ಚೈತ್ರಾ ಕುಂದಾಪುರ ಅಂತವರು ಎಲ್ಲಾ ಪಕ್ಷದಲ್ಲಿ ಇರ್ತಾರೆ- ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಮಾತಿನ ಮರ್ಮವೇನು?
ಹುಬ್ಬಳ್ಳಿ, ಸೆಪ್ಟೆಂಬರ್, 18: ಚೈತ್ರಾ ಕುಂದಾಪುರ ಅಂತಹ ಜನರು ಎಲ್ಲ ಪಕ್ಷದಲ್ಲೂ ಇರುತ್ತಾರೆ. ದುಡ್ಡು ಮಾಡೋದು, ಜನರಿಗೆ ಮೋಸ ಮಾಡೋದು ಅವರ ಕೆಲಸ. ಇದು ಮೊದಲನೇ ಘಟನೆ ಅಲ್ಲ. ಮೋಸ ಹೋಗುವವರು ಇರುವವರೆಗೂ ಇಂತಹವರು ಇದ್ದೇ ಇರುತ್ತಾರೆ. ಈ ಬಗ್ಗೆ ನಮ್ಮ ಪಕ್ಷ ಮೊದಲೇ ತಿಳಿಸಿತ್ತು ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಹುಬ್ಬಳ್ಳಿಯಲ್ಲಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಲ್ಲೆಲ್ಲೋ ದುಡ್ಡು ಮಾಡಿದವರು, ಹೇಗೆ ರಾಜಕೀಯ ಮಾಡಬೇಕು ಅಂತ ಗೊತ್ತಿಲ್ಲದವರು ಈ ರೀತಿ ಮೋಸ ಹೋಗುತ್ತಾರೆ. ಇಂತಹ ಡಮ್ಮಿ ವ್ಯಕ್ತಿಗಳ ಜೊತೆಗೆ ಮೋಸ ಹೋಗತ್ತಾರೆ ಎಂದು ಹೇಳಿದರು.

ಬಿಜೆಪಿ ಪಕ್ಷದ ಸಿದ್ಧಾಂತದ ಬಗ್ಗೆ ಮಾತನಾಡಿದವರೆಲ್ಲ ಬಿಜೆಪಿಗರಾಗುವುದಿಲ್ಲ. ಚೈತ್ರಾ ಕುಂದಾಪುರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಮ್ಮಲ್ಲಿ ಟಿಕೆಟ್ ಪಡೆಯಲು ನೀತಿ ನಿಯಮಗಳಿವೆ. ಯಾವ ರಾಜಕೀಯ ಪಕ್ಷಗಳು ಇಂತಹ ಟೋಪಿ ಹಾಕುವವರನ್ನು ಬೆಳೆಸುವುದಿಲ್ಲ. ಟಿಕೆಟ್ ಆಕಾಂಕ್ಷಿಗಳ ಅಡ್ವಾಂಟೆಜ್ ತೆಗೆದುಕೊಳ್ಳುವ ಜನ ಇವರು ಎಂದು ಚೈತ್ರಾ ಕುಂದಾಪುರ ವಿರುದ್ಧ ಹರಿಹಾಯ್ದರು.
ಪ್ರಮೋದ್ ಮುತಾಲಿಕ್ ಹೇಳಿದ್ದೇನು?
ಉದ್ಯಮಿ ಗೋವಿಂದರಾಜ ಪೂಜಾರಿ ಎನ್ನುವವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟಿ ಕೋಟಿ ಹಣ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಚೈತ್ರಾ ಕುಂದಾಪುರ ಅವರ ಪರವಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬ್ಯಾಟ್ ಬೀಸಿದ್ದಾರೆ.
ಕೋಟಿ ಕೋಟಿ ವಂಚನೆ ಹಿನ್ನೆಲೆಯಲ್ಲಿ ಈಗಾಗಲೇ ಚೈತ್ರಾ ಕುಂದಾಪುರ ಅವರ ಬಂಧನವಾಗಿದೆ. ಚೈತ್ರಾ ಕುಂದಾಪುರ ಈ ವಂಚನೆ ಮಾಡಿಲ್ಲ ಎಂಬ ನಂಬಿಕೆ ಇದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಲಿ. ತಪ್ಪಿತಸ್ಥರಿದ್ದರೆ ಶಿಕ್ಷೆಯಾಗಲಿ ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲೋ ಒಂದು ಕಡೆ ಷಡ್ಯಂತ್ರ ನಡೆದಿದೆ. ಚೈತ್ರಾ ಷಡ್ಯಂತ್ರಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಿಂದೂ ಕಾರ್ಯಕರ್ತರನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಬಜರಂಗದಳವನ್ನು ಬ್ಯಾನ್ ಮಾಡುತ್ತೇವೆ. ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುತ್ತೇವೆ ಎಂಬ ಭರವಸೆಗಳನ್ನು ಕಾಂಗ್ರೆಸ್ನವರು ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದರು. ಬಜರಂಗದಳ ಒಂದು ನೆಪ ಮಾತ್ರ. ಕಾಂಗ್ರೆಸ್ನವರು ಹಿಂದೂಪರ ಸಂಘಟನೆಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಪುನಿತ್ ಕೆರೆಹಳ್ಳಿ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ. ಈ ಕಾಯ್ದೆ ಹಾಕುವ ಅವಶ್ಯಕತೆ ಇರಲಿಲ್ಲ. ರಾಜ್ಯದಲ್ಲಿ ಇನ್ನೂ ಅನೇಕ ಹಿಂದೂ ಕಾರ್ಯಕರ್ತರ ಮೇಲೆ ಪಿತೂರಿ ನಡೆದಿದೆ. ಚೈತ್ರಾ ಕುಂದಾಪುರ ಬಂಧನದ ಹಿಂದೆ ಸಂಶಯಾಸ್ಪದ ಚಟುವಟಿಕೆಗಳು ನಡೆದಿವೆ. ಕೋರ್ಟ್ ಏನು ತೀರ್ಪು ಕೊಡುತ್ತೋ ಅದಕ್ಕೆ ನಾವು ಬದ್ಧ ಎಂದಿದ್ದಾರೆ.
ಚೈತ್ರಾ ನಿರ್ದೋಷಿಯಾಗಿ ಹೊರಬರುತ್ತಾರೆ. ಹಾಲಪ್ಪಜ್ಜ ಸ್ವಾಮೀಜಿಯವರ ಹೆಸರೂ ಈ ಪ್ರಕರಣದಲ್ಲಿ ಕೇಳಿ ಬಂದಿದೆ. ಈ ಸ್ವಾಮೀಜಿಯನ್ನು ನಾನು ಹತ್ತಿರದಿಂದ ಬಲ್ಲೆ. ಅವರದ್ದು ದೊಡ್ಡ ಮಠ. ಅವರೂ ನಿರ್ದೋಷಿಯಾಗಿ ಹೊರ ಬರುತ್ತಾರೆ. ವ್ಯವಸ್ಥಿತವಾಗಿ ಅವರನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಲಿ. ತಪ್ಪಿತಸ್ಥರಿದ್ದರೆ ಶಿಕ್ಷೆಯಾಗಲಿ ಎಂದರು.
ಗೋವಿಂದರಾಜ ಪೂಜಾರಿ ಬಿಜೆಪಿ ಟಿಕೆಟ್ ಕೇಳಿದ್ದರು. ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ನ ಕೂಸು. ಈ ಇಂದಿರಾ ಕ್ಯಾಂಟೀನ್ ಟೆಂಡರ್ನ್ನು ಬಿಜೆಪಿಯವರಿಗೆ ಯಾಕೆ ಟೆಂಡರ್ ಕೊಟ್ಟರು? ಮುಸ್ಲಿಂ ಮನೆಯಲ್ಲಿ ಚೈತ್ರಾ ಸಿಕ್ಕಿಬಿದ್ದಿದ್ದಾಳೆ ಎಂಬ ಮಾಹಿತಿ ಇದೆ. ಇದರ ಬಗ್ಗೆ ತನಿಖೆಯಾಗಬೇಕು. ಕೋರ್ಟ್ ಆದೇಶವನ್ನು ನಾವು ಪಾಲಿಸಬೇಕು ಎಂದರು.
ಗೋವಿಂದ ಬಾಬು ಪೂಜಾರಿ ವಿರುದ್ದ ಗಗನ್ ಕಡೂರು ದೂರು
ಮತ್ತೊಂದೆಡೆ ಗೋವಿಂದ ಬಾಬು ಪೂಜಾರಿ ವಿರುದ್ಧ ಪೊಲೀಸ್ ಠಾಣೆಗೆ ಬಿಜೆಪಿ ಯುವ ಮುಖಂಡ, ಬಿಜೆಪಿ ಟಿಕೆಟ್ ಕೇಸ್ನ ಬಂಧಿತ ಆರೋಪಿ ಗಗನ್ ಕಡೂರು ಪೊಲೀಸ್ ಠಾಣೆಗೆ ಪತ್ರ ರವಾನಿಸುವ ಮೂಲಕ ದೂರು ನೀಡಿದ್ದಾರೆ.
ಕೆಲ ವರ್ಷಗಳಿಂದ ನನಗೆ ಪೂಜಾರಿ ಅವರ ಪರಿಚಯವಾಗಿದೆ. ನಾನು ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದೆ. ಆಗ ಗೋವಿಂದ ಬಾಬು ಪೂಜಾರಿಯಿಂದ ಮದುವೆ ಸಹಾಯಕ್ಕಾಗಿ 50 ಸಾವಿರ ರೂಪಾಯಿ ಹಣವನ್ನು ಸಾಲ ಪಡೆದಿದ್ದೆ. ಸಕಾಲಕ್ಕೆ ಅವರಿಗೆ ಮರು ಪಾವತಿ ಮಾಡಲು ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿ ನನಗೆ ಹಾಗೂ ನನ್ನ ಪತ್ನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ನನ್ನ ಬಳಿ ಆಡಿಯೋ ರೆಕಾರ್ಡ್ ಇದೆ. ನಮಗೆ ರಕ್ಷಣೆ ನೀಡಿ. ಗೋವಿಂದ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಈ ಪತ್ರ ಸದ್ಯ ಸಾಮಾಜಿಕ ಜಾಲಜಾಣದಲ್ಲಿ ವೈರಲ್ ಆಗಿದೆ.












Click it and Unblock the Notifications