Jabbar Khan Honnali : ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಳ್ಳಿ ಇನ್ನಿಲ್ಲ
ಹುಬ್ಬಳ್ಳಿ, ಅಕ್ಟೋಬರ್ 7: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಳ್ಳಿ ಶುಕ್ರವಾರ ಆನಾರೋಗ್ಯದ ಕಾರಣದಿಂದ ನಿಧನರಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶುಕ್ರವಾರ ಬೆಳಗ್ಗೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ನಗರದ ಸುಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
Breaking: ಸರಳ ವಾಸ್ತು ಚಂದ್ರಶೇಖರ ಗುರುಜಿ ಕೊಲೆ ಪ್ರಕರಣ: 800 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ
ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಹೊನ್ನಳ್ಳಿ, ಎಸ್ ಆರ್ ಬೊಮ್ಮಾಯಿರಿಂದ ಪ್ರೇರಿತರಾಗಿ ಜೆಡಿಎಸ್ ಸೇರುವುದರೊಂದಿಗೆ ರಾಜಕೀಯ ಪ್ರವೇಶಿಸಿದ್ದರು. ನಂತರ ರಾಮಕೃಷ್ಣ ಹೆಗಡೆಯ ಲೋಕಶಕ್ತಿ, ಕಾಂಗ್ರೆಸ್ ಹಾಗೂ ಬಿಎಸ್ ಯಡಿಯೂರಪ್ಪ ನೇತೃತ್ವದ ಕೆಜಿಪಿಯನ್ನೂ ಸೇರಿದ್ದರು.
ಹುಬ್ಬಳ್ಳಿ ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಎರಡು ಸಲ ಗೆದ್ದಿದ್ದ ಹೊನ್ನಳ್ಳಿ, ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಯುವಜನ ಮತ್ತು ಕ್ರೀಡಾ ಸಚಿವರಾಗಿ ಜನಪರ ಕೆಲಸಗಳನ್ನು ಮಾಡಿದ್ದರು. ಎರಡು ಬಾರಿ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಜಾತಿ, ಧರ್ಮವನ್ನು ಬದಿಗೊತ್ತಿದ್ದ ಹೊನ್ನಳ್ಳಿ ಎಲ್ಲ ವರ್ಗದ ಜನರ ಕಷ್ಟಗಳಿಗೂ ಸ್ಪಂದಿಸುತ್ತಿದ್ದರು. ಜನರಿಗಾಗಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕೆಂಬ ತುಡಿತ ಅವರಲ್ಲಿತ್ತು. ಇದೀಗ ಅವರ ಅಗಲಿಕೆಗೆ ಹುಬ್ಬಳ್ಳಿ ನಗರದ ಜನತೆ ಕಂಬನಿ ಮಿಡಿದಿದ್ದಾರೆ.
ಶುಕ್ರವಾರ ಸಂಜೆ 5.30ಕ್ಕೆ ಕೇಶ್ವಾಪುರದಲ್ಲಿರುವ ಅವರ ನಿವಾಸದಿಂದ ಪಾರ್ಥೀವ ಶರೀರ ಹೊರಡಲಿದೆ. ಏಳು ಗಂಟೆಗೆ ತೊರವಿಹಕ್ಕಲದಲ್ಲಿರುವ ಖಬರಸ್ತಾನದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.