Vande Bharat; ಹುಬ್ಬಳ್ಳಿಗೆ ಸಿಗುತ್ತಾ ಮತ್ತೊಂದು ವಂದೇ ಭಾರತ್?
ಹುಬ್ಬಳ್ಳಿ, ಜುಲೈ 10; ಭಾರತೀಯ ರೈಲ್ವೆಯ ಸೆಮಿ ಹೈ-ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಬಹು ಬೇಡಿಕೆ. ಕರ್ನಾಟಕದಲ್ಲಿ ಈಗಾಗಲೇ ಎರಡು ರೈಲುಗಳು ಸಂಚಾರ ನಡೆಸುತ್ತಿವೆ. ಈಗ ಮತ್ತೊಂದು ರೈಲಿಗಾಗಿ ರೈಲು ಬಳಕೆದಾರರು ಬೇಡಿಕೆ ಇಟ್ಟಿದ್ದಾರೆ. ಈ ರೈಲು ಹುಬ್ಬಳ್ಳಿಯಿಂದ ಆರಂಭವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಗದಗ ರೈಲು ಬಳಕೆದಾರರು (Gadag Railway Users) ಟ್ವೀಟ್ ಮೂಲಕ ಹುಬ್ಬಳ್ಳಿ-ತಿರುಪತಿ ವಯಾ ಗದಗ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಆರಂಭಿಸಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದಾರೆ. ಈಗಾಗಲೇ ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲು ಹುಬ್ಬಳ್ಳಿ ಮೂಲಕ ಸಾಗುತ್ತಿದೆ.

ಮನವಿಯಲ್ಲಿ ಏನಿದೆ?; ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಧಾರವಾಡದ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ಯಾಗ್ ಮಾಡಿರುವ ಗದಗ ರೈಲು ಬಳಕೆದಾರರು ಹುಬ್ಬಳ್ಳಿ-ತಿರುಪತಿ ವಯಾ ಗದಗ ರೈಲು ಓಡಿಸಬೇಕು ಎಂದುದ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ-ತಿರುಪತಿ ವಯಾ ಗದಗ ನಡುವಿನ ವಂದೇ ಭಾರತ್ ರೈಲು ಹೊಸಪೇಟೆ, ಬಳ್ಳಾರಿ, ಗುಂತಕಲ್, ರೇಣಿಗುಂಟ ಮಾರ್ಗವಾಗಿ ಸಂಚಾರ ನಡೆಸಲಿದೆ. ಇದು ಜೋಡಿ ಮಾರ್ಗವಾಗಿದ್ದು, ಸಂಪೂರ್ಣ ವಿದ್ಯುದೀಕರಣಗೊಂಡಿದೆ. ಅಲ್ಲದೇ ಈ ಮಾರ್ಗದಲ್ಲಿ 110 ಕಿ. ಮೀ. ಮಾರ್ಗದಲ್ಲಿ ರೈಲು ಓಡಿಸಬಹುದು ಎಂದು ವಿವರಣೆ ನೀಡಿದ್ದಾರೆ.
We requesting to Honourable @narendramodi ji Pls kindly Start a new Vande Bharath Exp between #Hubli - #Tirupthi via Gadag, Hospet, Bellary, Guntkal,Renigunta the Line is doubled & electrified, this line is almost 110 kmph crossed.@AshwiniVaishnaw@JoshiPralhad @GMSWR pic.twitter.com/kbXH5KV0iQ
— ಗದಗ ರೈಲು ಬಳಕೆದಾರರು Gadag Railway Users (@GadagRailUsers) July 8, 2023
ಉತ್ತರ ಕರ್ನಾಟಕ ಭಾಗದಿಂದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಗೆ ಸಾವಿರಾರು ಭಕ್ತರು ಸಂಚಾರ ನಡೆಸುತ್ತಾರೆ. ಇದಕ್ಕಾಗಿ ಹುಬ್ಬಳ್ಳಿ-ತಿರುಪತಿ ನಡುವೆ ಈಗಾಗಲೇ ರೈಲು, ವಿಮಾನ, ಬಸ್ ಸೇವೆ ಇದೆ. ವಂದಧೇ ಭಾರತ್ ರೈಲು ಸಂಚಾರ ಆರಂಭಿಸಿದರೆ ಎರಡೂ ರಾಜ್ಯದ ಜನರಿಗೆ ಅನುಕೂಲವಾಗಲಿದೆ ಎಂದು ವಿವರಣೆ ಕೊಡಲಾಗಿದೆ.
ಕರ್ನಾಟಕದಲ್ಲಿ ಸದ್ಯ ಮೈಸೂರು-ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ಮಾರ್ಗದಲ್ಲಿ ಮಾತ್ರ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಮೈಸೂರು-ಮಂಗಳೂರು, ಬೆಂಗಳೂರು-ಬೆಳಗಾವಿ, ಬೆಂಗಳೂರು-ಮಂಗಳೂರು ಮತ್ತು ಬೆಂಗಳೂರು-ಶಿವಮೊಗ್ಗ ಮಾರ್ಗದಲ್ಲಿ ವಂದೇ ಭಾರತ್ ರೈಲು ಆರಂಭಿಸಬೇಕು ಎಂದು ಬೇಡಿಕೆ ಇದೆ.
ಭಾರತೀಯ ರೈಲ್ವೆ ಬೆಂಗಳೂರು-ಹೈದರಾಬಾದ್ ನಡುವೆ ಸಂಪರ್ಕ ಕಲ್ಪಿಸಲು ವಂದೇ ಭಾರತ್ ರೈಲು ಓಡಿಸುವ ಕುರಿತು ಈ ಹಿಂದೆ ಚಿಂತನೆ ನಡೆಸಿತ್ತು. ಆದರೆ ಸದ್ಯ ರಾಜ್ಯಕ್ಕೆ ಹೊಸದಾಗ ಯಾವ ವಂದೇ ಭಾರತ್ ರೈಲು ಸಿಗಲಿದೆ? ಎಂಬುದರ ಬಗ್ಗೆ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿಲ್ಲ.
ಪ್ರಧಾನಿ ನರೇಂದ್ರ ಮೋದಿ 2023ರ ಆಗಸ್ಟ್ನಲ್ಲಿ 75 ಮಾರ್ಗದಲ್ಲಿ ವಂದೇ ಭಾರತ್ ರೈಲನ್ನು ಓಡಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ ಸದ್ಯ ದೇಶದಲ್ಲಿ 26 ಮಾರ್ಗದಲ್ಲಿ ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ವಿವಿಧ ರಾಜ್ಯಗಳು ವಂದೇ ಭಾರತ್ ರೈಲು ಆರಂಭಿಸಬೇಕು ಎಂದು ಬೇಡಿಕೆ ಇಟ್ಟಿವೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯಲ್ಲಿ ತಯಾರು ಮಾಡಲಾಗುತ್ತದೆ. ರೈಲ್ವೆ ಇಲಾಖೆ ಬೋಗಿಗಳ ಲಭ್ಯತೆ ಆಧಾರದ ಮೇಲೆ ಯಾವ ಮಾರ್ಗ ಸೂಕ್ತ ಎಂದು ಪರಿಗಣಿಸಿ ರೈಲು ಓಡಿಸುತ್ತದೆ. 2024ರ ಲೋಕಸಭೆ ಚುನಾವಣೆ ವೇಳೆಗೆ ಕರ್ನಾಟಕದಲ್ಲಿ ಇನ್ನೂ ಎರಡು ವಂದೇ ಭಾರತ್ ರೈಲು ಸಂಚಾರ ನಡೆಸುವ ನಿರೀಕ್ಷೆ ಇದೆ.
ಹುಬ್ಬಳ್ಳಿಯಲ್ಲಿ ಭಾರತೀಯ ರೈಲ್ವೆಯ ನೈಋತ್ಯ ವಲಯದ ಪ್ರಧಾನ ಕಚೇರಿ ಇದೆ. ಕರ್ನಾಟಕದ ಪ್ರಮುಖ ವ್ಯಾಪಾರಿ ನಗರಗಳಲ್ಲಿ ಹುಬ್ಬಳ್ಳಿಯೂ ಒಂದು. ಇದು ಉತ್ತರ ಕರ್ನಾಟದ ಹೆಬ್ಬಾಗಿಲು ಆಗಿದೆ. ಆದ್ದರಿಂದ ಇಲ್ಲಿಗೆ ಇನ್ನೊಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಕೊಡುಗೆಯಾಗಿ ನೀಡಲಾಗುತ್ತದೆಯೇ? ಎಂದು ಕಾದು ನೋಡಬೇಕು.












Click it and Unblock the Notifications