ಬಸವರಾಜ ಬೊಮ್ಮಾಯಿ "ಮಹಾಭ್ರಷ್ಟ" ಮುಖ್ಯಮಂತ್ರಿ: ಸಿದ್ದರಾಮಯ್ಯ ಹೀಗೆ ಆರೋಪ ಮಾಡಿದ್ದೇಕೆ? ಇಲ್ಲಿದೆ ವಿವರ
ಕುಂದಗೋಳ, ಮೇ, 03: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಮತದಾರರನ್ನು ಸೆಳೆಯಲು ರಾಜಕೀಯ ನಾಯಕರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಲ್ಲದ ಆರೋಪ, ಪ್ರತ್ಯಾರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಅದೇ ರೀತಿ ಲಿಂಗಾಯತ ಮುಖ್ಯಮಂತ್ರಿಗಳಲ್ಲಿ ಅನೇಕರು ಪ್ರಾಮಾಣೀಕರಿದ್ದರು. ಬಸವರಾಜ ಬೊಮ್ಮಾಯಿ ಕೈಗೊಂಬೆ, ಮಹಾಭ್ರಷ್ಟ ಮುಖ್ಯಮಂತ್ರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ವಾಗ್ದಾಳಿ ನಡೆಸಿದರು.
ಕುಂದಗೋಳ ಪಟ್ಟಣದಲ್ಲಿ ಕಾಂಗ್ರೆಸ್ ಮಂಗಳವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ದ್ವೇಷದ ರಾಜಕಾರಣ ಮಾಡಿ 1995ರಲ್ಲಿ ಮುಸ್ಲಿಂ ಸಮಾಜಕ್ಕೆ ನೀಡಿದ ಮೀಸಲಾತಿಯನ್ನು ಕಿತ್ತುಕೊಂಡರು. ಇದೀಗ ರಾಜ್ಯದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಯಾವ ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ. ಇಂತಹ ಕೋಮುವಾದಿ ಪಕ್ಷಕ್ಕೆ ಮತ ನೀಡಬೇಡಿ ಎಂದರು.

ನಮ್ಮ ಸರ್ಕಾರ ಬಂದ ತಕ್ಷಣ ನಾನು ಮೀಸಲಾತಿ ಶೇಕಡಾ 50% ಇದ್ದದ್ದನ್ನು ಶೇಕಡಾ 75% ಹೆಚ್ಚಿಸಿ ತಮಿಳುನಾಡಿನಲ್ಲಿ ನೀಡಿದಂತೆ ಎಲ್ಲಾ ಸಮುದಾಯಗಳಿಗೆ ಮೀಸಲಾತಿ ನೀಡುತ್ತೇನೆ. ಮುಸ್ಲಿಂ ಸಮುದಾಯಕ್ಕೆ ಸ್ವಾಭಿಮಾನ ಇದ್ದರೇ ಬಿಜೆಪಿಗೆ ಮತ ಹಾಕಬೇಡಿ ಎಂದರು. ನಾನು 13 ಬಾರಿ ಬಜೆಟ್ ಮಂಡಿಸಿದ್ದೇನೆ. ನಮ್ಮ ಗ್ಯಾರಂಟಿ ಯೋಜನೆ ಜಾರಿಗೆ ತರದಿದ್ದರೆ ಖುರ್ಚಿಯಿಂದ ನಿರ್ಗಮಿಸುತ್ತೇನೆ. ಸಿದ್ದರಾಮಯ್ಯ ಮಾತು ಕೊಟ್ಟರೇ ತಪ್ಪುವುದಿಲ್ಲಾ ಎಂದರು.
ಬಿಜೆಪಿ ಶೇಕಡ 40% ಕಮಿಷನ್ ಪಡೆದಿದೆ. ಬಸವರಾಜ ಬೊಮ್ಮಾಯಿ ಒಳಗೊಂದು, ಹೊರಗೊಂದು ಮಾತನಾಡುತ್ತಾರೆ. ಗುತ್ತಿಗೆದಾರರ ಒಕ್ಕೂಟ ರಾಜ್ಯ ಬಿಜೆಪಿ ಸರ್ಕಾರಕ್ಕೆ 40% ಕಮಿಷನ್ ಕೊಡಲು ಆಗುವುದಿಲ್ಲಾ ಎಂದು ಇತಿಹಾಸದಲ್ಲೇ ಮೊದಲ ಬಾರಿಗೆ ಮೋದಿಯವರಿಗೆ ಕೇಂದ್ರಕ್ಕೆ ಪತ್ರ ಬರೆದಿದೆ. ಪ್ರತಿ ಬಾರಿ ಮೇ ಕಾವುಂಗಾ ಮೇ ಖಾನೆದುಂಗಾ ಎನ್ನುವ ಮೋದಿ ಇಂದಿಗೂ ಆ ಪತ್ರದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಬಿಜೆಪಿ 2018 ಚುನಾವಣೆಯಲ್ಲಿ ಬಹುಮತ ಪಡೆಯದೇ ಹಿಂಬಾಲಿಗಿನಿಂದ ಬಂದು ಅಧಿಕಾರ ಹಿಡಿದಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಎಂಎಲ್ಎ 25 ಕೋಟಿ ಕೊಟ್ಟು ರಾಜೀನಾಮೆ ಕೊಡಿಸಿ ಪುನಃ 25 ಕೋಟಿ ಖರ್ಚು ಮಾಡಿ ಉಪ ಚುನಾವಣೆ ಗೆದ್ದು ಅಧಿಕಾರ ಹಿಡಿದಿದೆ. ಹಾಗಿದ್ದರೆ ತಲಾ ಒಬ್ಬರಿಗೆ ಖರ್ಚು ಮಾಡಿದ 50 ಕೋಟಿ ರೂಪಾಯಿ ಹಣ ಎಲ್ಲಿಂದ ಬಂತು? ಅದು ಭ್ರಷ್ಟಾಚಾರದ ಹಣ ಅಲ್ಲವಾ? ಎಂದು ಪ್ರಶ್ನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯು ಕಾಂಗ್ರೆಸ್ ಪ್ರಣಾಳಿಕೆಯನ್ನು ಕಾಪಿ ಮಾಡುತ್ತಿದೆ. ಎಲ್ಲೆಡೆ ಬಿಜೆಪಿ ಪಕ್ಷ ನೆಲಕಚ್ಚುವ ದಿನ ಎದುರಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ನಂತರವೇ ಮಹಾ ಭ್ರಷ್ಟ ಆಗಿದ್ದಾರೆ. ಲಿಂಗಾಯತ ಸಮಾಜದ ಎಷ್ಟೋ ಮುಖ್ಯಮಂತ್ರಿಗಳನ್ನು ನಾನು ಗೌರವಿಸುತ್ತೇನೆ. ಆದರೆ ಬೊಮ್ಮಾಯಿ ಮಾತ್ರ ಒಳಗೊಂದು ಹೊರಗೊಂದು ಅನ್ನೋ ರೀತಿ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಸ್ವಿಸ್ ಬ್ಯಾಂಕ್ ಕಪ್ಪು ಹಣ ಇದೆ ಎಂದರು, ಆ ಹಣ ದೇಶಕ್ಕೆ ತರುತ್ತೇನೆ ಎಂದಿದ್ದರು. ಆ ಹಣ ಎಲ್ಲಿದೆ ಮರಳಿ ಬಂತಾ? ನಿಮ್ಮ ಖಾತೆಗೆ 15 ಲಕ್ಷ ಬಂತಾ ಅಥವಾ ಬರಲಿಲ್ಲವಾ? ರೈತರ ರಸಗೊಬ್ಬರ ಬೆಲೆ, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ರೈತರನ್ನು ಉದ್ಧಾರ ಮಾಡುತ್ತೇವೆಂದರು. ಆದರೆ ರೈತರು ಸಾಲ ಮಾಡುವಂತೆ ಮಾಡಿದ್ದಾರೆ ಎಂದು ಗುಡುಗಿದರು.












Click it and Unblock the Notifications