ಸಿಎಂ ಬಿಎಸ್ ವೈ ಹಗಲು-ರಾತ್ರಿ ಏನ್ ವಿಚಾರ ಮಾಡುತ್ತಾರೆ ಗೊತ್ತಾ?
ಹಾವೇರಿ, ನವೆಂಬರ್.28: ಬಳ್ಳಾರಿಯಲ್ಲಿ ಮಾಜಿ ಮುಖ್ಯಂಮಂತ್ರಿ ಸಿದ್ದರಾಮಯ್ಯ ಧೂಮ್ ಎಬ್ಬಿಸಿದರೆ, ಹಿರೇಕೆರೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೌರವನ ಪರ ಸಿಎಂ ಬಿ.ಎಸ್.ಯಡಿಯೂರಪ್ಪ ಕಮಾಲ್ ಮಾಡಿದರು.
ಹೌದು, ಹಿರೇಕೆರೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಬ್ಬರ ಪ್ರಚಾರ ಮಾಡಿದರು. ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಪರ ಬಿಎಸ್ ವೈ ಮತಯಾಚನೆ ಮಾಡಿದರು.
ಹಿರೇಕೆರೂರು ತಾಲೂಕಿನ ಹಂಸಭಾವಿಯಲ್ಲಿ ಮಾತನಾಡಿರುವ ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ನಾಯಕರಿಗೆ ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳು ಕಾಣುತ್ತಲೇ ಇಲ್ಲ. ಬದಲಿಗೆ ನಮ್ಮ ಸರ್ಕಾರವನ್ನು ಅವಮಾನ ಮಾಡುವ ರೀತಿಯಲ್ಲಿ ಸುಖಾ ಸುಮ್ಮನೆ ಮಾತನಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದೇ ರೈತರ ಅಭಿವೃದ್ಧಿಗಾಗಿ. ನಾನು ಮುಂದಿನ ಬಜೆಟ್ ನಲ್ಲಿ ರೈತವರ್ಗಕ್ಕೆ ಯಾವ ಯೋಜನೆ ನೀಡಬೇಕು ಎಂಬುದರ ಬಗ್ಗೆ ಹಗಲು-ರಾತ್ರಿ ಯೋಚಿಸುತ್ತೇನೆ. ಸಿಎಂ ಕುರ್ಚಿ ಏರಿದ ಮೇಲೆ ಯಡಿಯೂರಪ್ಪ ಕಣ್ಣಿಗೆ ಕಾಣಿಸುತ್ತಲೇ ಇಲ್ಲ ಎಂದು ಕಾಂಗ್ರೆಸ್ ದೂಷಿಸುತ್ತದೆ. ಅವರಿಗೇನು ಗೊತ್ತು ನಾನು ಸರ್ಕಾರಿ ಬಂಗಲೆಯಲ್ಲಿಲ್ಲ, ಬದಲಿಗೆ ಸ್ವಂತ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ಕಾಂಗ್ರೆಸ್ ನಾಯಕರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅದಕ್ಕೆಲ್ಲ ನಾನು ಉತ್ತರ ನೀಡಲು ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭದ್ರವಾಗಿ ಇರಲು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಅವರಿಗೆ ಮತ ನೀಡುವಂತೆ ಮತದಾರರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.












Click it and Unblock the Notifications