'ಕೆಲವೊಮ್ಮೆ ಪೊಲೀಸರು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ'
ಧಾರವಾಡ, ಆಗಸ್ಟ್, 18: ಮಹದಾಯಿ ಹೋರಾಟದ ವೇಳೆ ರೈತರ ಮೇಲೆ ನಡೆದ ಲಾಠಿ ಚಾರ್ಜ್ ಬಗ್ಗೆ ಪ್ರತಿಕ್ರಿಯೆ ನೀಡಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ ನಿರಾಕರಿಸಿದರು.
ಕೆಲವೊಮ್ಮೆ ಪೊಲೀಸರು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ತನಿಖೆ ನಡೆಯುತ್ತಿರುವುದರಿಂದ ನಾನು ಕಮೆಂಟ್ ಮಾಡುವುದಿಲ್ಲ ಎಂದು ಓಂ ಪ್ರಕಾಶ್ ಹೇಳಿದರು.
ನಗರದ ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ 274 ಪೊಲೀಸ್ ಪೇದೆಗಳ ಪಥ ಸಂಚಲನದಲ್ಲಿ ಪಾಲ್ಗೊಂಡು ಗುರುವಾರ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 25 ಸಾವಿರ ಹುದ್ದೆಗಳಲ್ಲಿ 18 ಸಾವಿರ ಹುದ್ದೆಗಳನ್ನು ಡಿಸೆಂಬರ್ ಒಳಗೆ ಭರ್ತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.[ಆಗಸ್ಟ್ 27ರಂದು ಕರ್ನಾಟಕದಲ್ಲಿ ರೈಲು ಸಂಚಾರವಿಲ್ಲ]
ಇಲಾಖೆಗೆ 100 ಮಂದಿ ಹಿರಿಯ ಕೌನ್ಸೆಲರ್ ಗಳ ನೇಮಕ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪೊಲೀಸರ ಆತ್ಮಹತ್ಯೆಗೆ ಸಂಭಂದಪಟ್ಟಂತೆ ಈ ಕೌನ್ಸೆಲೆರ್ ಗಳು ಗಮನ ನೀಡಲಿದ್ದಾರೆ ಎಂದು ಹೇಳಿದರು.
ಶೇ.20 ರಷ್ಟು ವೇತನ ಹೆಚ್ಚಳಕ್ಕೆ ಪತ್ರ ಬರೆಯಲಾಗಿದ್ದು, ಪೊಲೀಸರು ಪ್ರತಿಭಟನೆಯ ಹಾದಿ ತುಳಿಯದಂತೆ ಸೌಲಭ್ಯಗಳನ್ನು ನೀಡಲು ಉದ್ದೇಶಿಸಲಾಗಿದೆ. ಸಿಬ್ಬಂದಿಗೆ ಕಡ್ಡಾಯ ರಜೆ ನೀಡಲು ಆದೇಶಿಸಲಾಗಿದೆ ಎಂದರು.[ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ]
ಪೊಲೀಸರಿಗೆ ನೀಡಲಾಗುತ್ತಿರುವ ಪಡಿತರವು ಕಳಪೆ ಮಟ್ಟದ್ದಾಗಿದೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಕಲ್ಯಾಣ ಸಮಿತಿಯು ಪಡಿತರದ ಬದಲು ಹಣ ನೀಡಲು ಕ್ರಮ ಕೈಗೊಳ್ಳಲು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿ ಪ್ರೇಮಶಂಕರ ಮೀನಾ, ಮಹಾ ನಿರೀಕ್ಷಕ ಅಲೋಕಕುಮಾರ, ಉತ್ತರ ವಿಭಾಗೀಯ ಐಜಿಪಿ ರಾಮಚಂದ್ರರಾವ್, ಎಸ್ಪಿ ಧರ್ಮೇಂದ್ರಕುಮಾರ ಮೀನಾ, ಕಮೀಷನರ್ ಪಾಂಡುರಂಗ ರಾಣೆ ಉಪಸ್ಥಿತರಿದ್ದರು.
ಮಾಲೀಕರಿಗೆ ವಸ್ತು ಹಿಂದಿರುಗಿಸಿದ ಪೊಲೀಸ್ ಇಲಾಖೆ
ಹುಬ್ಬಳ್ಳಿ ನಗರದ ಕನ್ನಡ ಭವನದಲ್ಲಿ ಗುರುವಾರ ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಸ್ವತ್ತುಗಳನ್ನು ಸಂಬಂಧಪಟ್ಟವರಿಗೆ ವಿತರಿಸಲಾಯಿತು.[ಜೈಲಿನಿಂದ ಬಿಡುಗಡೆಯಾದ ರೈತರು ಹೇಳಿದ್ದೇನು?]
ಹು-ಧಾ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿನ ಠಾಣೆಗಳಲ್ಲಿ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಪತ್ತೆಹಚ್ಚಿದ ವಸ್ತುಗಳನ್ನು ವಾರಸುದಾರರಿಗೆ ವಿತರಿಸಲಾಯಿತು.