ಬಿಜೆಪಿಯ ರಹೀಮ್ ಫೋಟೋ ದುರುಪಯೋಗ, ದೂರು ನೀಡಲು ನಿರ್ಧಾರ
ಹುಬ್ಬಳ್ಳಿ, ಜುಲೈ 21: ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷ ರಹೀಮ್ ಉಚ್ಚಿಲ್ ಅವರನ್ನು ಹುಬ್ಬಳ್ಳಿಯ ಸಿದ್ಧಾರೂಢಸ್ವಾಮಿ ಮಠದ ಪೂಜಾರಿಯನ್ನಾಗಿ ನೇಮಕ ಮಾಡಲಾಗಿದೆಯೇ?
ಇಂಥದೊಂದು ಪೋಸ್ಟ್ ಫೇಸ್ಬುಕ್ನಲ್ಲಿ ವೈರಲ್ ಆಗಿದೆ. ವಿಲಿಯಂ ಪಿಂಟೊ ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ರಹೀಮ್ ಸಿದ್ಧಾರೂಢ ಸ್ವಾಮಿ ಮುಂದೆ ತೆಗೆದಿರುವ ಫೋಟೋ ವೈರಲ್ ಆಗಿದೆ.

ಇತ್ತೀಚಿಗೆ ಬಿಜೆಪಿ ವಿಸ್ತಾರಕರಾಗಿ ಹುಬ್ಬಳ್ಳಿಗೆ ಬಂದಿದ್ದ ರಹೀಮ್ ಉಚ್ಚಿಲ್ ಅವರು ನಗರದ ಸಿದ್ಧಾರೂಢಸ್ವಾಮಿ ಮಠಕ್ಕೆ ಭೇಟಿ ನೀಡಿದ್ದರು. ಅಲ್ಲದೆ ಸಿದ್ದಾರೂಢಸ್ವಾಮಿ ಗದ್ದುಗೆ ಎದುರು ಫೋಟೋ ತೆಗೆಸಿಕೊಂಡಿದ್ದರು.
ಇದೇ ಪೋಟೋವನ್ನು ಬಳಸಿಕೊಂಡು ವಿಲಿಯಂ ಪಿಂಟೊ ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ರಹೀಮ್ ಉಚ್ಚಿಲ್ ಅವರು ಹುಬ್ಬಳ್ಳಿ ಶ್ರೀ ಸಿದ್ದಾರೂಢಮಠ ದೇವಸ್ಥಾನದ ಮುಖ್ಯ ಅರ್ಚಕರಾಗಿ ನೇಮಕಗೊಂಡಿದ್ದಾರೆ. ಅವರನ್ನು ನೇಮಕ ಮಾಡಲು ಮಠದ ಆಡಳಿತ ಮಂಡಳಿಯ ಸರ್ವ ಸದಸ್ಯರ ಸಭೆಯೇ ನಿರ್ಧರಿಸಲಾಗಿದೆ. ಹೀಗಾಗಿ ಅವರು ಶ್ರೀ ಶ್ರೀ ರಹೀಮ್ ಪೂಜಾರಿ ಆಗಿದ್ದಾರೆ ಎಂಬರ್ಥದ ಪೋಸ್ಟ್ ಹಾಕಲಾಗಿದೆ.
ಫೇಸ್ಬುಕ್ನಲ್ಲಿ ಇದಕ್ಕೆ ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದು, ಆಪ್ತರು ರಹೀಮ್ ಅವರಿಗೆ ಫೋನ್ ಮಾಡಿ ವಿಚಾರಿಸುತ್ತಿದ್ದಾರಂತೆ.
ಕಿಡಿಗೇಡಿಗಳ ಕೃತ್ಯ
ಆದರೆ, ಇದನ್ನು ಅಲ್ಲಗಳೆದಿರುವ ರಹೀಮ್, ಇದೊಂದು ಕಿಡಿಗೇಡಿಗಳ ಕೃತ್ಯವಾಗಿದೆ ಎಂದು ಕಿಡಿಕಾರಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದ್ದು, ನನ್ನ ವಿರುದ್ಧ ಇಸ್ಲಾಂ ಧರ್ಮ ಹಾಗೂ ಮುಖಂಡರನ್ನು ಎತ್ತಿಕಟ್ಟುವ ವ್ಯವಸ್ಥಿತ ಪಿತೂರಿ ಇದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಇಂಥವರ ವಿರುದ್ಧ ದೂರು ನೀಡಲು ನಿರ್ಧರಿಸಿದ್ದು, ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ಜುಲೈ 21ರಂದು ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications