ಚಂದ್ರಶೇಖರ್ ಗುರೂಜಿ ಹತ್ಯೆ ಖಂಡಿಸಿದ ಮಾಜಿ ಸಚಿವ ಸಂತೋಷ್ ಲಾಡ್
ಹುಬ್ಬಳ್ಳಿ, ಜುಲೈ 5: ಸರಳವಾಸ್ತು ಖ್ಯಾತಿಯ ಡಾ. ಚಂದ್ರಶೇಖರ್ ಗುರೂಜಿಯನ್ನು ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬ ಹತ್ಯೆ ಮಾಡಿರುವ ಘಟನೆಯನ್ನು ಮಾಜಿ ಸಚಿವ ಸಂತೋಷ್ ಲಾಡ್ ತೀವ್ರ ಖಂಡಿಸಿದ್ದಾರೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ನಡೆದ ಈ ಹತ್ಯೆ ಅಮಾನುಷವಾಗಿದ್ದು, ಆರೋಪಿಗಳಿಗೆ ತೀವ್ರ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಖ್ಯಾತ ಜ್ಯೋತಿಷಿ ಡಾ. ಚಂದ್ರಶೇಖರ ಗುರೂಜಿ ಅವರ ಭೀಕರ ಹತ್ಯೆ ದಿಗ್ಭ್ರಮೆ ಮೂಡಿಸಿದೆ.
''ಹಾಡುಹಗಲೇ ಅಷ್ಟೆಲ್ಲ ಜನರ ಮುಂದೆ ಇಂತಹ ಕ್ರೌರ್ಯ ನಡೆದಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟೊಂದು ಹದಗೆಟ್ಟಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿ!'' ಎಂದು ಮಾಜಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಬೇಸರ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಡಾ. ಚಂದ್ರಶೇಖರ್ ಗುರೂಜಿಯ ಮೃತದೇಹವನ್ನು ರವಾನಿಸಲಾಗಿದ್ದು, ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಸ್ಥಳಕ್ಕೆ ಹುಬ್ಬಳ್ಳಿಯ ಪೊಲೀಸ್ ಕಮಿಷನರ್ ಲಾಬೂರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸರಳವಾಸ್ತು ಖ್ಯಾತಿಯ ಡಾ.ಚಂದ್ರಶೇಖರ್ ಗುರೂಜಿ ತಮ್ಮ ಬ್ಯುಸಿನೆಸ್ ವಿಚಾರಕ್ಕಾಗಿ ಹುಬ್ಬಳ್ಳಿಗೆ ಆಗಮಿಸಿದ್ದರು. ಈ ವೇಳೆ ನಗರದ ಉಣಿಕಲ್ ರಸ್ತೆಯಲ್ಲಿರುವ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು. ಬಿಸಿನೆಸ್ ಮಾತುಕತೆಗಾಗಿ ಭಕ್ತರ ಸೋಗಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಚಂದ್ರಶೇಖರ್ ಗುರೂಜಿಗೆ ಚಾಕುವಿನಿಂದ ಇರಿದು ಅಲ್ಲಿಂದ ಪರಾರಿ ಆಗಿದ್ದಾರೆ ಎಂದು ಗೊತ್ತಾಗಿದೆ. ಈ ಸಂಬಂಧ ಆರೋಪಿಗಳ ಗುರುತು ಪತ್ತೆ ಹಚ್ಚಿದ ವಿದ್ಯಾನಗರ ಪೊಲೀಸರು ಘಟನೆ ನಡೆದ ದಿನದಂದೇ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

''ಆರೋಪಿಗಳು ಯಾರೇ ಆಗಿದ್ದರೂ ಅವರನ್ನು ಪತ್ತೆ ಹಚ್ಚಲಾಗುವುದು, ಪೊಲೀಸರು ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದಾರೆ'' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
ಆರೋಪಿಗಳ ಬಂಧನ:
ಚಂದ್ರಶೇಖರ್ ಗುರೂಜಿ ಹತ್ಯೆ ನಡೆದ ನಾಲ್ಕು ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಂದ್ರಶೇಖರ್ ಮರಣೋತ್ತರ ಪರೀಕ್ಷೆ ಹಾಗೂ ಅಂತ್ಯಕ್ರಿಯೆ ಜುಲೈ 6ರಂದು ನಡೆಯಲಿದ್ದು, ಹುಬ್ಬಳ್ಳಿಯ ಕೇಶವಾಪುರ ಬಳಿಯ ಸುಳ್ಳ ರೋಡ್ ಶಿವಪ್ರಭು ಬಡಾವಣೆಯಲ್ಲಿರುವ ಗುರೂಜಿಯವರ ಜಮೀನಿನಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹಲವರಿಗೆ ಮಾರ್ಗದರ್ಶಕರಾಗಿದ್ದ ಡಾ. ಚಂದ್ರಶೇಖರ್
ಭಾರತದ ಪುರಾತನ ವಾಸ್ತುಶಾಸ್ತ್ರದ ಆಧಾರದ ಮೇಲೆ ಸರಳ ವಾಸ್ತು ರೂಪಿಸಿದರು. ಮಾಗದರ್ಶಕ, ಸಲಹೆಗಾರರಾಗಿ ಗುರುತಿಸಿಕೊಂಡರು. ಜನರ ಕಷ್ಟಗಳಿಗೆ ಸರಳ ಪರಿಹಾರಗಳನ್ನು ಸೂಚಿಸುತ್ತಾ ಬಂದಿದ್ದರು. ಮುಂಬೈ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ಕಚೇರಿಗಳನ್ನು ಹೊಂದಿದ್ದರು. ಜನಪ್ರಿಯತೆಯ ತುತ್ತತುದಿ ಮುಟ್ಟಿದ್ದ ಡಾ ಚಂದ್ರಶೇಖರ್ ಗುರೂಜಿ ಸರಳ ವಾಸ್ತು ಎಂಬ ವಾಹಿನಿಯನ್ನೇ ಆರಂಭಿಸಿದ್ದರು.
Recommended Video
ಚಂದ್ರಶೇಖರ್ ಸಲಹೆ ಪಡೆದು ವಾಸ್ತು ಬದಲಾಯಿಸಿಕೊಂಡು ಅನೇಕರು ಏಳಿಗೆ ಕಂಡಿದ್ದರು. ಅನೇಕ ಖಾಸಗಿ ವಾಹಿನಿಗಳಲ್ಲಿ ತಮ್ಮ ಸಲಹೆ ಸೂಚನೆ ನೀಡುತ್ತಿದ್ದರು. ತಮ್ಮ ಕಚೇರಿಗೆ ಬರುವವರಿಂದ ಇಂತಿಷ್ಟು ಮೊತ್ತ ಸಂಭಾವನೆ ಪಡೆದುಕೊಳ್ಳುತ್ತಿದ್ದರು. ವಾಸ್ತು ಪ್ರಕಾರ ಪರಿಹಾರ ಪಡೆದ ಬಳಿಕ ಏಳಿಗೆ ಕಾಣದಿದ್ದಾಗ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಕೊಲೆ ಮಾಡುವ ಹಂತಕ್ಕೆ ತಲುಪುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅಂಗಡಿ, ಹೋಟೆಲ್, ಮನೆ, ಕಚೇರಿ, ಕಾರ್ಖಾನೆ, ಆಸ್ಪತ್ರೆ, ಕೈಗಾರಿಕೆ, ಕಾರ್ಪೊರೇಟ್ ಸಂಸ್ಥೆ,ಶಿಕ್ಷಣ ಸಂಸ್ಥೆ ಹೀಗೆ ಎಲ್ಲಾ ಕಟ್ಟಡಗಳಿಗೂ ಸರಳ ವಾಸ್ತುವನ್ನು ತಂತ್ರಜ್ಞಾನ ಜೊತೆಗೆ ಅಳವಡಿಸಿಕೊಳ್ಳುವುದನ್ನು ಚಂದ್ರಶೇಖರ್ ಗುರೂಜಿ ತಿಳಿಸುತ್ತಿದ್ದರು












Click it and Unblock the Notifications