ಕಳಸಾ ಬಂಡೂರಿ ಹೋರಾಟಕ್ಕೆ 2 ವರ್ಷ, ಜೆಡಿಎಸ್ ನಿಂದ ಪ್ರತಿಭಟನೆ
ಹುಬ್ಬಳ್ಳಿ, ಜುಲೈ 5: ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ನಿರ್ಧರಿಸಿದ್ದಾರೆ.
ಜುಲೈ 11 ರಂದು ಸವದತ್ತಿ ತಾಲೂಕಿನ ನವೀಲು ತೀರ್ಥ ರೇಣುಕಾ ಜಲಾಶಯದ ಎದುರು, ಜುಲೈ 19 ರಂದು ಖಾನಾಪುರ ತಾಲೂಕಿನ ಕಣಕುಂಬಿಯ ಮಾವಲಿ ದೇವಸ್ಥಾನದ ಎದುರು ಒಂದು ದಿನದ ಸಾಂಕೇತಿಕ ಧರಣಿ ಹಾಗೂ ಅಲ್ಲಿಯೇ ಗ್ರಾಮ ವಾಸ್ತವ್ಯ ನಡೆಸಲಾಗುವುದು ಎಂದು ಕೋನರಡ್ಡಿ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ, ಕಳಸಾ ಬಂಡೂರಿಗಾಗಿ ನರಗುಂದ, ನವಲಗುಂದದಲ್ಲಿ 700ಕ್ಕೂ ಹೆಚ್ಚು ದಿನಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಅವರು ಈವರೆಗೆ ಮಧ್ಯಪ್ರವೇಶ ಮಾಡಿಲ್ಲ. ಜುಲೈ 21ಕ್ಕೆ ಹೋರಾಟ ಎರಡು ವರ್ಷ ಪೂರೈಸಲಿದೆ. ಅಂದು ನಡೆಯುವ ರೈತ ಹುತಾತ್ಮ ದಿನಾಚರಣೆಯೊಳಗೆ ರಾಜ್ಯದ ಹಿತ ಬಲಿಕೊಟ್ಟು ಗೋವಾ ಪರ ವಕಾಲತ್ತು ವಹಿಸುತ್ತಿರುವ ಬಿಜೆಪಿ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಬಿಜೆಪಿ ಸರಕಾರ ತೋರುತ್ತಿರುವ ನಿರ್ಲಕ್ಷ್ಯ, ರಾಜ್ಯದ ಬಿಜೆಪಿ ಮುಖಂಡರ ಅಸಡ್ಡೆಯಿಂದ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ಪ್ರತಿಯೊಬ್ಬರಿಗೆ ಮನವರಿಕೆ ಮಾಡಿಕೊಡುವ ಹಾಗೂ ಯೋಜನೆ ಜಾರಿಗಾಗಿ ಕೇಂದ್ರ, ರಾಜ್ಯ ಸರಕಾರದ ಗಮನ ಸೆಳೆದು ಒತ್ತಡ ತರುವ ಉದ್ದೇಶದಿಂದ ಈ ಹೋರಾಟವನ್ನು ಜೆಡಿಎಸ್ ಹಮ್ಮಿಕೊಂಡಿದೆ. ಈ ಹೋರಾಟದಲ್ಲಿ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟ ಜಿಲ್ಲೆಯ 13 ತಾಲೂಕಿನ ಅಧ್ಯಕ್ಷರು, ಪದಾಧಿಕಾರಿಗಳು, ನೂರಾರು ಮುಖಂಡರು ಹಾಗೂ ರೈತರು ಪಾಲ್ಗೊಳ್ಳಲಿದ್ದಾರೆ ಎಂದರು.
ಜಮಾ ಆಗದ ಫಸಲ್ ಭಿಮಾ ಯೋಜನೆ ಹಣ
ಫಸಲ್ ಭೀಮಾ ಯೋಜನೆ ಹಣ ಬಿಡುಗಡೆಯಾಗಿದೆ ಎಂದು ಸಾವಿರಾರು ರೈತರ ಮೊಬೈಲ್ಗಳಿಗೆ ಎಸ್ಎಂಎಂ ಸಂದೇಶ ಬಂದಿದೆ. ಆದರೆ, ಈವರೆಗೆ ಆ ಹಣ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ. ಬೆಳೆ ಪರಿಹಾರ ಕೂಡಾ ಸಮರ್ಪಕವಾಗಿ ತಲುಪಿಲ್ಲ. ಅದೇ ರೀತಿ ಕೇಂದ್ರ ಹಾಗೂ ರಾಜ್ಯ ಸರಕಾರ ನೀಡುವ ವಿವಿಧ ವೃದ್ಧಾಪ್ಯ ವೇತನ, ಪೈಲ್ವಾನರ ಪಿಂಚಣಿ, ವಿಧವಾ ವೇತನ, ವೀಕಲಚೇತನ ವೆತನ ಸೇರಿದಂತೆ ವಿವಿಧ ಮಾಶಾಸನಗಳು ಕಳೆದ ಆರು ತಿಂಗಳಿನಿಂದ ಪಾವತಿಯಾಗಿಲ್ಲ ಎಂದು ಆರೋಪಿಸಿದರು.
ಮೃತಪಟ್ಟ ಹೋರಾಗಾರರಿಗೆ 15 ಲಕ್ಷ ಪರಿಹಾರ ನೀಡಿ
ಈ ಎರಡು ವರ್ಷದ ಅವಧಿಯಲ್ಲಿ ಈವರೆಗೆ 10 ಜನ ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರರು ಮೃತಪಟ್ಟಿದ್ದಾರೆ. ಆದರೆ, ನರಗುಂದದ ಧರ್ಮಣ್ಣ ತಹಸೀಲ್ದಾರ್ ಎಂಬುವವರಿಗೆ ರಾಜ್ಯ ಸರಕಾರ 15 ಲಕ್ಷ ರೂ.ಪರಿಹಾರ ಘೋಷಿಸಿ ಅದರಲ್ಲಿ 12.5 ಲಕ್ಷ ರೂ. ನೀಡಿದೆ. ಅವರಿಗೆ ಉಳಿದ 2.5 ಲಕ್ಷ ರೂ. ನೀಡಬೇಕಲ್ಲದೆ, ಹೋರಾಟಗಾರ ಧರ್ಮಣ್ಣ ಅವರಿಗೆ ನೀಡಿದಂತೆ ಇನ್ನುಳಿದ ರೈತ ಹೋರಾಟಗಾರರ ಕುಟುಂಬಕ್ಕೆ ತಲಾ 15 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಿ
ರಾಜ್ಯದಲ್ಲಿ ಸತತ ನಾಲ್ಕು ವರ್ಷಗಳಿಂದ ಬರ ಪರಿಸ್ಥಿತಿಯಿದೆ. ರೈತರ ಜೀವನ ಸಂಕಷ್ಟದಲ್ಲಿದೆ. ಸಾಲದ ಬಾಧೆ ತಾಳಲಾರದೆ ಸಾವಿರಾರು ರೈತರು ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತ ಸಮುದಾಯದೊಂದಿಗೆ ನಾವಿದ್ದೇವೆ ಎನ್ನುವ ಭರವಸೆ ಮೂಡಿಸಬೇಕಿದೆ. ಅದಕ್ಕಾಗಿ ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.