ಚಳ್ಳಕೆರೆಯ ಬಚ್ಚಲುಮನೆಯಿಂದ ಗೋವಾ ಬೀಚಿನವರೆಗೆ
ಹುಬ್ಬಳ್ಳಿ, ಡಿಸೆಂಬರ್ 14: ಚಳ್ಳಕೆರೆಯಲ್ಲಿ ಬಚ್ಚಲು ಮನೆಯಲ್ಲಿ ಅಕ್ರಮ ಹಣ ಇಟ್ಟು ಐಟಿ ಜಾಲಕ್ಕೆ ಸಿಕ್ಕಿ ಬಿದ್ದ ವೀರೇಂದ್ರ ಗೋವಾದ ತನ್ನ ಕ್ಯಾಸಿನೋದಲ್ಲಿ ಯಾರಾದರೂ ಚಳ್ಳಕೆರೆಯವರು ಎಂದರೆ ಫ್ರೀ ಎಂಟ್ರಿ ಕೊಡುತ್ತಿದ್ದರು. ಉಂಡು ತಿಂದು ಮಜಾ ಮಾಡಲು ಚಳ್ಳಕೆರೆಯವರಿಗೆ ಫುಲ್ ಉಚಿತ.
ಈ ಬಗ್ಗೆ ಮಾಹಿತಿ ನೀಡುವ ಹುಬ್ಬಳ್ಳಿಯ ನಗರದ ವಿಜಯ, ನಾನು ತಿಂಗಳಿಗೊಮ್ಮೆಯಾದರೂ ಕ್ಯಾಸಿನೋಗೆ ಹೋಗುತ್ತಿದ್ದೆ. ಅಲ್ಲಿ ಪ್ರವೇಶ ದ್ವಾರದಲ್ಲಿ ನಾವು ಚಳ್ಳಕೆರೆಯವರು ಎಂದು ಹೇಳಿ ಐಡಿ ಪ್ರೂಫ್ ತೋರಿಸಿದರೆ ಅವರಿಗೆ ಉಚಿತ ಪ್ರವೇಶವಾಗುತ್ತಿತ್ತು. ಅಲ್ಲದೇ ಶ್ರೀಲಂಕಾದಲ್ಲೊಂದು ಕ್ಯಾಸಿನೋ ಇಟ್ಟುಕೊಂಡಿದ್ದಾರೆ ನಮ್ಮೂರಿನ ಸಾವಕಾರರು ಎಂದು ಹೇಳುತ್ತಿದ್ದರು ಚಳ್ಳಕೆರೆಯಿಂದ ಬಂದವರು ಎನ್ನುತ್ತಾರೆ ವಿಜಯ.[ಸಿಬಿಐಗೆ ಸಿಕ್ಕ ಚಳ್ಳಕೆರೆಯ ದೊಡ್ಡನೋಟಿನ ಧಣಿ ವೀರೇಂದ್ರ]

ಇನ್ನು ಕ್ಯಾಸಿನೋ ಒಳಗಡೆ ಹೋದರೆ ಅಲ್ಲಿ 24 ಗಂಟೆಯವರೆಗೆ ಉಚಿತ ಊಟ, ಮದಿರೆಯನ್ನು ನೀಡಲಾಗುತ್ತದೆ. ಹೀಗಾಗಿ ದಿನಕ್ಕೊಬ್ಬರಾದರೂ ಚಳ್ಳಕೆರೆಯವರು ಅಲ್ಲಿಗೆ ಹೋಗುತ್ತಿರುತ್ತಾರೆ ಎನ್ನುತ್ತಾರೆ ಕ್ಯಾಸಿನೋ ಗಿರಾಕಿ ವಿಜಯ.
ಹವಾಲಾ ಕಿಂಗ್ ಪಿನ್ನಿಗೆ ಹುಬ್ಬಳ್ಳಿ ನಂಟು
ಕ್ರಿಕೆಟ್ ಬೆಟ್ಟಿಂಗ್, ಹವಾಲಾ ಕಿಂಗಪಿನ್, ಜೂಜಾಟದ ದೊರೆ ಎನಿಸಿಕೊಂಡಿರುವ ಕೆ.ಸಿ.ವೀರೇಂದ್ರನಿಗೆ ಹುಬ್ಬಳ್ಳಿಯ ಸಮುರೇಂದ್ರ ಸಿಂಗ್ ಅತೀ ಆತ್ಮೀಯನಾಗಿದ್ದ. ಸುಮಾರು 10 ವರ್ಷಗಳ ಹಿಂದೆ ಹುಬ್ಬಳ್ಳಿಯ ಕಮರಿಪೇಟೆ ಅಕ್ರಮ ಮದ್ಯ ಮಾರಾಟಕ್ಕೆ ಹೆಸರುವಾಸಿಯಾಗಿತ್ತು. ಇಲ್ಲಿ ಮಾರುತ್ತಿದ್ದ ಅಕ್ರಮ ಮದ್ಯ ಮತ್ತು ಸ್ಪಿರಿಟ್ ನ್ನು ವೀರೇಂದ್ರನೇ ಸರಬರಾಜು ಮಾಡುತ್ತಿದ್ದ. ಕೇವಲ 10 ರೂ. ಒಂದು ಕ್ವಾರ್ಟ್ ರ ಸಿಗುತ್ತಿದ್ದರಿಂದ ಮದಿರಾ ಪ್ರೇಮಿಗಳಿಂದ ಕಮರಿಪೇಟೆ ತುಂಬಿ ತುಳುಕುತ್ತಿತ್ತು.ನಗರದ ಹಲವಾರು ಕಡೆಗಳಲ್ಲಿ ಅಕ್ರಮ ಮದ್ಯ ಮಾರಾಟ ಡಿಪೋಗಳು ಹುಟ್ಟಿಕೊಂಡಿದ್ದವು.[ಐಟಿ ಅಧಿಕಾರಿಗಳನ್ನೂ ಬೆಚ್ಚಿಬೀಳಿಸಿದ ಸೀಕ್ರೆಟ್ ಲಾಕರ್!]

ಗಲ್ಲಿ ಗಲ್ಲಿಗಳಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟದ ಅಂಗಡಿಗಳಿಗೆ ಕೆ.ಸಿ.ವೀರೇಂದ್ರನೇ ಗೋವಾದಿಂದ ಮದ್ಯ ಸರಬರಾಜು ಮಾಡುತ್ತಿದ್ದ. ಇದೇ ಸಮಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕಿಂಗಪಿನ್ ಆಗಿದ್ದ ಸಮುಂದರಸಿಂಗ್ ನ ಜೊತೆ ಸ್ನೇಹ ಬೆಳೆಸಿಕೊಂಡು ಅವನೊಂದಿಗೆ ಕ್ರಿಕೆಟ್ ಬೆಟ್ಟಿಂಗ್ ದಂಧೆ ಶುರು ಮಾಡಿದ.
ಈ ಸಮಯದಲ್ಲಿ ನಗರದ ಮಾಜಿ ಮುಖ್ಯಮಂತ್ರಿಯವರ ತಮ್ಮನ ಹೆಸರು ಇವರೊಂದಿಗೆ ತಳಕು ಹಾಕಿಕೊಂಡಿತ್ತು. ಗೋವಾದಿಂದ ಬಸ್ ನಲ್ಲಿ ಬಂದ ರು 2.5 ಕೋಟಿ. ಇವರದೇ ಆದರೂ ಹವಾಲಾ ಹಣವಾಗಿರುವುದರಿಂದ ಪೊಲೀಸರಿಗೆ ನಮ್ಮದಲ್ಲ ಎಂದು ಹೇಳಿದ್ದರು ಈ ಇಬ್ಬರು.

ಕ್ರಮೇಣ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಹವಾಲಾ ದಂಧೆ ಮಾಡುತ್ತ ಅಕ್ರಮ ಹಣ ಸಂಪಾದಿಸಿಕೊಂಡಿದ್ದರು. ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಎಷ್ಟು ಜೋರಾಗಿತ್ತೆಂದರೆ ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಸಹ ಹುಚ್ಚು ಹಿಡಿಸಿಕೊಂಡಿದ್ದರು. ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಸಾಲ ಮಾಡಿ ಹಣ ಸೋತು ಕೆಲ ಜನ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರಲ್ಲಿ ವಿದ್ಯಾರ್ಥಿಗಳು ಸೇರಿದ್ದೂ ಸಹ ವಿಶೇಷ.[ಬೆಂಗಳೂರು: ಇಬ್ಬರ ಬಳಿ 4 ಕೋಟಿ ರು ಹೊಸ ನೋಟು ಪತ್ತೆ]
ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಲಂಚ ಪಡೆಯಲು ಹೋದ ಡಿಸಿಪಿಯೊಬ್ಬರು ಸ್ಟ್ರೀಂಗ್ ಆಪರೇಷನ್ ನಲ್ಲಿ ಸಿಕ್ಕಿ ಹಾಕಿಕೊಂಡು ಅಮಾನತಾಗಿದ್ದರು. ಜೊತೆಗೆ ನಗರದ 9 ಕಾರ್ಯನಿರತ ಪತ್ರಕರ್ತರು ಸಹ ಕ್ರಿಕೆಟ್ ಬೆಟ್ಟಿಂಗ್ ನ ರೂವಾರಿಗಳಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಿ ಸಿಐಡಿ ತನಿಖೆ ನಡೆಸಿತ್ತು. ತನಿಖೆ ಇನ್ನೂ ನಡೆಯುತ್ತಿದೆ. ಒಟ್ಟಿನಲ್ಲಿ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.

ಒಟ್ಟಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಹಣ ಸೋತು ಆತ್ಮಹತ್ಯೆ ಮಾಡಿಕೊಂಡವರ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ಇಂಥಹ ಅಕ್ರಮ ಕುಳಗಳಿಗೆ ಸೂಕ್ತ ಶಿಕ್ಷೆಯಾದಲ್ಲಿ ಮಾತ್ರ ಎಂಬುದು ಸಾರ್ವಜನಿಕರ ಮನದಾಳದ ಮಾತು.












Click it and Unblock the Notifications