ಹಾವೇರಿ: ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 80 ಶಾಲಾ ಮಕ್ಕಳು ಅಸ್ವಸ್ಥ
ರಾಣೆಬೆನ್ನೂರು ಡಿಸೆಂಬರ್ 28: ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆಯೇ ಹಾವೇರಿಯ ರಾಣೆಬೆನ್ನೂರು ತಾಲೂಕಿನಲ್ಲಿ ಅಘಾತಕಾರಿ ಸುದ್ದಿಯೊಂದು ಹೊರಬಂದಿದೆ. ಕರ್ನಾಟಕದ ಹಾವೇರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮಧ್ಯಾಹ್ನದ ಊಟದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದು, ಬಿಸಿ ಊಟ ಸೇವಿಸಿದ 80 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಮಾಹಿತಿ ಪ್ರಕಾರ, ಈ ಪ್ರಕರಣ ಹಾವೇರಿ ಜಿಲ್ಲೆಯ ವೆಂಕಟಾಪುರ ತಾಂಡಾ ಗ್ರಾಮದ ಸರ್ಕಾರಿ ಶಾಲೆಯದ್ದಾಗಿದೆ. ಮಧ್ಯಾಹ್ನದ ಊಟ ಸೇವಿಸಿ ಅಸ್ವಸ್ಥರಾದ ಎಲ್ಲ 80 ಮಕ್ಕಳನ್ನು ರಾಣಿಬೆನ್ನೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕಿತ್ಸೆ ನಂತರ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಈ ಘಟನೆ ಬೆಳಕಿಗೆ ಬಂದ ನಂತರ ಶಾಲೆಯ ವಿರುದ್ದ ಕಠಿಣ ಕ್ರಮಕ್ಕೆ ಪೋಷಕರು ಆಗ್ರಹಿಸಿದ್ದಾರೆ. ಈ ಘಟನೆಗೆ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಈ ನಿರ್ಲಕ್ಷ್ಯಕ್ಕೆ ಶಾಲೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತವು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಅಡುಗೆ ಮಾಡುವಾಗ ಶುಚಿ ಬಗ್ಗೆ ಕಾಳಜಿ ವಹಿಸದ ಆಡಳಿತದ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಕೊರೊನಾ ಕಾರಣದಿಂದ ಕಳೆದ ಕೆಲ ವರ್ಷದಿಂದ ಬಂದ್ ಮಾಡಲಾಗಿದ್ದ ಶಾಲೆಗಳು ಈಗಷ್ಟೇ ಬಾಗಿಲು ತೆರೆದಿವೆ. ಕೊರೊನಾ ಕಾಟ ಇನ್ನೂ ಅಂತ್ಯಗೊಂಡಿಲ್ಲ. ಮಕ್ಕಳಿಗೆ ಇನ್ನೂ ಲಸಿಕೆ ಹಾಕಿಲ್ಲ. ಹೀಗಿರುವಾಗ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಊಟದ ಬಗ್ಗೆ ಇಷ್ಟು ನಿರ್ಲಕ್ಷ್ಯ ತೋರುವ ಆಡಳಿತ ಕೊರೊನಾ ಬಗ್ಗೆ ಇನ್ನೇನು ಕಾಳಜಿ ವಹಿಸುತ್ತದೆ ಎನ್ನುವ ಆತಂಕ ಪೋಷಕರಲ್ಲಿ ಮೂಡಿದೆ. ಶಾಲೆಯ ಮಧ್ಯಾಹ್ನದ ಊಟದಲ್ಲಿ ನಿರ್ಲಕ್ಷ್ಯದ ಘಟನೆ ಬೆಳಕಿಗೆ ಬರುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ತಮಿಳುನಾಡಿನ ಶಾಲೆಯೊಂದರಲ್ಲಿ ಮಕ್ಕಳ ಮಧ್ಯಾಹ್ನದ ಊಟದಲ್ಲಿ ಕೊಳೆತ ಮೊಟ್ಟೆಗಳು ಪತ್ತೆಯಾಗಿದ್ದವು.
ಕಳೆದ ಮೂರ್ನಾಲ್ಕು ದಿನದ ಹಿಂದೆ ಕರೂರ್ ಸರ್ಕಾರಿ ಶಾಲೆಯಲ್ಲಿ ಕೊಳೆತ ಮೊಟ್ಟೆಗಳನ್ನು ನೀಡಲಾಗುತ್ತದೆ ಎಂಬ ಆರೋಪದ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪೂರೈಕೆ ಮಾಡಲು ಉದ್ದೇಶಿಸಲಾಗಿದ್ದ ಹುಳುಕಾದ ಕೊಳೆತ ಮೊಟ್ಟೆಗಳನ್ನು ಶುಕ್ರವಾರ ಚಿತ್ರೀಕರಿಸಿದ ವಿಡಿಯೋ ವೈರಲ್ ಆಗಿದೆ.
ನಾಗನೂರಿನ ಪಂಚಾಯತಿ ಯೂನಿಯನ್ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟದ ಕಾರ್ಯಕ್ರಮದಡಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಮೊಟ್ಟೆಗಳ ಗುಣಮಟ್ಟದ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಮಧ್ಯಾಹ್ನ ಗ್ರಾಮಸ್ಥರು ಮತ್ತು ಪೋಷಕರು ಸಂಸ್ಥೆಗೆ ಭೇಟಿ ನೀಡಿ ಊಟದ ವಿರಾಮದ ವೇಳೆ ವಿತರಿಸಿದ ಆಹಾರವನ್ನು ಪರಿಶೀಲಿಸಿದರು.
ನಂತರ ಆವರಣದಲ್ಲಿ ಶೇಖರಿಸಿಟ್ಟಿದ್ದ ಹುಳುಗಳ ಸಹಿತ ಕೊಳೆತ ಮೊಟ್ಟೆಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಶಿಕ್ಷಕರು ಮತ್ತು ಅಡುಗೆಯವರು ಅದಕ್ಕೆ ತೃಪ್ತಿಕರ ಉತ್ತರವನ್ನು ನೀಡಲು ವಿಫಲವಾದ ಕಾರಣ, ಗುಂಪು ಶೇಖರಿಸಿಟ್ಟ ಮೊಟ್ಟೆಗಳನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿ, ಅಧಿಕೃತ ಕ್ರಮಕ್ಕೆ ಒತ್ತಾಯಿಸಿದರು.
ಈ ಬಗ್ಗೆ ತೊಗಮಲೈ BDO ಹೇಳಿದ್ದು ಹೀಗೆ, "ಇವೆಲ್ಲವೂ ಸುಳ್ಳು ಆರೋಪಗಳು. ಶಿಕ್ಷಕರೊಂದಿಗಿನ ದ್ವೇಷದ ಕಾರಣ, ಶುಕ್ರವಾರ ಶಾಲೆಗೆ ಭೇಟಿ ನೀಡಿದ PTA (ಪೋಷಕ ಶಿಕ್ಷಕರ ಸಂಘ) ದ ಪದಾಧಿಕಾರಿಯೊಬ್ಬರು ವೀಡಿಯೊ ರೆಕಾರ್ಡ್ ಮಾಡಿ ತಪ್ಪು ಮಾಹಿತಿ ಹರಡಲು ಪ್ರಾರಂಭಿಸಿದರು. ಪ್ರತಿ ದಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮೊಟ್ಟೆ ನೀಡುತ್ತಿದ್ದು, ಮುಖ್ಯೋಪಾಧ್ಯಾಯರು ಗುಣಮಟ್ಟದ ಮೇಲೆ ನಿಗಾ ವಹಿಸಿದ್ದಾರೆ. ಪೋಷಕರು ಸುಳ್ಳು ಪ್ರಚಾರಕ್ಕೆ ಬೀಳದಂತೆ ಮನವಿ ಮಾಡುತ್ತೇನೆ" ಎಂದು ಸಮರ್ಥರಿಸಿಕೊಂಡಿದ್ದಾರೆ.