ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು 3 ವರ್ಷದ ಮಗುವಿನೊಂದಿಗೆ ಮಹಿಳೆ ಆತ್ಮಹತ್ಯೆ
ಹಾಸನ, ನವೆಂಬರ್ 21: ಗಂಡ ಮತ್ತು ಅತ್ತೆಯ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ಮೂರು ವರ್ಷದ ಮಗುವಿನನೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಕುಂಚೇವು ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶ್ರೀನಿವಾಸ ಎಂಬುವವರ ಪತ್ನಿ ಭವ್ಯ (23) ಹಾಗೂ ವೇದಾಂತ್ (3) ಮೃತರು.
ನವೆಂಬರ್ 18 ಶನಿವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಭವ್ಯ ಅಂಗನವಾಡಿಯಿಂದ ಮಗನನ್ನು ಕರೆದುಕೊಂಡು ನಾಲೆಕಡೆಗೆ ತೆರಳಿದ್ದಾರೆ. ಇದನ್ನು ಗಮನಿಸಿದ ಕೆಲವರು ಕೂಗಿದರೂ ಕಿವಿಗೊಡದ ಭವ್ಯ ನಾಲೆಗೆ ಹಾರಿದ್ದಾರೆ. ಕೆಲವರು ರಕ್ಷಣೆಗೆ ಇಳಿದರಾದರೂ ನಾಲೆಯಲ್ಲಿ ನೀರು ವೇಗವಾಗಿ ಹರಿಯುತ್ತಿದ್ದ ಕಾರಣ ತಾಯಿ ಮಗು ಕೊಚ್ಚಿ ಹೋಗಿದ್ದಾರೆ. ಎರಡು ದಿನಗಳ ಕಾಲ ರಕ್ಷಣಾ ಇಲಾಖೆ ಶವಕ್ಕಾಗಿ ಹುಡುಕಾಟ ನಡೆಸಿತ್ತು. ಸೋಮವಾರ ಬೆಳಿಗ್ಗೆ ಚನ್ನರಾಯಪಟ್ಟಣ ತಾಲ್ಲೂಕಿನ ಗೆಜ್ಜಗಾರನಹಳ್ಳಿ ಬಳಿಯ ನಾಲೆಯಲ್ಲಿ ಮಗುವಿನ ಶವ ದೊರೆತರೆ, ಭವ್ಯ ಶವ ದೊಡ್ಡಕುಂಚೇವು ಗ್ರಾಮದ ಬಳಿಯ ಕೆರೆಯಲ್ಲಿ ಸಿಕ್ಕಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಗೆಜ್ಜಗಾರನಹಳ್ಳಿ ಗ್ರಾಮದ ಭವ್ಯಾಳನ್ನು ದೊಡ್ಡಕುಂಚೇವು ಕೊಪ್ಪಲು ಗ್ರಾಮದ ಶ್ರೀನಿವಾಸ್ ಎಂಬುವವರಿಗೆ ವಿವಾಹ ಮಾಡಿಕೊಡಲಾಗಿತ್ತು. ಭವ್ಯ ನೋಡಲು ಚೆನ್ನಾಗಿದ್ದರಿಂದ ವರದಕ್ಷಿಣೆ ಪಡೆಯದೇ ಶ್ರೀನಿವಾಸ್ ವಿವಾಗ ಮಾಡಿಕೊಂಡಿದ್ದ. ಮದುವೆಯಾದ ಆರಂಭದಲ್ಲಿ ಗಂಡ ಹೆಂಡತಿ ಅನ್ಯೋನ್ಯವಾಗಿದ್ದರು. ದಂಪತಿಗೆ ಒಂದು ಗಂಡು ಮಗುವಿತ್ತು. ಆದರೆ ಕೆಲವು ದಿನಗಳಿಂದ ಶ್ರೀನಿವಾಸ್ ಅನೈತಿಕ ಸಂಬಂಧ ವಿಚಾರವಾಗಿ ಜಗಳ ನಡೆದು ರಾಜಿ ಸಂದಾನ ನಡೆಸಲಾಗಿತ್ತು. ಆದರೂ ಗಂಡನೊಂದಿಗೆ ಉತ್ತಮ ಒಡನಾಟವಿಲ್ಲದೆ, ಇತ್ತ ಅತ್ತೆಯ ಕಾಟದಿಂದ ಬೇಸತ್ತು ಭವ್ಯ 3 ತಿಂಗಳ ಅಸುಳೆಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದಲ್ಲದೆ ವರದಕ್ಷಿಣೆ ವಿಚಾರವಾಗಿ ಜಗಳ ನಡೆದು ಶ್ರೀನಿವಾಸ್ ಭವ್ಯ ಮೇಲೆ ಹಲ್ಲೆ ಮಾಡುತ್ತಿದ್ದ. ಗಂಡನ ಮನೆಯಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ಭವ್ಯ ತನ್ನ ತಾಯಿ ಬಳಿ ಹೇಳಿಕೊಂಡಿದ್ದರು. ಗ್ರಾಮದ ಹಿರಿಯರು, ಸಂಬಂಧಿಕರು ಸೇರಿ ಹತ್ತಕ್ಕು ಹೆಚ್ಚು ಭಾರಿ ಪಂಚಾಯ್ತಿ ಮಾಡಿ ರಾಜಿ ಸಂಧಾನ ಮಾಡಿಸಿದ್ದರು. ಆದರೂ ತಾಯಿಗೆ ಕರೆ ಮಾಡುತ್ತಾಳೆಂದು ಮೊಬೈಲ್ ಕಿತ್ತುಕೊಂಡಿದ್ದ ಎನ್ನಲಾಗಿದೆ. ಅಲ್ಲದೆ ಶ್ರೀನಿವಾಸ್, ಅಕ್ಕಯಮ್ಮ ಯಾವುದಾದರೂ ಸಭೆ ಸಮಾರಂಭಕ್ಕೆ ಹೋಗುವಾಗ ಭವ್ಯ ಮತ್ತು ಮಗುವನ್ನು ಮನೆಯಲ್ಲಿ ಕೂಡಿ ಹಾಕಿ ಬೀಗ ಹಾಕಿಕೊಂಡು ಹೋಗುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಇತ್ತೀಚೆಗೆ ಶ್ರೀನಿವಾಸ್ ಹಾಗೂ ಅಕ್ಕಯಮ್ಮ ಸಂಬಂಧಕರ ಮನೆಗೆ ತೆರಳಿದ್ದರು. ಈ ವೇಳೆ ಮೂರು ದಿನಗಳ ಕಾಲ ಭವ್ಯ ಹಾಗೂ ಮಗುವನ್ನು ಮನೆಯಲ್ಲಿ ಕೂಡಿ ಹಾಕಿದ್ದರು. ತಿನ್ನಲು ಊಟವಿಲ್ಲದೆ ಭವ್ಯ ಹಾಗೂ ಮಗು ನರಳಾಡಿದ್ದರು. ಕೊನೆಗೆ ಕಿಟಕಿಯಲ್ಲಿ ಗ್ರಾಮದ ಯುವಕನ ಬಳಿ ಬಿಸ್ಕೆಟ್ ತರಿಸಿಕೊಂಡು ಮಗುವಿಗೆ ತಿನ್ನಿಸಿದ್ದರು. ನವೆಂಬರ್ 18 ರಂದು ಇದೆಲ್ಲವನ್ನು ತನ್ನ ತಾಯಿಗೆ ಕರೆ ಮಾಡಿ ಅಳಲು ಹೇಳಿಕೊಂಡಿದ್ದ ಭವ್ಯ ಕೊನೆಗೆ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ.
ಭವ್ಯ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆ ಪತಿ ಶ್ರೀನಿವಾಸ್ ಹಾಗೂ ಅತ್ತೆ ಅಕ್ಕಯಮ್ಮ ನಾಪತ್ತೆಯಾಗಿದ್ದಾರೆ. ಹೊಳೆನರಸೀಪುರ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications