ ಖಾದಿ ಉದ್ಯಮಕ್ಕೆ ತೆರಿಗೆ ಏಟು ಬಿದ್ದಿದ್ದು, ಉದ್ಯಮಕ್ಕೆ ಪೂರೈಕೆಯಾಗುವ ಕಚ್ಚಾವಸ್ತು ನೂಲಿಗೂ ಜಿಎಸ್ಟಿ ಬರೆ ಎಳೆದಿದೆ. ಈ ಮೊದಲು ಖಾದಿ ಉತ್ಪನ್ನಕ್ಕೆ ನೀಡುತ್ತಿದ್ದ ಶೇ. 35ರಷ್ಟು ವಿನಾಯಿತಿಯನ್ನು ಕಳೆದ ಏಪ್ರಿಲ್ನಿಂದ ಶೇ. 15ಕ್ಕೆ ಇಳಿಕೆ ಮಾಡಲಾಗಿತ್ತು. ಈ ಮೂಲಕ ದರ ಹೆಚ್ಚಳಕ್ಕೆ ಕಾರಣವಾಗಿದ್ದ ಕೇಂದ್ರ ಸರ್ಕಾರದ ಆರ್ಥಿಕ ಸುಧಾರಣೆ ವ್ಯವಸ್ಥೆ ಈಗ ಜಿಎಸ್ಟಿ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೇಂದ್ರ ಸರ್ಕಾರದ ತೆರಿಗೆ ಭಾರ ಖಾದಿ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಕಳೆದ ಒಂದು ತಿಂಗಳಿಂದ ಖಾದಿ ಉತ್ಪನ್ನಗಳ ಮಾರಾಟದಲ್ಲಿ ಶೇ. 50ರಷ್ಟು ಕುಸಿತ ಕಂಡಿದೆ.
ಎಷ್ಟೆಷ್ಟು ತೆರಿಗೆ ?
ರಾಷ್ಟ್ರಧ್ವಜವೊಂದನ್ನು ಹೊರತುಪಡಿಸಿ ಉಳಿದೆಲ್ಲ ಖಾದಿ ಉತ್ಪನ್ನಗಳ ಮೇಲೆ ಜಿಎಸ್ಟಿ ಭಾರ ಬಿದ್ದಿದೆ. ಜಿಎಸ್ಟಿಯಲ್ಲಿ ಮೊದಲ 1,000 ರೂಪಾಯಿ ವರೆಗಿನ ಖಾದಿ ಉತ್ಪನ್ನಗಳ ಖರೀದಿಗೆ ಶೇ. 5ರಷ್ಟು ತೆರಿಗೆ ವಿಧಿಸಲಾಗಿದ್ದು, 2,000 ರೂಪಾಯಿ ವರೆಗಿನ ಉತ್ಪನ್ನಗಳ ಮೇಲೆ ಶೇ. 12ರಷ್ಟು ತೆರಿಗೆ ಭಾರ ಹೆಚ್ಚಳವಾಗಿದೆ. ಇನ್ನು ಖಾದಿ ಉತ್ಪನ್ನಗಳ ಕಚ್ಚಾ ವಸ್ತುವಾದ ನೂಲಿಗೂ ಶೇ. 18ರಷ್ಟು ತೆರಿಗೆ ವಿಧಿಸಲಾಗಿದೆ. ಇದರಿಂದ ಉದ್ಯಮ ಬಹುತೇಕ ನೆಲಕಚ್ಚುವ ಭೀತಿ ಎದುರಿಸುತ್ತಿದೆ.
ಪಾಟೀಲ ಪುಟ್ಟಪ್ಪ ಪತ್ರ
ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಖಾದಿ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಅಧ್ಯಕ್ಷ ಪಾಟೀಲ ಪುಟ್ಟಪ್ಪ ಕಿಡಿ ಕಾರಿದ್ದಾರೆ.
ಇತ್ತೀಚಿಗೆ ನಡೆದ ಸಂಘದ ಸಭೆಯ ತಿರ್ಮಾನದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೆಟ್ಲಿ ಅವರಿಗೆ ಪತ್ರ ಬರೆದಿರುವ ಪಾಟೀಲ ಪುಟ್ಟಪ್ಪ, "ಖಾದಿ ಉತ್ಪನ್ನಗಳ ಮೇಲೆ ವಿಧಿಸಿರುವ ತೆರಿಗೆ ಭಾರವನ್ನು ಕೈ ಬಿಡಬೇಕು," ಎಂದು ಆಗ್ರಹಿಸಿದ್ದಾರೆ. "ಖಾದಿ ಉತ್ಪನ್ನಗಳನ್ನು ತೆರಿಗೆಯಿಂದ ಹೊರಗಿಡಬೇಕು. ಇಲ್ಲದಿದ್ದರೆ ಕೇಂದ್ರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು," ಎಂದು ಎಚ್ಚರಿಕೆ ನೀಡಿದ್ದಾರೆ.