ಕಳಸಾ-ಬಂಡೂರಿ ಹೋರಾಟಕ್ಕೆ ಎರಡು ವರ್ಷ
ಕಳಸಾ ಬಂಡೂರಿ ಹೋರಾಟ 2 ವರ್ಷ ಪೂರೈಸುತ್ತಿರುವ ಹಿನ್ನೆಲೆ. ಈ ಸವಿನೆನಪಿಗಾಗಿ ಸಮಾರಂಭ ಏರ್ಪಡಿಸಲು ಹೋರಾಟಗಾರರ ನಿರ್ಧಾರ. ಜುಲೈ 16ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ.
ಹುಬ್ಬಳ್ಳಿ, ಜುಲೈ 10: ಕಳಸಾ- ಬಂಡೂರಿ ಹಾಗೂ ಮಹದಾಯಿ ನದಿ ನೀರು ಜೋಡಣೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟವು ಸದ್ಯದಲ್ಲಿಯೇ ಎರಡು ವರ್ಷ ಪೂರೈಸುತ್ತಿದ್ದು, ಇದರ ಸ್ಮರಣಾರ್ಥ ಜುಲೈ 16ರಂದು ಗದಗ ಜಿಲ್ಲೆಯ ನರಗುಂದದಲ್ಲಿ ಬೃಹತ್ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೈತಸೇನಾ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಿರಂತರ ಎರಡು ವರ್ಷಗಳ ಕಾಲ ನೀರಿಗಾಗಿ ಹೋರಾಟ ನಡೆಯುತ್ತಿದ್ದರೂ ರೈತರ ಬೇಡಿಕೆ ಈಡೇರದೆ ಇರುವುದು ವಿಷಾದನೀಯ. ಇನ್ನು ಈ ಭಾಗದ ಜನರ ಜೀವ ನಾಡಿಯಾಗಿರುವ ಈ ಯೋಜನೆಗಳು ಜಾರಿಯಾಗುವರೆಗೂ ಹೋರಾಟ ನಿರಂತರವಾಗಿರುತ್ತದೆ. ಹೋರಾಟವನ್ನು ಇನ್ನಷ್ಟು ಪ್ರಬಲಗೊಳಿಸಲು ನರಗುಂದದ ಮಹದಾಯಿ ಮತ್ತು ಕಳಸಾ ಬಂಡೂರಿ ಹೋರಾಟ ವೇದಿಕೆಯಲ್ಲಿ ಈ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ'' ಎಂದರು.
ಆನಂತರ ತಮ್ಮ ಮಾತನ್ನು ಮುಂದುವರಿಸಿ, ನರಗುಂದದಲ್ಲಿ ನಡೆಯುವ ಈ ಬೃಹತ್ ಸಮಾವೇಶದಲ್ಲಿ ಅಂತಿಮ ಹಂತದ ಹೋರಾಟದ ನಿರ್ಣಯ ತೆಗದುಕೊಳ್ಳಲಾಗುವುದು. ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ತಲುಪಿಸಲಾಗುವುದು. ನ್ಯಾಯ ಸಮ್ಮತವಾದ ಹಕ್ಕನ್ನು ಮಂಡಿಸಿ ಪ್ರಧಾನ ಮಂತ್ರಿಗಳು ಮಧ್ಯಸ್ಥಿಕೆ ವಹಿಸಿ ಮಹದಾಯಿ ನದಿ ನೀರು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಲಾಗುವುದು. ಸರಳವಾಗಿ ಇತ್ಯರ್ಥಗೊಳ್ಳಬೇಕಿದ್ದ ಸಮಸ್ಯೆಯನ್ನು ರಾಜಕಾರಣಿಗಳೇ ಜಟಿಲಗೊಳಿಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದ ಸೊರಬದಮಠ ಈ ಬಗ್ಗೆ ರೈತರಲ್ಲಿ ಜಾಗೃತಿ ಗೊಳಿಸಲಾಗುವುದು'' ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಂಕ್ರಪ್ಪ ಅಂಬಲಿ, ಮಲ್ಲಣ್ಣ ಅಲೆಕಾರ, ಗುರುರಾಯನಗೌಡ್ರ, ಉಮೇಶ ಹುರಕಡ್ಲಿ, ಸೋಮಶೇಖರ ಬೆಂಗೇರಿ, ಗುರುಪ್ಪ ಚೌರಡ್ಡಿ, ವಿರೂಪಾಕ್ಷ ತಾಯಣ್ಣವರ ಇತರರು ಇದ್ದರು.