ಹುಬ್ಬಳ್ಳಿ: ನಾಲ್ವರು ಹೆದ್ದಾರಿ ದರೋಡೆಕೋರರ ಬಂಧನ
ಹುಬ್ಬಳ್ಳಿ, ಆಗಸ್ಟ್ 01 : ಕಳೆದ ಹಲವು ದಿನಗಳಿಂದ ಹೆದ್ದಾರಿಗಳಲ್ಲಿ ವಾಹನಗಳನ್ನು ತಡೆದು ದರೋಡೆ ಮಾಡುತ್ತಿದ್ದ ಗ್ಯಾಂಗ್ ಮೇಲೆ ಸೋಮವಾರ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ದರೋಡೆಕೋರರು ಹುಬ್ಬಳ್ಳಿ-ಸೊಲ್ಲಾಪುರ ಹೆದ್ದಾರಿಯಲ್ಲಿ ಲಾರಿಗಳನ್ನು ಅಡ್ಡಗಟ್ಟಿ ದರೋಡೆ ಮಾಡಿ ಪರಾರಿಯಾಗುತ್ತಿದ್ದ ಯಲ್ಲಪ್ಪ, ಹನಮಂತ, ಕುಮಾರ್ ಹಾಗೂ ಸಾಗರ ಎಂಬುವರನ್ನು ಬಂಧಿಸಿದ್ದಾರೆ. ಸೋಮವಾರ ದರೋಡೆಗೆ ಸಂಚು ರೂಪಿಸುತ್ತಿದ್ದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಚಾಕು, ತಲ್ವಾರ್ ಹಾಗೂ ಖಾರದ ಪುಡಿ, ಎರಡು ಬೈಕ್ಗಳನ್ನು ವಶಪಡಿಕೊಳ್ಳಲಾಗಿದೆ. ಸಾರ್ವಜನಿಕರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗ್ರಾಮೀಣ ಠಾಣೆಯ ಇನ್ಸ್ ಪೆಕ್ಟರ್ ನವೀನ್ ಜಕ್ಕಲಿ ಮತ್ತು ಸಿಬ್ಬಂದಿ ಈ ನಾಲ್ವರನ್ನು ವಶಕ್ಕೆ ಪಡೆದಿದ್ದು, ದರೋಡೆ ಪ್ರಕರಣಗಳ ಕುರಿತು ತೀವ್ರ ವಿಚಾರಣೆ ಆರಂಭಿಸಿದ್ದಾರೆ.
'ಕಳೆದ ಹಲವು ದಿನಗಳಿಂದ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ದರೋಡೆಯಲ್ಲಿ ತೊಡಗಿದ್ದ ದರೋಡೆಕೋರರ ಗ್ಯಾಂಗ್ ಪೊಲೀಸರ ಕಣ್ಣುತಪ್ಪಿಸಿ ಕೃತ್ಯದಲ್ಲಿ ತೊಡಗಿತ್ತು. ಆದರೆ, ಸೋಮವಾರ ಅವರ ಕೃತ್ಯಕ್ಕೆ ಕೊನೆ ಹಾಡಲೇಬೇಕು ಎಂದು ನಾನು ಮತ್ತು ನಮ್ಮ ಸಿಬ್ಬಂದಿ ಅವರ ಬಂಧನಕ್ಕೆ ಯೋಜನೆ ರೂಪಿಸಿದ್ದೇವು. ಅದರಲ್ಲಿ ಯಶಸ್ವಿಯಾಗಿದ್ದೇವೆ' ಎಂದು ಇನ್ಸ್ ಪೆಕ್ಟರ್ ನವೀನ್ ಜಕ್ಕಲಿ ತಿಳಿಸಿದ್ದಾರೆ.