ಕಾಂಗ್ರೆಸ್ ಸೇರ್ಪಡೆ ವದಂತಿಗೆ ಸ್ಪಷ್ಟ ನಿಲುವು ತಿಳಿಸಿದ ಅರವಿಂದ ಬೆಲ್ಲದ್
ಹುಬ್ಬಳ್ಳಿ, ಸೆಪ್ಟೆಂಬರ್ 20: ಬಿಜೆಪಿಯ ಕೆಲವು ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ ಎನ್ನುವ ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಪ್ರಸ್ತಾಪ ಮಾಡಿದ್ದರು.
ವಿಧಾನಸಭೆ ಅಧಿವೇಶನದಲ್ಲಿಯೂ ಬಿಜೆಪಿ ಹಲವು ಸಚಿವರು ತಮ್ಮ ಶಾಸಕರನ್ನು ಕಾಂಗ್ರೆಸ್ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪೂರಕವಾಗಿ ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬಿಜೆಪಿ ತೊರೆಯುತ್ತಾರೆಂಬ ವದಂತಿ ವಿಚಾರವಾಗಿ ಮಾಧ್ಯಮ ಪ್ರಕಟಣೆಯ ಮೂಲಕ ಅರವಿಂದ ಬೆಲ್ಲದ್ ಸ್ಪಷ್ಟನೆ ನೀಡಿದ್ದು, ನಾನು ಬಿಜೆಪಿ ಬಿಡುತ್ತೇನೆಂಬ ಈ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದ್ದಾರೆ. ನನ್ನ ವಿಚಾರದಲ್ಲಿ ಸುಳ್ಳು ಸಂದೇಶ ಹಬ್ಬಿಸುವ ಪ್ರಯತ್ನ ಇದು. ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ, ನನ್ನ ನಿಷ್ಠೆ ಅಚಲವಾಗಿದೆ. ಆರ್ಎಸ್ಎಸ್ ಬಗೆಗಿನ ನನ್ನ ನಿಷ್ಠೆ ಅಚಲವಾಗಿದೆ ಎಂದು ಬೆಲ್ಲದ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಬಿಜೆಪಿ ತೊರೆಯುವ ವಿಚಾರ ಇಲ್ಲ ಎಂದಿರುವ ಅರವಿಂದ್ ಬೆಲ್ಲದ್, ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. ಮಾಧ್ಯಮ ಪ್ರಕಟಣೆ ಮಾಡುವ ಮೂಲಕ ಅರವಿಂದ ಬೆಲ್ಲದ್ ಎಚ್ಚರಿಕೆ ನೀಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಿಜೆಪಿ ಪಕ್ಷದಿಂದ ಸಿಎಂ ಅಭ್ಯರ್ಥಿಯಾಗಿ ಬಿಂಬಿತವಾಗಿದ್ದ ಅರವಿಂದ್ ಬೆಲ್ಲದ್ಗೆ ಸಿಎಂ ಸ್ಥಾನ ಕೈತಪ್ಪಿದ್ದಲ್ಲದೆ, ಸಚಿವ ಸ್ಥಾನವೂ ಸಿಗದ ಪರಿಣಾಮ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.
ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಅರವಿಂದ ಬೆಲ್ಲದ್, ನಾನು ಕಾಂಗ್ರೆಸ್ ಸೇರುತ್ತೇನೆ ಎಂಬುದು ಸುಳ್ಳು ಸುದ್ದಿ. ನಾನು ಪಕ್ಷ ತೊರೆಯುತ್ತೆನೆಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಸುಳ್ಳುಗಳನ್ನೇ ನಿಜವೆಂದು ಪ್ರತಿಷ್ಠಾಪಿಸುವ ಕಾಲಘಟ್ಟದಲ್ಲಿ ನಾವು ಇದ್ದೇವೆ. ಇಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿದ್ಧತೆ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.

ನಾನು ಬಿಜೆಪಿ ತೊರೆಯುವುದನ್ನು ಕಾಯಾ, ವಾಚಾ ಮನಸಾ ಕಲ್ಪಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹಬ್ಬಿರುವ ವದಂತಿಗೆ ಯಾರೂ ಬೆಲೆ ಕೊಡಬಾರದು. ನಾನೆಂದೂ ಭಾರತೀಯ ಜನತಾ ಪಕ್ಷವನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲವೆಂದು ಅರವಿಂದ್ ಬೆಲ್ಲದ್ ತಮ್ಮ ನಿಲುವನ್ನು ಪ್ರಟಿಸಿದ್ದಾರೆ.
ಸಿದ್ದರಾಮಯ್ಯರನ್ನು ಬಿಜೆಪಿಗೆ ಕರೆ ತರುತ್ತೇನೆ ಎಂದ ರಾಜೂ ಗೌಡ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನಾನೇ ಬಿಜೆಪಿ ಕರೆ ತರುತ್ತೇನೆ ಎಂದು ಬಿಜೆಪಿ ಶಾಸಕ ರಾಜೂ ಗೌಡ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಯಡಿಯೂರಪ್ಪನವರು ಕಾರ್ಯಕಾರಿಣಿ ಸಭೆಯಲ್ಲಿ ವಿರೋಧ ಪಕ್ಷದವರನ್ನು ಯಾರೂ ನಿರ್ಲಕ್ಷಿಸಬಾರದು. ಒಳ್ಳೆಯ ರೀತಿ ಕೆಲಸವನ್ನು ಮಾಡಬೇಕು. ಕೇವಲ ನರೇಂದ್ರ ಮೋದಿ ಅಲೆ ಎನ್ನಲು ಹೋಗಬೇಡಿ, ನಿಮ್ಮ ಕೆಲಸವನ್ನು ಮಾಡಿ ಎಂದು ಹೇಳಿದ್ದಾರೆ.
ನಾವೆಲ್ಲರೂ ಬಿಜೆಪಿಯಲ್ಲಿಯೇ ಇರುತ್ತೇವೆ. ಮತ್ತೆ ಬಿಜೆಪಿಯಿಂದಲೇ ಗೆದ್ದು ಮಂತ್ರಿಯಾಗುತ್ತೇವೆ. ಕಾಂಗ್ರೆಸ್ನಿಂದ ಕೆಲವು ಶಾಸಕರಿಗೆ ಕರೆ ಬಂದಿದೆ. ಯಾವ ಶಾಸಕರು ಎಂದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯರನ್ನು ಬಿಜೆಪಿಗೆ ಕರೆತಲು ನಾನು ಶತ ಪ್ರಯತ್ನ ಮಾಡುತ್ತಿದ್ದೇನೆ. ನಾನು ಸಕ್ಸಸ್ ಆಗುತ್ತೇನೆ ಎನ್ನುವ ನಂಬಿಕೆ ನನಗೆ ಇದೆ ಎಂದು ನಗೆ ಬೀರಿದರು.
ಸಾಕಷ್ಟು ಜನ ಕಾಂಗ್ರೆಸ್ನವರೇ ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ. ನಾವು ಇದ್ದವರಿಗೆ ಅಧಿಕಾರ ಕೊಡಲು ಸಾಧ್ಯವಾಗುತ್ತಿಲ್ಲ ಮತ್ತೆ ಯಾಕೆ ಕರೆ ತರುತ್ತೀರಾ ಎಂದು ಬೊಮ್ಮಾಯಿ ಮತ್ತು ಬಿಎಸ್ವೈ ಅವರಿಗೆ ಹೇಳಿದ್ದೇವೆ. ನಮ್ಮವರು ಯಾರೂ ಪಕ್ಷ ಬಿಟ್ಟು ಹೋಗಲು ತಯಾರಿಲ್ಲ ಎಂದು ನುಡಿದಿದ್ದಾರೆ.












Click it and Unblock the Notifications