ಪದೇ ಪದೇ ಪವರ್ ಕಟ್: ಹೆಸ್ಕಾಂ ಕಚೇರಿಗೆ ಮುತ್ತಿಗೆಗೆ ರೈತರ ನಿರ್ಧಾರ
ಹುಬ್ಬಳ್ಳಿ, ಅಕ್ಟೋಬರ್ 23: ರಾಜ್ಯಾದ್ಯಂತ ಈ ಬಾರಿ ಮಳೆ ಕೈಕೊಟ್ಟಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಬೋರೆವೆಲ್ ನೀರು ನಂಬಿ ಬೆಳೆದ ಬೆಳೆಗಳು ಒಣಗುತ್ತಿದ್ದು, ಕೂಡಲೇ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಹಾಗೂ ಆಯಾ ವಿದ್ಯುತ್ ಕಂಪನಿಯವರು ರೈತರ ಪಂಪ್ ಸೆಟ್ಗಳಿಗೆ ದಿನಕ್ಕೆ ಹತ್ತು ಗಂಟೆಗಳ ಕಾಲ ತ್ರಿ-ಫೇಸ್ ವಿದ್ಯುತ್ ಸರಬರಾಜು ಮಾಡಬೇಕು ಎಂದು ರತ್ನ ರೈತ ಭಾರತ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮಹದಾಯಿ ಹೋರಾಟಗಾರರಾದ ಹೇಮನಗೌಡರ ಬಸನಗೌಡರ ಒತ್ತಾಯ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಕೂಡಲೇ ಸಮಪರ್ಕವಾಗಿ ವಿದ್ಯುತ್ ಪೂರೈಕೆ ಮಾಡದಿದ್ದರೆ ಅಕ್ಟೋಬರ್ 25 ರಂದು ಬುಧವಾರ ನವನಗರದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ ಮುತ್ತಿಗೆ ಮತ್ತು ಅದಕ್ಕೆ ಬಗ್ಗದಿದ್ದರೆ ವಿಧಾನಸೌಧಕ್ಕೆ ಬಾರಕೋಳ ಚಳುವಳಿ ಮೂಲಕ ಮುತ್ತಿಗೆ ಹಾಕಲು ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ರೈತರು ಅಳವಡಿಸಿರುವ ಪಂಪ್ಸೆಟ್ಗಳಿಗೆ ನಿರಂತರ ತ್ರಿ-ಫೇಸ್ ವಿದ್ಯುತ್ ನೀಡಬೇಕೆಂದು ಈಗಾಗಲೇ ರೈತರು ರಾಜ್ಯದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ, ಶಿವಮೊಗ್ಗ ವಿದ್ಯುತ್ ಸರಬರಾಜು ಕಂಪನಿ ಸೇರಿದಂತೆ ವಿವಿಧ ಕಂಪನಿಗಳ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸಲು ಸಹ ರೈತರು ಮುಂದಾಗಿದ್ದಾರೆ .
ಈಗಾಗಲೇ ಒಂದು ಸಲ ಗಡುವು ನೀಡಲಾಗಿತ್ತು. ಆದರೆ ಸರಕಾರ ಹಾಗೂ ವಿದ್ಯುತ್ ಸರಬರಾಜು ಕಂಪನಿಗಳು ಸರಿಯಾಗಿ ಸ್ಪಂದಿಸಿಲ್ಲ. ವಿದ್ಯುತ್ ಸರಬರಾಜು ಕಂಪನಿ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಈಗಾಗಲೇ ಮುಂಗಾರು ಮಳೆ ಆಗದಿರುವುದರಿಂದ ಮುಂಗಾರು ಬೆಳೆಗಳು ಸಂಪೂರ್ಣ ಹಾಳಾಗಿದೆ. ಇನ್ನು ಈಗ ಮಳೆ ಕೊರತೆಯಿಂದ ಹಿಂಗಾರು ಬಿತ್ತನೆ ಕಾರ್ಯಕ್ಕೆ ಹಿನ್ನೆಡೆಯಾಗಿದೆ. ನೀರಾವರಿ ನಂಬಿಕೊಂಡಿರುವ ರೈತರು ಸೂರ್ಯಕಾಂತಿ, ಹತ್ತಿ, ಟೊಮ್ಯಾಟೋ ಬೆಳೆಯಲು ಮುಂದಾಗಿದ್ದಾರೆ. ಆದರೆ, ಎಲ್ಲ ವಿದ್ಯುತ್ ಕಂಪನಿಯ ಅಧಿಕಾರಿಗಳು ವಿದ್ಯುತ್ ಪೂರೈಕೆಗೆ ಬೇಜವಾಬ್ದಾರಿತನ ತೋರುತ್ತಿದ್ದಾರೆ.
ನಿಯಮದ ಪ್ರಕಾರ ಪಂಪ್ಸೆಟ್ಗಳಿಗೆ ನಿರಂತರವಾಗಿ ಹಗಲು ಹೊತ್ತಿನಲ್ಲಿ 7 ಗಂಟೆಗಳ ಕಾಲ ವಿದ್ಯುತ್ ದೊರೆಯುತ್ತಿಲ್ಲ. ಆದ್ದರಿಂದ ಈಗ ಮಳೆ ಇಲ್ಲದೇ ರೈತರು ಆತಂಕದಲ್ಲಿದ್ದು ದಿನಕ್ಕೆ 10 ಗಂಟೆಗಳ ಕಾಲ ನಿರಂತರವಾದ ತ್ರೀ-ಫೇಸ್ ವಿದ್ಯುತ್ ಸರಬರಾಜು ಮಾಡಬೇಕು .
ಈಗ ಏಳು ಗಂಟೆಗಳ ಕಾಲ ನೀಡುವ ವಿದ್ಯುತ್ನಲ್ಲಿ 8 ರಿಂದ 10 ಬಾರಿ ವಿದ್ಯುತ್ ಕಟ್ ಮಾಡುತ್ತಿದ್ದು, ಬೆಳೆಗಳಿಗೆ ನೀರು ಹರಿಸಲು ಸಮಸ್ಯೆಯಾಗಿದೆ. ಇದರಿಂದ ರೈತರು ರೋಸಿ ಹೋಗಿದ್ದು, ಬೆಳೆ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಪದೇ ಪದೇ ವಿದ್ಯುತ್ ತೆಗೆಯುವುದರಿಂದ ಮೋಟಾರ್ಗಳು ಹಾಳಾಗುತ್ತಿವೆ. ಸರಿಪಡಿಸಲು ಸಾವಿರಾರು ರೂಪಾಯಿ ವ್ಯಯಿಸಬೇಕಾಗಿದೆ. ಈ ಸಮಸ್ಯೆ ಮುಂದುವರಿದರೆ ಇದೇ ಅಕ್ಟೋಬರ್ 25 ರಂದು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಸತ್ಯಾಗ್ರಹ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.












Click it and Unblock the Notifications