ಹಾವೇರಿ: ಮಳೆ ಸಮಸ್ಯೆ ಆಲಿಸದ ಗ್ರಾಮ ಪಂಚಾಯತಿ ಅಧ್ಯಕ್ಷನಿಗೆ ಗ್ರಾಮಸ್ಥರಿಂದ ಧರ್ಮದೇಟು
ಹಾವೇರಿ, ಸೆಪ್ಟೆಂಬರ್, 07: ಜಿಲ್ಲೆಯಲ್ಲಿ ಭಾರಿ ಮಳೆ ಸುರಿದು ಅನಾಹುತಗಳು ಸಂಭವಿದರೂ ಕೂಡ ಜನರ ಸಮಸ್ಯೆಗೆ ಸ್ಪಂದಿಸದ ಶಿಶುವಿನಾಳ ಗ್ರಾಮ ಪಂಚಾಯತಿ ಅಧ್ಯಕ್ಷನಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ.
ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗಪ್ಪ ಬೆಂತೂರಗೆ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ. ಮೊನ್ನೆ ರಾತ್ರಿ ಗ್ರಾಮದಲ್ಲಿ ಮನೆ ಕುಸಿದು ಬಸನಗೌಡ ಪಾಟೀಲ ಎಂಬ ಯುವಕ ಮೃತಪಟ್ಟಿದ್ದ. ಯುವಕ ಮೃತಪಟ್ಟ ಘಟನೆ ಸೇರಿದಂತೆ ಗ್ರಾಮದಲ್ಲಿ ಮನೆಗಳು ಬಿದ್ದರೂ ಕೂಡ ಗ್ರಮ ಪಂಚಾಯತಿ ಅಧ್ಯಕ್ಷ ಮಾತ್ರ ಅತ್ತ ಕಡೆ ತೆಲೆಯೂ ಹಾಕಿರಲಿಲ್ಲ. ಆಕ್ರೋಶಗೊಂಡ ಜನ ತಹಶೀಲ್ದಾರ್ ಶಿವಾನಂದ ರಾಣೆ ಜೊತೆ ಇಂದು ಗ್ರಾಮಕ್ಕೆ ಆಗಮಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷನಿಗೆ ಧರ್ಮದೇಟು ನೀಡಿದ್ದಾರೆ.
ಸಾವಿರಾರು ಎಕರೆ ಅಡಿಕೆ ತೋಟ ಜಲಾವೃತ; ಕಂಗಾಲಾದ ದಾವಣಗೆರೆ ಜಿಲ್ಲೆಯ ಅನ್ನದಾತರು
ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗಪ್ಪ ಬೆಂತೂರಗೆಯನ್ನು ಎಳೆದಾಡಿ ಹಿಗ್ಗಾಮುಗ್ಗಾ ಧರ್ಮದೇಟು ಥಳಿಸಿದ್ದಾರೆ. ಅಧ್ಯಕ್ಷನನ್ನು ಬಿಡಿಸಿಕೊಳ್ಳಲು ಹೋದ ಸದಸ್ಯ ನಿಂಗಯ್ಯ ಪೂಜಾರ ಮೇಲೆಯೂ ಕೆಲ ಗ್ರಾಮಸ್ಥರು ಹಲ್ಲೆಗೆ ಮುಂದಾಗಿದ್ದಾರೆ. ನಂತರ ಕೆಲ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಗಲಾಟೆಯನ್ನು ನಿಯಂತ್ರಿಸಿದ್ದಾರೆ. ಈ ಪ್ರಕರಣ ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನು ಕೊಪ್ಪಳ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿಯುತ್ತಿದ್ದು, ಪ್ರವಾಹದಿಂದಾಗಿ ಇಬ್ಬರು ಪೊಲೀಸರು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಆ ಪೈಕಿ ಒಬ್ಬರ ಮೃತದೇಹ ಸಿಕ್ಕಿದ್ದು, ಇನ್ನೊಬ್ಬ ಪೊಲೀಸರ ಶೋಧಕಾರ್ಯ ನಡೆದಿದೆ. ಕುಕನೂರು ತಾಲೂಕಿನ ತೊಂಡಿಹಾಳ ಗ್ರಾಮದ ಬಳಿಯಲ್ಲಿ ಹಳ್ಳ ತುಂಬಿ ಹರಿಯುತ್ತಿದೆ. ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯ ಪೇದೆಗಳಾದ ನಿಂಗಪ್ಪ ಹಲವಾಗಲಿ ಹಾಗೂ ಮಹೇಶ ವಕ್ರದ ಎಂಬುವವರು ಬೈಕ್ನಲ್ಲಿ ಹಳ್ಳ ದಾಟಲು ಯತ್ನಿಸಿದಾಗ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದಾರೆ. ವಿಷಯ ತಿಳಿದು ಕೊಪ್ಪಳ ಅಗ್ನಿ ಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರ ಸಹಾಯದಿಂದ ಕಾರ್ಯಾಚರಣೆ ಮಾಡಿದ್ದು, ಹಳ್ಳದಿಂದ ಸುಮಾರು 8 ಕಿಲೋ ಮೀಟರ್ ದೂರದಲ್ಲಿ ನಿಂಗಪ್ಪನ ಮೃತ ದೇಹ ಪತ್ತೆ ಆಗಿದೆ. ಇನ್ನೂ ಮಹೇಶ್ ನಾಪತ್ತೆಯಾಗಿದ್ದು, ಅವರಿಗಾಗಿ ಅಗ್ನಿ ಶಾಮಕ ದಳವು ಕಾರ್ಯಾಚರಣೆ ಆರಂಭಿಸಿತ್ತು.
ಉಕ್ಕಡಗಾತ್ರಿ; ತುಂಗಾಭದ್ರಾ ನದಿಯಲ್ಲಿ ಮುಳುಗಿದ ಇಬ್ಬರು ಸಹೋದರಿಯರು
ಪ್ರವಾಹ ಪರಿಸ್ಥಿತಿ ಎದುರಿಸಲು ಡಿಸಿ ಸಭೆ
ಇನ್ನು ಗದಗ ಜಿಲ್ಲೆಯಾದ್ಯಂತ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಪ್ರವಾಹ ಪರಿಸ್ಥಿತಿಯನ್ನು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅತ್ಯಂತ ಸಮರ್ಥವಾಗಿ ನಿಭಾಯಿಸುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಮಂಗಳವಾರ ಸಂಜೆ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಯನ್ನು ಮಾಡಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅತಿಯಾದ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ರಸ್ತೆ , ಕೆರೆ, ಕಟ್ಟಡ, ಮನೆಗಳು, ಬೆಳೆಗಳು ಹಾನಿಗೊಳಗಾಗಿವೆ. ಅವುಗಳನ್ನು ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ಎಫ್ ಮಾರ್ಗಸೂಚಿಗಳನ್ವಯ ಸಮೀಕ್ಷೆ ನಡೆಸಿ ಪರಿಹಾರ ಕಾರ್ಯ ಕೈಗೊಳ್ಳಲು ಸೂಚಿಸಿದರು.
ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಕ
ಪ್ರತಿ ತಾಲೂಕಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ನಿಯೋಜಿತ ಅಧಿಕಾರಿಗಳು ತಮ್ಮ ವ್ಯಾಪ್ತಿಯ ತಾಲೂಕು ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕು. ಈ ಕರ್ತವ್ಯ ನಿರ್ವಹಣೆಯಲ್ಲಿ ನಿಷ್ಕಾಳಜಿ ತೋರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು. ತಾಲೂಕು ಆಡಳಿತಗಳು ಪ್ರವಾಹ ಪರಿಸ್ಥಿತಿಯನ್ನು ಅಗ್ನಿಶಾಮಕ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವಿವಿಧ ಹಂತದ ಅಧಿಕಾರಿ ಸಿಬ್ಬಂದಿಗಳ ಸಮನ್ವಯತೆಯೊಂದಿಗೆ ನಿರ್ವಹಿಸಬೇಕು. ಎಲ್ಲ ನೌಕರರು ಕೇಂದ್ರ ಸ್ಥಾನದಲ್ಲಿದ್ದು, ಪ್ರವಾಹ ಪರಿಸ್ಥಿತಿ ನಿಭಾಹಿಸುವುದರೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಶೀಲಾ ಬಿ. ಮಾತನಾಡಿ, "ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಳೆಯಿಂದಾಗಿ ಕಟ್ಟಿದ ಚರಂಡಿಗಳ ಸ್ವಚ್ಛತೆ ಮಾಡಬೇಕು. ಮಳೆ ನೀರು ಸರಾಗವಾಗಿ ಮುಂದೆ ಸಾಗಲು ಅನುವು ಮಾಡಬೇಕು. ಪ್ರವಾಹಕ್ಕೆ ತುತ್ತಾದ ಕುಟುಂಬಗಳನ್ನು ಹತ್ತಿರದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಕಾಳಜಿ ಕೇಂದ್ರಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳು ತಲುಪಿಸುವಲ್ಲಿ ನಿಯೋಜಿತ ನೋಡಲ್ ಅಧಿಕಾರಿಗಳು ಕ್ರಮ ವಹಿಸಬೇಕು. ಎಲ್ಲ ಹಂತದ ಅಧಿಕಾರಿಗಳು ಪರಿಸ್ಥಿತಿಗೆ ಅನುಗುಣವಾಗಿ ಕರ್ತವ್ಯ ಪ್ರಜ್ಞೆ ಹೊಂದಬೇಕು. ಯಾವುದೇ ತರಹದ ಅವಘಡ ಅಥವಾ ಪರಿಸ್ಥಿತಿ ನಿಭಾಯಿಸಲು ತಕ್ಷಣ ದೂರವಾಣಿಗೆ ಲಭ್ಯವಿರುವಂತೆ," ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ ದೇವರಾಜ ಮಾತನಾಡಿ, "ಮಾನವ ಜೀವ ಸಂರಕ್ಷಣೆ ಪ್ರಥಮ ಆದ್ಯತೆ ಆಗಿರಬೇಕು. ಜಾನುವಾರು, ಆಸ್ತಿ ಸಂರಕ್ಷಣೆ ನಂತರ. ಯಾವುದೇ ಪರಿಸ್ಥಿತಿಯಲ್ಲೂ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು, ಸಾರ್ವಜನಿಕರಿಗೆ ಸ್ಪಂದಿಸಬೇಕು. ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿದ್ದು, ಕಾರ್ಯ ನಿರ್ವಹಿಸಬೇಕು," ಎಂದು ತಿಳಿಸಿದರು.
ಪ್ರದೇಶವಾರು ಮಳೆ ಹಾನಿ ಮಾಹಿತಿ
ಹೊಳೆ ಆಲೂರ, ಮೆಣಸಗಿ, ನರಗುಂದ, ರೋಣ, ಸವಡಿ, ಗದಗ, ರಸ್ತೆಗಳು ಪ್ರವಾಹದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಸಂದಿಗವಾಡದಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ಇನ್ನು ಮುಶಿಗೇರಿಯಲ್ಲಿ ಕೆರೆ ಉಕ್ಕಿ ಹರಿಯುತ್ತಿದ್ದು, ಮನೆಗಳಿಗೆ ನೀರು ನುಗ್ಗಿದೆ. ಲಕ್ಕನಕಟ್ಟಿಯಲ್ಲಿ ಸಿಡಿಲಿಗೆ ಒಂದು ಹಸು ಬಲಿಯಾಗಿದದ್ದು, ರೋಣ ತಾಲೂಕಿನಲ್ಲಿ ಒಟ್ಟು 25 ಅಧಿಕ ಮನೆಗಳು ಭಾಗಶ ಹಾನಿಗೊಳಗಾಗಿವೆ. ಲಕ್ಷ್ಮೇಶ್ವರದ ಮಾಡಳ್ಳಿ ಬಿಡ್ಜ್ ಸಂಚಾರ ಸ್ಥಗಿತಗೊಂಡಿದೆ. ಯತ್ನಳ್ಳಿಯಲ್ಲಿ 60 ರಿಂದ 70 ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಥವಾಗಿದೆ. ಬಟ್ಟೂರು ಶೆಟ್ಟಿಕೇರಿಯಲ್ಲಿ ಪ್ರವಾಹದಿಂದಾಗಿ ಸಂತ್ರಸ್ತರಾಗಿದ್ದ 15 ಕುಟುಂಬಗಳನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗೆ ಲಕ್ಷ್ಮೇಶ್ವರನಗರ, ಕೆಂಚಲಾಪುರ, ಅಂಬೇಡ್ಕರ್ ನಗರ, ಬಸವೇಶ್ವರ ನಗರದಲ್ಲಿ ಪಡಿತರ ಕಿಟ್ಗಳನ್ನು ನೀಡಲಾಗುತ್ತಿದೆ.
ನಗರ, ಗ್ರಾಮಗಳಲ್ಲಿ ಗಂಜಿ ಕೇಂದ್ರಗಳ ಆರಂಭ
ಶಿರಹಟ್ಟಿ ತಾಲೂಕಿನಾದ್ಯಂತ 87 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಬನ್ನಿಕೊಪ್ಪದಲ್ಲಿ ಕೋಳಿ ಫಾರ್ಮ್ ಹಾನಿಗೀಡಾಗಿದ್ದು, 75 ಮನೆಗಳು ಜಲಾವೃತವಾಗಿವೆ. ಮುಂಡರಗಿಯ ಡೋಣಿ ಗ್ರಾಮದಲ್ಲಿ 35ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಹಳ್ಳಿಕೇರಿ ಗ್ರಾಮದಲ್ಲಿ ಓರ್ವ ಮತಪಟ್ಟಿದ್ದಾನೆ. ಗದಗದ ಕಲ್ಲೂರು, ಕಣವಿ, ಹರ್ತಿ, ಬೆಳದಡಿಯಲ್ಲಿ ತಗ್ಗುಪ್ರದೇಶದ ಮನೆಗಳು ಜಲಾವೃತವಾಗಿವೆ. ತಾಲೂಕಿನಲ್ಲಿ 9 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 6 ನಗರ ಪ್ರದೇಶ, 3 ಗ್ರಾಮೀಣ ಪ್ರದೇಶದಲ್ಲಿ ತೆರೆದು ತಾತ್ಕಾಲಿಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಆಯಾ ತಾಲೂಕಿನ ನೋಡಲ್ ಅಧಿಕಾರಿಗಳು ಹಾಗೂ ತಹಶೀಲ್ದಾರರು ಸಭೆಯ ಗಮನಕ್ಕೆ ತಂದಿದ್ದಾರೆ. ಬೆಳೆ ಹಾಗೂ ಮನೆ ಹಾನಿ ಕುರಿತಂತೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದ್ದು, ಶೀಘ್ರವೇ ಹಾನಿ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು ಎಂದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಡಿಡಿಪಿಐ ಬಸವಲಿಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಕೃಷಿ ಇಲಾಖೆಯ ಉಪನಿರ್ದೇಶಕ ಕರಿಯಪ್ಪ , ಆಹಾರ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಕಾರ್ಮಿಕ ಇಲಾಖೆಯ ಅಧಿಕಾರಿ ಸುಧಾ ಗರಗ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ.ಕಂಬಾಳಿಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ್ ನುಚ್ಚಿನ್ ಸೇರಿದಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಉಪಸ್ಥಿತರಿದ್ದರು.