ದೇವೇಗೌಡ ಅವರಿಗೆ ತುಮಕೂರಲ್ಲ, ಮೈಸೂರು ಬೇಕಿತ್ತು!
ಬೆಂಗಳೂರು, ಜೂನ್ 22: ದೇವೇಗೌಡ ಅವರು ರಾಜಕೀಯ ಸಂಧ್ಯಾಕಾಲದಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಆದರೆ ತುಮಕೂರಿನಿಂದ ಸ್ಪರ್ಧಿಸುವುದು ಅವರ ಮೊದಲ ಆಯ್ಕೆ ಆಗಿರಲಿಲ್ಲವಂತೆ!
ದೇವೇಗೌಡ ಅವರು ತಮಗಾಗಿ ಮೈಸೂರು ಕ್ಷೇತ್ರವನ್ನು ಕೇಳಿದ್ದರಂತೆ ಆದರೆ ಸಿದ್ದರಾಮಯ್ಯ ಅವರು ಮೈಸೂರು ಬಿಟ್ಟುಕೊಡಲು ಸಿದ್ದರಿಲ್ಲದ ಕಾರಣ ಅನಿವಾರ್ಯವಾಗಿ ತುಮಕೂರನ್ನು ದೇವೇಗೌಡ ಅವರು ಆಯ್ಕೆ ಮಾಡಿಕೊಳ್ಳಬೇಕಾಯಿತು ಎಂಬ ಅಂಶವನ್ನು ಸಿದ್ದರಾಮಯ್ಯ ಅವರೇ ಹೊರಗೆಡವಿದ್ದಾರೆ.
ನಿನ್ನೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ದೇವೇಗೌಡ ಅವರು ಮೈಸೂರನ್ನು ಕೇಳಿದ್ದು ನಿಜ, ಆದರೆ ತುಮಕೂರನ್ನು ಅವರಿಗೆ ಒತ್ತಾಯಪೂರ್ವಕವಾಗಿಯೇನೂ ಕೊಟ್ಟಿಲ್ಲ, ಅವರು ತುಮಕೂರನ್ನು ಕೇಳಿದ್ದರು ಎಂದು ಹೇಳಿದ್ದಾರೆ.
ತುಮಕೂರಿನಿಂದ ಸ್ಪರ್ಧಿಸಿದ್ದ ದೇವೇಗೌಡ ಅವರು, ಬಿಜೆಪಿ ಎದುರು 12000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲನ್ನು ಅನುಭವಿಸಿದರು. ಬಿಜೆಪಿಯ ಅಭ್ಯರ್ಥಿ ಜಿಎಸ್.ಬಸವರಾಜು ಅವರು ಅಚ್ಚರಿಯ ಜಯಗಳಿಸಿ ಲೋಕಸಭೆ ಪ್ರವೇಶ ಮಾಡಿದ್ದಾರೆ.

'ಯಾರ ಮೇಲೂ ದೂರು ಕೊಡಲು ದೆಹಲಿಗೆ ಹೋಗಿರಲಿಲ್ಲ'
ತಮ್ಮ ದೆಹಲಿ ಭೇಟಿ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಯಾರ ಮೇಲೂ ದೂರು ನೀಡಲು ದೆಹಲಿಗೆ ಹೋಗಿರಲಿಲ್ಲ, ರಾಜ್ಯ ರಾಜಕಾರಣ ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಊಹಾಪೋಹದ ವರದಿಗೆ ಪ್ರತಿಕ್ರಿಯಿಸಲ್ಲ: ಸಿದ್ದರಾಮಯ್ಯ
ನಾನು ರಾಹುಲ್ ಗಾಂಧಿ ಇಬ್ಬರೇ ಸಭೆ ನಡೆಸಿದ್ದೇವೆ, ಅವರು ಸಭೆಯ ವಿವರಗಳನ್ನು ಯಾರಿಗೂ ಹೇಳಿಲ್ಲ, ನಾನೂ ಯಾರಿಗೂ ಹೇಳಿಲ್ಲ, ಹಾಗಿದ್ದ ಮೇಲೆ ಊಹಾಪೋಹದ ವರದಿಗಳಿಗೆ ನೇನೇಕೆ ಪ್ರತಿಕ್ರಿಯೆ ನೀಡಲಿ ಎಂದು ಖಾರವಾಗಿಯೇ ಉತ್ತರಿಸಿದ್ದಾರೆ.

ಊಹೆಯನ್ನೇ ವರದಿ ಮಾಡಿರುವ ಮಾಧ್ಯಮಗಳು
ರಾಹುಲ್ ಗಾಂಧಿ ಹಾಗೆ ಹೇಳಿದರು, ಸಿದ್ದರಾಮಯ್ಯ ಹಾಗೆ ಹೇಳಿದರು, ದೇವೇಗೌಡರು ಹೀಗೆ ಹೇಳಿದರು ಎಂಬುದೆಲ್ಲಾ ಸುಳ್ಳು ಸುದ್ದಿ, ಯಾರೂ ಯಾರ ವಿರುದ್ಧವೂ ದೂರು ನೀಡಿಲ್ಲ, ಮಾಧ್ಯಮಗಳು ಊಹೆಯನ್ನು ವರದಿ ಮಾಡಿವೆ ಎಂದು ಹೇಳಿದರು.

ಗ್ರಾಮ ವಾಸ್ತವ್ಯದಿಂದ ಮೈತ್ರಿ ಸರ್ಕಾರಕ್ಕೆ ಲಾಭ
ಯಾರು ಏನೇ ಹೇಳಿದರು ಸರ್ಕಾರ ಸುಭದ್ರವಾಗಿದೆ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಿದ್ದಾರೆ, ಮುಂದೆಯೂ ಮಾಡುತ್ತಾರೆ, ಇದರಿಂದ ಮೈತ್ರಿ ಸರ್ಕಾರಕ್ಕೆ ಲಾಭವಾಗಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.












Click it and Unblock the Notifications