ಇಸ್ಲಾಂ ವಿರುದ್ಧ ಅವಹೇಳನಕಾರಿ ಪೋಸ್ಟ್– ದುಬೈನಲ್ಲಿ ಕೆಲಸದಿಂದ ಹಾವೇರಿ ಯುವಕ ವಜಾ
ಹಾವೇರಿ, ಏಪ್ರಿಲ್ 11: ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಎಂಬ ಕಾರಣಕ್ಕೆ ದುಬೈನಲ್ಲಿ ಕೆಲಸದಲ್ಲಿದ್ದ ಹಾವೇರಿ ಮೂಲದ ಯುವಕನನ್ನು ನೌಕರಿಯಿಂದ ವಜಾ ಮಾಡಲಾಗಿದ್ದು, ಆತನಿಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿರುವುದಾಗಿ ತಿಳಿದುಬಂದಿದೆ.
ರಾಣೇಬೆನ್ನೂರಿನ ರಾಕೇಶ್ ಬಿ. ಕಿತ್ತೂರಮಠ್ ದುಬೈನ ಯುಎಇಯ ಎಮ್ರಿಲ್ ಸರ್ವೀಸ್ ಎಂಬ ಖಾಸಗಿ ಸಂಸ್ಥೆಯಲ್ಲಿ ಟೀಮ್ ಲೀಡರ್ ಆಗಿದ್ದ. ಕೊರೊನಾ ವೈರಸ್ ವಿಚಾರದಲ್ಲಿ ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಅನ್ನು ಫೇಸ್ಬುಕ್ ನಲ್ಲಿ ರಾಕೇಶ್ ಹಾಕಿದ್ದ ಎನ್ನಲಾಗಿದೆ. ಈ ಪೋಸ್ಟ್ ಪ್ರಕಟವಾಗಿದ್ದನ್ನು ಗಮನಿಸಿದ್ದ ಸಂಸ್ಥೆ ರಾಕೇಶ್ ನನ್ನು ವಜಾಗೊಳಿಸಿರುವುದಾಗಿ ತಿಳಿದುಬಂದಿದೆ.
"ರಾಕೇಶ್ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಈ ಕಾರಣಕ್ಕೆ ಸಂಸ್ಥೆಯಿಂದ ರಾಕೇಶ್ ವಜಾಗೊಂಡಿದ್ದು, ದುಬೈ ಪೊಲೀಸರಿಗೆ ಹಸ್ತಾಂತರಿಸಲಾಗುವುದು. ಯಾವುದೇ ಧರ್ಮದ ವಿರುದ್ಧ ಪೋಸ್ಟ್ ಮಾಡುವವರನ್ನು ಸಂಸ್ಥೆ ಕ್ಷಮಿಸುವುದಿಲ್ಲ" ಎಂದು ಹೇಳಿದ್ದಾರೆ ಎಮ್ರಿಲ್ ಸರ್ವಿಸಸ್ ನ ಸಿಇಒ ಸ್ಟುವರ್ಟ್ ಹ್ಯಾರಿಸನ್.

ಈಗ ಯುಎಇನಲ್ಲಿ ರಾಕೇಶ್ ನೆಲೆಸಿದ್ದಾರೋ, ಇಲ್ಲವೋ ಎನ್ನುವುದನ್ನು ಸಂಸ್ಥೆ ಪತ್ತೆ ಮಾಡುತ್ತಿದೆ. ಅವರು ಇನ್ನೂ ದುಬೈನಲ್ಲೇ ಇದ್ದರೆ ದುಬೈ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಎಲ್ಲಾ ಧಾರ್ಮಿಕ ಅಥವಾ ಜನಾಂಗೀಯ ತಾರತಮ್ಯ ನಿಷೇಧಿಸಿ ಯುಎಇ 2015ರಲ್ಲಿ ಕಾನೂನು ತಂದಿದೆ. ಯಾವುದೇ ಧರ್ಮವನ್ನು ನಿಂದಿಸಿ ಅಭಿಪ್ರಾಯ ನೀಡುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ.
ಈ ಮೊದಲು ಅಬುಧಾಬಿ ನಿವಾಸಿ ಮಿತೇಶ್ ಉದೇಶಿ ಇಸ್ಲಾಂ ವ್ಯಂಗ್ಯಚಿತ್ರ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಈ ಸಂಬಂಧ ದೂರು ದಾಖಲಾಗಿ ಆತನನ್ನು ಕೆಲಸದಿಂದ ವಜಾ ಮಾಡಲಾಗಿತ್ತು.












Click it and Unblock the Notifications