ಕಪ್ಪತ್ತಗುಡ್ದದಲ್ಲಿ ಗಣಿಗಾರಿಕೆಗೆ ಅವಕಾಶ ನೀಡದಿರಲು ಸಿಎಂಗೆ ಬಸವರಾಜ ಹೊರಟ್ಟಿ ಪತ್ರ
ಹುಬ್ಬಳ್ಳಿ, ಸೆಪ್ಟೆಂಬರ್ 12: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯಿಸಿಕೊಳ್ಳುವ ಕಪ್ಪತ್ತಗುಡ್ಡಕ್ಕೆ ಮತ್ತೆ ಗಣಿ ಕಂಟಕ ಎದುರಾಗಿದೆ. ಹೀಗಾಗಿ ಇದರ ಸಂರಕ್ಷಣೆಗೆ ವಿಶೇಷ ಕಾರ್ಯಪಡೆ ರಚಿಸುವ ಮೂಲಕ ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದಾರೆ.
ಗಣಿಧಣಿಗಳ ಕೆಟ್ಟಕಣ್ಣು ಕಪ್ಪತ್ತಗುಡ್ಡದ ಮೇಲೆ ಮತ್ತೆ ಬೀಳುವ ಮೂಲಕ ಗಣಿಗಾರಿಕೆ ನಡೆಸಲು ಸಲ್ಲಿಸಿರುವ ಪ್ರಸ್ತಾವನೆಯನ್ನು ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ, ಆಸೆ ಆಮಿಷಗಳಿಗೆ ಬಲಿಯಾಗದೇ ಸರ್ಕಾರವು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಉಡುಪಿ: ವರಂಗ ಜೈನ ಬಸದಿಯ ಪ್ರವಾಸಿಗರಿಗೆ ಬೇಕಿದೆ ಸುರಕ್ಷತೆ
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಹೊರಟ್ಟಿ, "ಗಣಿಧಣಿಗಳ ಕೆಟ್ಟಕಣ್ಣು ಕಪ್ಪತ್ತಗುಡ್ಡದ ಮೇಲೆ ಮತ್ತೆ ಬೀಳುವ ಮೂಲಕ ಗಣಿಗಾರಿಕೆ ನಡೆಸಲು ಸಲ್ಲಿಸಿರುವ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದನ್ನು ತಿರಸ್ಕರಿಸಬೇಕು. ಜತೆಗೆ ಕಪ್ಪತ್ತಗುಡ್ಡ ರಕ್ಷಿಸಲು, ಅಭಿವೃದ್ಧಿಗೆ ಪೂರಕ ಯೋಜನೆಯನ್ನು ಸರಕಾರ ರೂಪಿಸಬೇಕು. ಪ್ರತಿವರ್ಷ ಕಾಡಿಗೆ ಬೆಂಕಿ ಬೀಳುತ್ತದೆ. ಪ್ರತಿಸಲವು ಕಾಡನ್ನು ಬೆಂಕಿಯಿಂದ ರಕ್ಷಿಸಲಾಗುತ್ತದೆ. ಅದೇ ರೀತಿ ಗಣಿಗಾರಿಕೆಯಿಂದ ರಕ್ಷಣೆ ಮಾಡಬೇಕು," ಎಂದು ತಿಳಿಸಿದ್ದಾರೆ.
ಕಪ್ಪತ್ತಗುಡ್ಡವನ್ನು ಪಶ್ಚಿಮ ಘಟ್ಟಗಳ ಸೆರಗು ಎನ್ನಲಾಗುತ್ತಿದೆ. ಪಶ್ಚಿಮ ಘಟ್ಟದ ರೀತಿಯಲ್ಲಿ ಇದನ್ನು ಸಂರಕ್ಷಿಸಬೇಕಾಗಿದೆ. ಇಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಖನಿಜ ಸಂಪತ್ತು ಇದೆ. ಸರಕಾರವು ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವೆಂದು ಘೋಷಿಸಿ 2019ರಲ್ಲಿ ಅಧಿಸೂಚನೆ ಹೊರಡಿಸಿತ್ತು.
ರೈನ್ಬೋ ಲೇಔಟ್: 35 ಅತಿಕ್ರಮ ಪತ್ತೆ, ತೆರವಿಗಾಗಿ ಸೆ.13ರಂದು ಸಭೆ
ಸರಕಾರ ಹಾಗೂ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ವನ್ಯಜೀವಿಧಾಮದ 10 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಸುವುದಕ್ಕೆ ಅವಕಾಶವಿಲ್ಲ. ಪರಿಸರದ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕೊಟ್ಟರೆ ವನ್ಯಜೀವಿ ಧಾಮದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲವೆಂದು ಅರಣ್ಯ ಇಲಾಖೆ ಅಧಿಕಾರಿಗಳೇ ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ಹೊರಟ್ಟಿ ಪತ್ರದಲ್ಲಿ ಹೇಳಿದ್ದಾರೆ.
ಈಗಾಗಲೇ ಸಾಕಷ್ಟು ಹೋರಾಟ ಅಲ್ಲಿ ಕನ್ನಡಪರ ಸಂಘಟನೆಗಳು ಸೇರಿದಂತೆ ಅನೇಕರು ಹೋರಾಟ ನಡೆಸಿದ್ದರು. ಆದ್ದರಿಂದ ಯಾವುದೇ ಕಾರಣಕ್ಕೊ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಮುಖ್ಯಮಂತ್ರಿಗಳು ಅವಕಾಶ ನೀಡಬಾರದು ಎಂದು ಬಸವರಾಜ ಹೊರಟ್ಟಿ ಅವರು ಒತ್ತಾಯ ಮಾಡಿದ್ದಾರೆ.