ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಸೈಕಲ್ ಜಾಥಾ
ಹುಬ್ಬಳ್ಳಿ, ನವೆಂಬರ್ 1 : ಮಹದಾಯಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಯುವಕನೊಬ್ಬ ಹುಬ್ಬಳ್ಳಿಯಿಂದ ಬೆಳಗಾವಿ ತನಕ ಸೈಕಲ್ ಜಾಥಾ ಆರಂಭಿಸಿದ್ದಾನೆ. ಕಳೆದ ಎರಡು ವರ್ಷಗಳಿಂದ ಮಹದಾಯಿ ಯೋಜನೆ ಜಾರಿಗೊಳಿಸಲು ಒತ್ತಾಯಿಸಿ ಸರಣಿ ಹೋರಾಟಗಳು ನಡೆಯುತ್ತಿವೆ.
ನವೆಂಬರ್ 14ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ಸಮಯದಲ್ಲಿ ಸರ್ಕಾರದ ಗಮನ ಸೆಳೆಯಲು ದಾವಣಗೆರೆ ಮೂಲದ ಎಚ್.ಬಿ.ಅನಿಲ್ ಒಂಟಿಯಾಗಿ ಸೈಕಲ್ ಜಾಥಾ ಆರಂಭಿಸಿದ್ದಾನೆ.
ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಳಸಾ ಬಂಡೂರಿ ಹೋರಾಟಗಾರರು ಹಾಗೂ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಸೈಕಲ್ ಜಾಥಾಕ್ಕೆ ಚಾಲನೆ ನೀಡಿದ್ದಾರೆ. ಮಹದಾಯಿ ಸಮಸ್ಯೆಯನ್ನು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಸಿಎಂಗಳು ಚರ್ಚೆ ಮಾಡಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ಜಾಥಾ ನಡೆಸಲಾಗುತ್ತಿದೆ.
'ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಇಲ್ಲಿನ ಜನರ ಕಷ್ಟವನ್ನು ನೋಡಿ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜಕೀಯವನ್ನು ಮರೆತು ನದಿ ಜೋಡಣೆಗೆ ಮುಂದಾಗಬೇಕು' ಎಂದು ಅನಿಲ್ ಒತ್ತಾಯಿಸಿದ್ದಾರೆ.
ಈ ಹಿಂದೆಯೂ ಅನಿಲ್ ದಾವಣಗೆರೆಯಿಂದ ಹುಬ್ಬಳ್ಳಿ ತನಕ ಸೈಕಲ್ ಜಾಥಾ ಮಾಡಿ ಗಮನ ಸೆಳೆದಿದ್ದರು. ಯೋಜನೆ ಇನ್ನೂ ಜಾರಿಗೆ ಬರದ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯಲು ಮತ್ತೆ ಸೈಕಲ್ ಜಾಥಾ ಆರಂಭಿಸಿದ್ದಾರೆ.