ಮೊದಲ ಎಂಟ್ರಿಯಲ್ಲೇ ಬಂಪರ್ ಹೊಡೆದ 'ಕೆಪಿಜೆಪಿ'
Recommended Video
ಬೆಂಗಳೂರು, ಜೂನ್ 06: ಒಂದು ಕಾಲದಲ್ಲಿ ಬೆಂಗಳೂರಿನ ಉಪಮೇಯರ್ ಆಗಿದ್ದ ಆರ್ ಶಂಕರ್ ಕೂಡಾ ಬಹುಶಃ ಸಚಿವರಾಗುವ ಕನಸು ಕಂಡಿರಲಿಕ್ಕಿಲ್ಲ.
ರಿಯಲ್ ಸ್ಟಾರ್ ಉಪೇಂದ್ರ ಅವರು ಕನಸು ಕಂಡಿದ್ದ ಸಿದ್ಧಾಂತ ಒಪ್ಪಿ, ಕರ್ನಾಟಕ ಪ್ರಜಾ ಜನತಾ ಪಕ್ಷ (ಕೆಪಿಜೆಪಿ) ಸ್ಥಾಪಕ ಮಹೇಶ್ ಗೌಡ ಅವರು ಕೈಜೋಡಿಸಿ ಸುದ್ದಿಯಾಗಿದ್ದರು. ನಂತರ ಇಬ್ಬರು ಬೇರ್ಪಟ್ಟು, ಉಪೇಂದ್ರ ಅವರು ಚುನಾವಣೆ ಕಣಕ್ಕಿಳಿಯದಿದ್ದರೆ, ಮಹೇಶ್ ಗೌಡ ಅವರ ಕೆಪಿಜೆಪಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಹೀಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ನಿಂತ ಕೋಟ್ಯಧಿಪತಿ ಆರ್ ಶಂಕರ್ ಅವರು ಭರ್ಜರಿ ಜಯ ದಾಖಲಿಸಿ, ಶಾಸಕರಾದರು.
ಆಂಧ್ರಪ್ರದೇಶ ಮೂಲದವರಾದ ಆರ್. ಶಂಕರ್ ಅವರು ಮದುವೆಯಾದ ನಂತರ ಬೆಂಗಳೂರಿಗೆ ಬಂದವರು, 2004ರಲ್ಲಿ ಬೆಂಗಳೂರು ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿ ಉಪಮೇಯರ್ ಕೂಡಾ ಆಗಿದ್ದರು. 2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗಳಿಸಿ ಸರ್ವಜ್ಞ ನಗರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.
ಕುರುಬ ಸಮಾಜದವರಾದ ಶಂಕರ್ ಅವರು ತಮ್ಮ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಣೆಬೆನ್ನೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. 2012ರಲ್ಲಿ ವಲಸೆ ಬಂದರು. 2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದು ಸೋಲು ಕಂಡರು. ಕುರುಬರ ಮತಗಳನ್ನು ಸೆಳೆದು,ಅಲ್ಪ ಮತಗಳ ಅಂತರದಿಂದ ಸೋಲುಕಂಡಿದ್ದರು. ಕಾಂಗ್ರೆಸ್ಸಿನ ಕೋಳಿವಾಡ ಜಯ ದಾಖಲಿಸಿದರು.
ಆದರೆ. ಸೋಲುಗಳನ್ನು ಗೆಲುವಿನ ಮೆಟ್ಟಿಲು ಮಾಡಿಕೊಂಡ ಉದ್ಯಮಿ ಶಂಕರ್ ಓದಿರುವುದು ಎಸ್ಎಸ್ ಎಲ್ಸಿ ತನಕ ಮಾತ್ರ. ಬಿಜೆಪಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರ ಸಂಬಂಧಿಯೂ ಆಗಿರುವ ಆರ್ ಶಂಕರ್ ಅವರು ಸಂಖ್ಯಾಬಲ ಮುಖ್ಯವಾದಾಗ, ಬೆಳಗ್ಗೆ ಬಿಜೆಪಿ ಸಂಜೆ ವೇಳೆ ಕಾಂಗ್ರೆಸ್ ಜತೆ ಗುರುತಿಸಿಕೊಂಡು, ಒಳ್ಳೆ ತಿರುವು ನೀಡಿದ್ದನ್ನು ಮರೆಯುವಂತಿಲ್ಲ.