ಬಿಜೆಪಿ ಶಾಸಕರು ಪೊಲೀಸರ ವಶಕ್ಕೆ, ಎಲ್ಲಿ-ಯಾಕೆ?
ಸಿಎಂ ಸಿದ್ದರಾಮಯ್ಯ ಅವರು ಚಲಿಸುತ್ತಿದ್ದ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು ಹಾಗೂ ಕಪ್ಪುಪಟ್ಟಿ ಪ್ರದರ್ಶನ ಮಾಡಿದ ಆರೋಪದ ಮೇರೆಗೆ ಬಿಜೆಪಿ ಶಾಸಕರು ಹಾಗೂ ನೂರಾರು ಕಾರ್ಯಕರ್ತರನ್ನು ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ವಾಪಸ್ ಪಡೆದಿದೆ. ಈ ವಿಚಾರ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು, ಇದನ್ನು ಖಂಡಿಸಿ ಇಂದು ಸಿಎಂ ಹುಬ್ಬಳ್ಳಿಗೆ ಬಂದ ವೇಳೆ ಬಿಜೆಪಿ ನಾಯಕರು ಮುತ್ತಿಗೆ ಹಾಕಲು ಮುಂದಾಗಿದ್ದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಕೇಸ್ ಹಿಂಪಡೆದಿರುವುದು ಹಾಗೂ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಕೇಸ್ ಅನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಇಂದು ಬಿಜೆಪಿ ನಾಯಕರು ಮುತ್ತಿಗೆಗೆ ಯತ್ನಿಸಿದರು ಎಂದು ಹೇಳಲಾಗಿದೆ.
ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಸಿಎಂ ಸಿದ್ದರಾಮಯ್ಯ ಅವರು ಸವದತ್ತಿಗೆ ತೆರಳುತ್ತಿದ್ದರು. ಈ ವೇಳೆ ಅಕ್ಷಯ ಪಾರ್ಕ್ ಸರ್ಕಲ್ ಬಳಿ ಬಿಜೆಪಿ ಕಾರ್ಯಕರ್ತರು ಸಿಎಂ ಕಾರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿದರು ಎನ್ನಲಾಗಿದೆ. ಸಿಎಂಗೆ ಮನವಿ ಸಲ್ಲಿಸಲು ಬಿಜೆಪಿಗರು ಮುಂದಾಗಿದ್ದರು. ಆದರೆ ಪೊಲೀಸರು ಅನುಮತಿ ನೀಡದ ಕಾರಣ ಮುತ್ತಿಗೆಗೆ ಯತ್ನಿಸಿದರು ಎನ್ನಲಾಗಿದೆ.
ಅಲ್ಲದೆ ಬಿಜೆಪಿ ಶಾಸಕರಾದ ಮಹೇಶ ಟೆಂಗಿನಕಾಯಿ ಹಾಗೂ ಅರವಿಂದ ಬೆಲ್ಲದ್ ನೂರಾರು ಕಾರ್ಯಕರ್ತರೊಂದಿಗೆ ಪೊಲೀಸರ ಅನುಮತಿಯೂ ಇಲ್ಲದೆ ಪ್ರತಿಭಟನೆಗೆ ಮುಂದಾಗಿದ್ದರು. ಈ ಹಿನ್ನೆಲೆ ಶಾಸಕರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕಳಸಾ ಬಂಡೂರಿ ಹೋರಾಟಗಾರರ ಮನವಿ ಸ್ವೀಕಾರ: ಹುಬ್ಬಳ್ಳಿಗೆ ಬಂದ ಸಿಎಂ ಸಿದ್ದರಾಮಯ್ಯ ಅವರು ಕಳಸಾ ಬಂಡೂರಿ ಹೋರಾಟಗಾರರ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಬಿಜೆಪಿಯವರು ನಿರಾಧಾರವಾದ ವಿಚಾರಗಳ ಬಗ್ಗೆಯೇ ಸದಾ ಹೋರಾಟ ಮಾಡುತ್ತಾರೆ. ಈ ಮೂಲಕ ವಾಸ್ತವ ಮುಚ್ಚಿಟ್ಟು ಸಮಾಜದ ದಾರಿ ತಪ್ಪಿಸುತ್ತಾರೆ ಎಂದರು.
ಸಾರ್ವಜನಿಕರ ಹೋರಾಟಗಾರರ ಮೇಲೆ ಮೊಕದ್ದಮೆಗಳಿದ್ದರೆ ಮತ್ತು ಇನ್ನಿತರ ಸಂದರ್ಭದಲ್ಲಿ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗಿದ್ದರೆ ಅವುಗಳ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಂಡು, ಅವುಗಳನ್ನು ವಾಪಸ್ ಪಡೆಯಲು ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದ್ದು, ಇಂತಹ ಸಮಿತಿಗಳು ಬಿಜೆಪಿ ಸೇರಿದಂತೆ ಎಲ್ಲರ ಅಧಿಕಾರವಧಿಯಲ್ಲಿಯೂ ಅಸ್ತಿತ್ವದಲ್ಲಿತ್ತು. ಹಾಗೆಯೇ ಹುಬ್ಬಳ್ಳಿ ಗಲಭೆ ಸುಳ್ಳು ಪ್ರಕರಣವೆಂದು ನಿರ್ಧರಿಸಿ ಅದನ್ನು ವಾಪಸ್ ಪಡೆಯಲಾಗಿದೆ ಎಂದು ಸಿಎಂ ಸ್ಪಷ್ಟನೆ ನೀಡಿದರು.
ಈ ತೀರ್ಮಾನವನ್ನು ನ್ಯಾಯಾಲಯದ ಮುಂದೆ ಮಂಡಿಸಿದ ನಂತರವಷ್ಟೇ ಪ್ರಕರಣವನ್ನು ವಾಪಸ್ ಪಡೆಯಲು ಸಾಧ್ಯ. ಇದೇ ರೀತಿ ಬಿಜೆಪಿಯವರ ವಿರುದ್ಧ ಪ್ರಕರಣಗಳನ್ನೂ ಸಹ ವಾಪಸ್ ಪಡೆಯಲಾಗಿದೆ ಎಂದು ಸಮರ್ಥಿಸಿಕೊಂಡರು.
ಬಳಿಕ ಅವರು ಸವದತ್ತಿ ಯಲ್ಲಮ್ಮನ ಸನ್ನಿಧಿಗೆ ತೆರಳಿ ತನ್ನ ಪತ್ನಿ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದರು ಎನ್ನಲಾಗಿದೆ. ನಂತರ ಅಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆಯನ್ನೂ ಸಿಎಂ ನೀಡಿದ್ದಾರೆ.












Click it and Unblock the Notifications