ಆಸ್ಪತ್ರೆಯಿಂದ ಬಿಡುಗಡೆಯಾಗಿ ಅಜ್ಞಾತ ಸ್ಥಳಕ್ಕೆ ಹಾರಿದ ರವಿ ಬೆಳಗೆರೆ
ಹುಬ್ಬಳ್ಳಿ, ಜೂನ್ 26: ಶಾಸಕರ ವಿರುದ್ಧ ಲೇಖನ ಪ್ರಕಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಹಕ್ಕು ಬಾಧ್ಯತೆಗಳ ಸಮಿತಿಯಿಂದ ಶಿಕ್ಷೆಗೆ ಗುರಿಯಾಗಿರುವ 'ಹಾಯ್ ಬೆಂಗಳೂರು' ಪತ್ರಿಕೆ ಸಂಪಾದಕ ರವಿ ಬೆಳಗೆರೆ ಸೋಮವಾರ ಬೆಳಗಿನ ಜಾವ ಇಲ್ಲಿನ ಎಸ್ಡಿಎಂ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆ ಅಜ್ಞಾನ ಸ್ಥಳಕ್ಕೆ ತೆರಳಿರುವ ಅವರು, ವೈದ್ಯರ ಸಲಹೆ ಮೇರೆಗೆ ಔಷಧೋಪಚಾರ ಮುಂದುವರಿಸಲು ನಿರ್ಧರಿಸಿದ್ದಾರೆಂದು ಹೇಳಲಾಗಿದೆ.

ಶಾಸಕಾಂಗ ಮತ್ತು ಹಾಲಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ಕುರಿತು ಮಾನಹಾನಿಯಾಗುವಂಥ ಲೇಖನ ಬರೆದಿದ್ದ ಕಾರಣಕ್ಕೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಸೇರಿದಂತೆ ಇಬ್ಬರು ಪತ್ರಕರ್ತರಿಗೆ ಒಂದು ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸುವಂತೆ ವಿಧಾನ ಸಭಾ ಸ್ಪೀಕರ್ ಕೋಳಿವಾಡ ಆದೇಶಿಸಿದ್ದರು.
ಆದೇಶ ಜಾರಿಯಾಗುವ ಮೊದಲೇ ರವಿ ಬೆಳಗೆರೆಯವರಿಗೆ ಅನಾರೋಗ್ಯ ಕಾಡಿದ್ದರಿಂದಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಹಾಗಾಗಿ, ಅವರನ್ನು ಬಂಧಿಸಲು ಬೆಂಗಳೂರಿನಿಂದ ಬಂದಿದ್ದ ಪೊಲೀಸರು ಎರಡು ದಿನ ಕಾಯಬೇಕಾದ ಅನಿವಾರ್ಯತೆ ಎದುರಾಯಿತು. ಆದರೆ, ಸರ್ಕಾರದ ಆದೇಶದ ಮೇರೆಗೆ ಭಾನುವಾರವೇ ಮರಳಿ ಬೆಂಗಳೂರಿಗೆ ತೆರಳಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆ
ಎದೆನೋವಿನಿಂದ ಬಳಲುತ್ತಿದ್ದ ರವಿ ಬೆಳಗೆರೆ ಆರೋಗ್ಯ ಸ್ಥಿತಿ ಕುರಿತಾದ ವೈದ್ಯಕೀಯ ತಪಾಸಣಾ ವರದಿಗಳು ಭಾನುವಾರದವರೆಗೂ ಚಿಕಿತ್ಸೆ ನೀಡುತ್ತಿರುವ ವೈದ್ಯರ ಕೈ ತಲುಪಿರಲಿಲ್ಲ. ಆದರೆ, ಪೊಲೀಸರ ಬಂಧನ ಭೀತಿ ಎದುರಿಸುತ್ತಿದ್ದ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಶೆಟ್ಟರ್ ಅಸಮಾಧಾನ
ಈ ಮಧ್ಯೆ ಪತ್ರಕರ್ತ ರವಿ ಬೆಳೆಗೆರೆ ಅವರನ್ನು ಬಂಧಿಸುವಂತೆ ಆದೇಶಿಸಿರುವ ವಿಧಾನಸಭೆ ಹಕ್ಕು ಬಾಧ್ಯತೆಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಮಾಧ್ಯಮದವರ ವಿರುದ್ಧ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಎಲ್ಲರನ್ನೂ ಕರೆದು ಚರ್ಚಿಸಬೇಕಿತ್ತು. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಹಾಗೂ ಪತ್ರಿಕಾರಂಗಗಳ ಮಧ್ಯೆ ಸಮನ್ವಯ ಇರಬೇಕು. ಆದರೆ, ಹೀಗೆ ಏಕಾಏಕಿ ನಿರ್ಧಾರ ತೆಗೆದುಕೊಂಡಿರುವುದು ಸರಿಯಾದ ಕ್ರಮ ಅಲ್ಲ. ಈ ನಿರ್ಧಾರವನ್ನು ಮರುಪರಿಶೀಲಿಸುವುದು ಅಗತ್ಯವಾಗಿದೆ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಏತನ್ಮಧ್ಯೆ, ರವಿ ಬೆಳಗೆರೆಯರ ಬಂಧನದ ಆದೇಶವನ್ನು ವಿರೋಧಿಸಿ, ಬೆಂಗಳೂರಿನ ಪ್ರೆಸ್ ಕ್ಲಬ್ ನ ವರದಿಗಾರರ ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರವಿ ಬೆಳಗೆರೆ ಬಂಧನ ನಿರ್ಧಾರ ಹಿಂಪಡೆಯಬೇಕೆಂದೂ, ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡಬೇಕೆಂದೂ ಮನವಿ ಸಲ್ಲಿಸಿದ್ದರು.












Click it and Unblock the Notifications