ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಅನ್ನುವುದು ಬರೀ ಗಾಳಿಸುದ್ದಿ ಎಂದ ಸಿದ್ದರಾಮಯ್ಯ
ಹುಬ್ಬಳ್ಳಿ, ಅಕ್ಟೋಬರ್ 26: "ಡಿಕೆಶಿ ಇವತ್ತು ಬೆಂಗಳೂರಿಗೆ ಬರುತ್ತಿದ್ದಾರೆ, ಅವರಿಗೆ ಪಕ್ಷ ಸ್ವಾಗತ ಕೋರುತ್ತದೆ. ನನ್ನ ಪ್ರಕಾರ ಸದ್ಯಕ್ಕಂತೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಅನ್ನುವುದು ಕೇವಲ ರೂಮರ್. ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ" ಎಂದು ಹೇಳಿದ್ದಾರೆ ಸಿದ್ದರಾಮಯ್ಯ.
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿರುವ ಅವರು, ಹಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ. "ಪ್ರವಾಹ ಪಿಡಿತರಿಗೆ ಇಲ್ಲಿಯವರೆಗೆ ಸರಿಯಾಗಿ ಪರಿಹಾರ ನೀಡಿಲ್ಲ. 10 ಸಾವಿರ ಕೊಟ್ಟಿದ್ದಿವಿ ಅಂತಾರೆ, ಅಲ್ಲೂ ತಾರತಮ್ಯ ಆಗಿದೆ. ಬೆಳೆ ಪರಿಹಾರ ಕೂಡ ಇನ್ನು ಸಿಕ್ಕಿಲ್ಲ. ಮೋದಿ, ಶಾ ಪುಲ್ವಾಮ, ಏರ್ ಅಟ್ಯಾಕ್ ಅಂತ ಎರಡೂ ಕಡೆ ಭಾವನಾತ್ಮಕ ವಿಚಾರ ಹೇಳಿದ್ದರು. ಆದರೆ ಯಾವುದೂ ವರ್ಕೌಟ್ ಆಗಿಲ್ಲ" ಎಂದು ವ್ಯಂಗ್ಯ ಮಾಡಿದ್ದಾರೆ.

ಸ್ಪೀಕರ್ ನಡೆ ಖಂಡಿಸಿದ್ದೇವಷ್ಟೆ
ಅಧಿವೇಶನದಲ್ಲಿ ಮಾತನಾಡಲು ವಿಪಕ್ಷ ನಾಯಕರಿಗೆ ಸ್ಪೀಕರ್ ಅವಕಾಶ ಕೊಡಲಿಲ್ಲ. ಹೀಗಾಗಿ ಸ್ಪೀಕರ್ ನಡೆ ಖಂಡಿಸಿದ್ದೇನೆ. ಯಡಿಯೂರಪ್ಪ ಬೇಕಾದರೆ ಹಕ್ಕು ಚ್ಯುತಿ ಮಂಡಿಸಲಿ. ಮಂಡನೆ ಮಾಡದ ಹಾಗೆ ನೋಡಿಕೊಳ್ಳುತ್ತೇನೆ. ನಾನು ಯಡಿಯೂರಪ್ಪರಿಂದ ಪಾಠ ಕಲಿಯಬೇಕಿಲ್ಲ. ನಾನು ತಪ್ಪೇ ಮಾಡಿಲ್ಲ ಕ್ಷಮೆ ಕೇಳಲ್ಲ" ಎಂದಿದ್ದಾರೆ.

ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ತಯಾರಿ
ಉ-ಕ ಭಾಗದ ಅನರ್ಹ ಕ್ಷೇತ್ರದ ಉಪ ಚುನಾವಣೆ ಸಂಬಂಧ ಮಾತನಾಡಿದ ಅವರು, "ನಮ್ಮ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಬೆಳಗಾವಿ, ಹಾವೇರಿ, ರಾಯಚೂರು, ಬಳ್ಳಾರಿ, ಜಿಲ್ಲೆಯ ತೆರವಾದ ಆಯಾ ಕ್ಷೇತ್ರಗಳ ಪ್ರಮುಖರ ಸಭೆ ನಡೆಯುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ದಕ್ಷಿಣ ಕರ್ನಾಟಕ ಭಾಗದ ಅನರ್ಹ ಕ್ಷೇತ್ರದ ಸಭೆಯಾಗಿದೆ. ಹೀಗಾಗಿ ಈ ಭಾಗದ ನಾಯಕರ ಹಾಗೂ ಮುಖಂಡರ ಸಭೆಯನ್ನು ನಡೆಸಲಾಗುತ್ತದೆ" ಎಂದರು.

"ಶಾಸಕರನ್ನು ಕರೆದೊಯ್ದು ನಡುನೀರಲ್ಲಿ ಬಿಟ್ಟ ಬಿಜೆಪಿ"
"ಎಚ್ ಡಿ ಕುಮಾರಸ್ವಾಮಿ ಅವರ ಪ್ರತಿಯೊಂದು ಮಾತಿಗೂ ಉತ್ತರ ಕೊಡಲು ಬೇರೆ ಕಸಬಿಲ್ಲವಾ ನಮಗೆ? ಉಪಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ.
ಅಭ್ಯರ್ಥಿಗಳನ್ನು ಫೈನಲ್ ಮಾಡುತ್ತಿದ್ದೇವೆ. ಬಿಜೆಪಿಯವರು ನಮ್ಮ ಶಾಸಕರನ್ನು ಕರೆದೊಯ್ದು ನಡುನೀರಲ್ಲಿ ಕೈಬಿಟ್ಟಿದ್ದಾರೆ. ಸುಪ್ರೀಮ್ ಕೋರ್ಟ್ ತೀರ್ಪು ನೋಡಿ ಮುಂದಿನ ನಿರ್ಧಾರ ಮಾಡುತ್ತೇವೆ" ಎಂದರು.

"ಯಡಿಯೂರಪ್ಪ ಏನು ಮಾಡಿದ್ದಾರೆ ರಾಜ್ಯಕ್ಕೆ?"
"ಬಹಳ ಜನ ಪರಿಹಾರ ಸಂತ್ರಸ್ತರ ಪಟ್ಟಿಯಿಂದ ಬಿಟ್ಟು ಹೋಗಿದ್ದಾರೆ. ಅವರಿಗೆ ತಾತ್ಕಾಲಿಕ ಶೆಡ್ ಗಳನ್ನೂ ನಿರ್ಮಾಣ ಮಾಡಿಲ್ಲ. ಜನರು ಕಷ್ಟದಲ್ಲಿದ್ದಾರೆ, ಬಿಜೆಪಿಯವರು ಮೋಜು ಮಾಡುತ್ತಿದ್ದಾರೆ. ನೆರೆ ಪರಿಹಾರ ವಿಳಂಬ ಖಂಡಿಸಿ ಪಾದಯಾತ್ರೆ ಮಾಡುವ ಯೋಚನೆಯಿದೆ, ಇನ್ನೂ ಅಂತಿಮವಾಗಿಲ್ಲ. ಬಿಜೆಪಿ ಡಿಸಿಎಂಗಳ ಬಗ್ಗೆ ಉಮೇಶ ಕತ್ತಿ ಸತ್ಯ ಹೇಳಿದ್ದಾರೆ. ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲು ಕಾಯುತ್ತಿದ್ದಾರೆ" ಎಂದರು.












Click it and Unblock the Notifications