ದೀಪಾವಳಿಯಂದೇ ಜೀವನಾಧಾರಕ್ಕಿದ್ದ ಹಸುಗಳನ್ನು ಕಿತ್ತುಕೊಂಡ ವಿಧಿ
ಹುಬ್ಬಳ್ಳಿ, ಅಕ್ಟೋಬರ್ 19: ಮನೆಯ ಮಂದಿಯೆಲ್ಲಾ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿದ್ದರು. ಮನೆಯ ಮಂದಿಯ ಜತೆ ಅವರ ಜೀವನಾಧಾರಕ್ಕೆ ಇದ್ದ ಹಸುಗಳೂ ದೀಪಾವಳಿ ಮೂಡ್ ನಲ್ಲಿ ಇದ್ದವು. ಆದರೆ ಈ ಹಬ್ಬದ ಸಂಭ್ರಮವನ್ನು ಸೀಳಿ ಮುಂದೆ ದುರಂತವೊಂದು ನಡೆದೇ ಹೋಯ್ತು.
ಎತ್ತುಗಳ ಮಾಲೀಕ ಅವುಗಳ ಮೈತೊಳೆದು ಮೇವು ಹಾಕಿ, ಆಗತಾನೆ ಮನೆಯೊಳಗೆ ಹೋಗಿದ್ದ. ಆದರೆ ಕ್ಷಣಮಾತ್ರದಲ್ಲಿ ಜೀವನಾಧಾರಕ್ಕೆ ಇದ್ದ ಹಸುಗಳು ದಾರುಣವಾಗಿ ಸಾವಿಗೀಡಾಗಿವೆ . ಇಂಥಹದ್ದೊಂದು ಮನಕಲಕುವ ಘಟನೆ ನಡೆದದ್ದು ಹುಬ್ಬಳ್ಳಿಯ ಗಣೇಶ ಪೇಟೆಯ ನಿವಾಸಿ ಮಲ್ಲಿಕಾರ್ಜುನ ಕೊರವಿ ಅವರ ಮನೆಯಲ್ಲಿ.

ಹಾಲು ಮಾರಿ ಜೀವನ ಸಾಗಿಸುತಿದ್ದ ನಿವಾಸಿ ಮಲ್ಲಿಕಾರ್ಜುನ ಕೊರವಿ, ಬುಧವಾರ ಹಬ್ಬದ ನಿಮಿತ್ತ ಮನೆಯಲ್ಲಿ ಇರುವ ನಾಲ್ಕು ಎತ್ತುಗಳು, ಒಂದು ಹಸು ಹಾಗೂ ಅದರ ನಾಲ್ಕು ದಿನದ ಆಕಳ ಕರುವನ್ನು ಮೈ ತೊಳೆದು ಮೇವು ಹಾಕಿ ಹಬ್ಬದ ಸಡಗರದಲ್ಲಿ ಮನೆ ಒಳ ನಡೆದಿದ್ದರು.
ಮನೆ ಒಳಗೆ ನಡೆದ ಬೆನ್ನಿಗೆ ಅವಘಡವೊಂದು ನಡೆದು ಹೋಯಿತು. ನಿರಂತರ ಮಳೆಯಿಂದ ಮನೆ ಗೋಡೆ ಶಿಥಿಲಗೊಂಡಿತ್ತು. ಇದರಿಂದ ಮನೆಯ ಗೋಡೆ ಕುಸಿದ ಪರಿಣಾಮ ಮನೆಯಲ್ಲಿ ಕಟ್ಟಿದ ನಾಲ್ಕು ಎತ್ತುಗಳು ಹಾಗೂ ಒಂದು ಹಸು, ಒಂದು ಕರು ಮಣ್ಣಿನಡಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿವೆ.

ಮನೆ ಹಳೆಯದಾಗಿದ್ದು, ನಿರಂತರ ಮಳೆಯಿಂದ ಕುಸಿದು ಬೀಳಲು ಕಾರಣ ಎನ್ನಲಾಗುತ್ತಿದೆ. ಬಳಿಕ ವಿಷಯ ತಿಳಿದ ಅಗ್ನಿ ಶಾಮಕ ಸಿಬ್ಬಂದಿ ಮತ್ತು ಸ್ಥಳೀಯರ ಸಹಾಯದಿಂದ ಎಲ್ಲಾ ಎತ್ತುಗಳ ಮೃತ ದೇಹಗಳನ್ನು ಹೊರತೆಗದಿದ್ದಾರೆ.
ಇತ್ತ ಜೀವನಾಧಾರಕ್ಕೆ ಇದ್ದ ಹಸುಗಳು ಕಣ್ಣೆದುರೇ ಮೃತಪಟ್ಟಿದನ್ನು ಕಂಡು ಮಲ್ಲಿಕಾರ್ಜುನ ಕೊರವಿ ಪುತ್ರಿ ವನಜಾ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಜೀವನಾಧಾರಕ್ಕೆ ಇದ್ದ ಹಸುಗಳನ್ನು ಕಳೆದು ಕೊಂಡ ಸಂಸಾರ ದುಃಖದ ಮಡುವಿನಲ್ಲಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಪ್ರಸಾದ್ ಅಬ್ಬಯ್ಯಾ ಮನೆಯವರಿಗೆ ಸಾಂತ್ವನ ಹೇಳಿ , ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಇನ್ನು ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications