ಹುಬ್ಬಳ್ಳಿ ರಸ್ತೆ ಅಪಘಾತ: ಕೇಂದ್ರದಿಂದ 2 ಲಕ್ಷ ರೂ, ರಾಜ್ಯದಿಂದ 5 ಲಕ್ಷ ರೂ ಪರಿಹಾರ
ಬೆಂಗಳೂರು, ಮೇ 25: ಹುಬ್ಬಳ್ಳಿಯಲ್ಲಿ ಮಂಗಳವಾರ ಬೆಳಗಿನ ಜಾವ ನಡೆದ ಭೀಕರ ರಸ್ತೆ ಅಪಘಾತ ಪ್ರಕರಣದಲ್ಲಿ ಮೃತಪಟ್ಟ ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ಮತ್ತು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ.
ಹುಬ್ಬಳ್ಳಿ ತಾರಿಹಾಳ ಬಳಿ ಖಾಸಗಿ ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಜನರು ಮೃತಪಟ್ಟಿದ್ದರು. ಈ ಘಟನೆಯಲ್ಲಿ 26 ಜನರು ಗಾಯಗೊಂಡಿದ್ದು, ಕಿಮ್ಸ್ಗೆ ದಾಖಲಿಸಲಾಗಿತ್ತು.
KA 51 AA 7146 ನಂಬರ್ ಬಸ್ ಹಾಗೂ MH 16 AY 6916 ಲಾರಿ ಮಧ್ಯೆ ಅಪಘಾತ ಉಂಟಾಗಿತ್ತು. ಘಟನೆಗೆ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸ್ ಮೂಲಗಗಳು ತಿಳಿಸಿವೆ. ಈ ಬಸ್ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ಗೆ ಸೇರಿದೆ. ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಹೋಗಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

8 ಮಂದಿ ಸಾವು, 21 ಮಂದಿಗೆ ಗಾಯ
ಇಚಲಕರಂಜಿ ನಿವಾಸಿ ಬಾಬಾಸೋ ಚೌಗಲೆ (59), ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿ ನಾಗರಾಜ ಆಚಾರ್(56), ಬೆಂಗಳೂರಿನ ನಿವಾಸಿ ಬಸ್ ಚಾಲಕ ಅತಾವುಲ್ಲಾ ಖಾನ್(40), ಮಸ್ತಾನ್, ಮೈಸೂರು ನಿವಾಸಿ ಮಹಮ್ಮದ್ ದಯಾನ್ ಬೇಗ್(17), ಕೊಲ್ಹಾಪುರದ ನಿವಾಸಿಗಳಾದ ಅಕ್ಷಯ ದವರ್(28), ಅಕೀಫ್(40) ಹಾಗೂ ಅಫಾಕ್( 41) ಘಟನೆಯಲ್ಲಿ ಮೃತಪಟ್ಟಿದ್ದರು.
ಘಟನೆಯಲ್ಲಿ ಸಹನಾ ಬಸವರಾಜ, ಬಾಬಾಸಾಬ ಚೌಗ್ಲಿ, ಓಂಕಾರ ಸುತಾರ, ಸಂಜಯ್ ಫಿಶೆ, ಚಂದ್ರಕಾಂತ ಪಾಂಡುರಂಗ, ಸುಲೋಚನ ಮಧುಕರ್, ತಾನಾಜೀ ಸೋಮಕಲ್, ಅನಿತಾ ರಾವುತ್, ಅನಿತಾ ಸಂಕಲ್, ಶುಭಂ ಚೌಗ್ಲಿ, ಮೊಹಮ್ಮದ್ ಫಯಾಜ್, ಸುಪ್ರಿಯಾ ಪಾಟೀಲ್, ಸಿಮ್ರಾನ್ ಪ್ರತಿಕ್, ರಾಜಾ ಫ್ರಾನ್ಸಿಸ್, ಜ್ಯೋತಿ ರಾಯಿಜನ್, ದಿಗ್ವಿಜಯ ಬಾಪೂಸೊ, ಪ್ರತೀಕ್ಷಾ ರಮೇಶ್, ಕೃಷ್ಣ ಕಲ್ಲೂರ, ಸರೋಜ ಸತೀಶ್, ಮಹೇಂದ್ರ ರಾಯ್ಸನ್, ತೇಕ್ಸಿಂಗ್ ಹಾಗೂ ಸಂಜಯ್ ಶಿಂಧೆ ಗಾಯಗೊಂಡಿದ್ದಾರೆ.
|
ಮೋದಿ ಸಂತಾಪ, 2 ಲಕ್ಷ ಪರಿಹಾರ
ಈ ಘಟನೆ ಕುರಿತು ಟ್ವೀಟ್ ಮೂಲಕ ಪ್ರಧಾನ ಮಂತ್ರಿ ಸಂತಾಪ ಸೂಚಿಸಿದ್ದಾರೆ ಎಂದು ಪಿಎಂ ಕಚೇರಿ ಟ್ವೀಟ್ ಮಾಡಿದೆ. ಕರ್ನಾಟಕದ ಹುಬ್ಬಳ್ಳಿಯಲ್ಲಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಹಲವರು ಸಾವಿಗೀಡಾಗಿರುವುದು ಅತ್ಯಂತ ನೋವಿನ ವಿಚಾರ. ಅವರ ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗಲಿದ್ದೇನೆ. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ . ಪ್ರಾಣ ಕಳೆದುಕೊಂಡವರ ಕುಟುಂಬದವರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಘಟನೆಯಲ್ಲಿ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ.

5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ
ಕೇಂದ್ರ ಸರ್ಕಾರ ಅಪಘಾತದಲ್ಲಿ ಮಡಿದವರಿಗೆ 2 ಲಕ್ಷ ಪರಿಗಾರ ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ 5 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಬಸವರಾಜ ಬೊಮ್ಮಾಯಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದು, ತಾವೂ ಕೂಡ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ನೀಡಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಬೈಪಾಸ್ನಲ್ಲಿ 390 ಸಾವು
ಹುಬ್ಬಳ್ಳಿ-ಧಾರವಾಡ ಬೈಪಾಸ್ನಲ್ಲಿ ಅಪಘಾತಗಳು ತೀವ್ರವಾಗುತ್ತಿವೆ. ಕಳೆದ 12 ವರ್ಷಗಳಲ್ಲಿ ಇಲ್ಲಿ1000ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 390ನ ಮಂದಿ ಸಾವನ್ನಪ್ಪಿದ್ದಾರೆ. 1600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 300ಕ್ಕೂ ಹೆಚ್ಚು ಮಂದಿ ಅಂಗವಿಕಲರಾಗಿದ್ದಾರೆ. ಬೈಪಾಸ್ ರಸ್ತೆಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದರೂ ಸರ್ಕಾರಗಳು ರಸ್ತೆ ವಿಸ್ತರಣೆ ಕಾರ್ಯ ಆರಂಭಿಸದೇ ಆಶ್ಚರ್ಯಕರ ಸಂಗತಿಯಾಗಿದೆ.












Click it and Unblock the Notifications