ಕೆಡಿಪಿ ಸಭೆ: ರೇವಣ್ಣ - ಪ್ರೀತಂ ಗೌಡ ನಡುವೆ ಮಾತಿನ ಚಕಮಕಿ
ಹಾಸನ, ನವೆಂಬರ್ 9 : ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಬುಧವಾರದಂದು ನಡೆದ ಕೆಡಿಪಿ ಸಭೆಯಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಹಾಸನ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಪರಸ್ಪರ ಏಕವಚನದಲ್ಲಿ ವಾಕ್ಸಮರ ನಡೆಸಿದ್ದಾರೆ.
ಚನ್ನಪಟ್ಟಣದ ಕೆರೆಗೆ ಬಿಡುಗಡೆಯಾಗಿದ್ದ 144 ಕೋಟಿ ವಿಚಾರವಾಗಿ ಪ್ರಾರಂಭವಾದ ಗದ್ದಲ ಇಬ್ಬರ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು. ಇದನ್ನು ಗಮನಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ವಿವಿಧ ಇಲಾಖೆಯ ಅಧಿಕಾರಿ ವರ್ಗವೂ ಮೂಕ ಪ್ರೇಕ್ಷಕರಂತೆ ಕುಳಿತುಕೊಂಡು ಆಲಿಸಿದರು.
ಶಾಸಕ ಪ್ರೀತಮ್ ಗೌಡರ ಮಾತಿಗೆ ಸಿಟ್ಟಿಗೆದ್ದ ರೇವಣ್ಣನವರು ನಮ್ಮ ಸರಕಾರವಧಿಯಲ್ಲಿ ತರಲಾದ 144 ಕೋಟಿ ರೂಗಳ ಅನುದಾನವನ್ನು ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಮೀಸಲಿಡಲಾಗಿತ್ತು. ಈಗ ಆ ಯೋಜನೆ ಹಣವನ್ನು ಬೇರೆ ಬೇರೆ ಕಾಮಗಾರಿಗಳಿಗೆ ಬಳಸಲಾಗಿದೆ. ಆದರೆ ಆ ಕಾಮಗಾರಿಯೂ ಕೂಡ ಸರಿಯಾದ ರೀತಿ ಆಗುತ್ತಿಲ್ಲ. ಲೋಪವಾಗುತ್ತಿದೆ ಎಂದು ಆರೋಪಿಸಿದಲ್ಲದೆ, ಎಲ್ಲಾ ಕಾಮಗಾರಿಗೂ ತನಿಖೆ ಆಗಬೇಕು, ಹಾಸನ ಕ್ಷೇತ್ರದಲ್ಲಿನ ಅವ್ಯವಹಾರಗಳನ್ನು 2023ರ ಚುನಾವಣೆಯಲ್ಲಿ ಗೆದ್ದು ಸರಿ ಮಾಡುತ್ತೇವೆ ಎಂದರು.

ಇದಕ್ಕೆ ಉತ್ತರಿಸಿದ ಶಾಸಕ ಪ್ರೀತಮ್ ಗೌಡ ಅವರು, "ಯಾವ ತನಿಖೆ ಬೇಕಾದರೂ ಮಾಡಿಸಲಿ ನಾನು ಹೆದರಲ್ಲ. ಕ್ಯಾಬಿನೆಟ್ ನಿರ್ಧಾರವನ್ನು ಇಲ್ಲಿ ಚರ್ಚೆ ನಡೆಸುದ ಹೊಸ ಸಂಪ್ರದಾಯವಿದ್ದರೆ ನಡೆಸಿ, ಕ್ಯಾಬಿನೆಟನ್ನು ಕೆಡಿಪಿ ಮಟ್ಟಕ್ಕೆ ಇಳಿಸಬೇಡಿ. ಈ ಬಗ್ಗೆ ಹೇಳಬೇಕಾದವರು ಈ ಕ್ಷೇತ್ರದ ಮತದಾರರು. ಈ ಕ್ಷೇತ್ರದ ಶಾಸಕರು. ಅದನ್ನು ಬಿಟ್ಟು ಬೇರೆ ಕ್ಷೇತ್ರದ ಶಾಸಕರು, ಈ ಬಗ್ಗೆ ಹೇಳಿದರೆ ಅದಕ್ಕೆ ಇಲ್ಲಿ ಅವಕಾಶವಿಲ್ಲ" ಎಂದು ರೇವಣ್ಣನವರ ಆರೋಪಕ್ಕೆ ಸ್ಥಳದಲ್ಲೆ ತಿರುಗೇಟು ನೀಡಿದರು.
ಇಬ್ಬರು ಶಾಸಕರ ನಡುವೆ ಮಧ್ಯ ಪ್ರವೇಶ ಮಾಡಿದ ಜಿಲ್ಲಾ ಉಸ್ತುವಾರಿ ಕೆ.ಗೋಪಾಲಯ್ಯ ವಿರುದ್ಧವು ರೇವಣ್ಣನವರು ಅಸಮಧಾನ ಪ್ರದರ್ಶಿಸಿದರು. ನೀರಾವರಿಯಲ್ಲಿ ಅನುಧಾನ ಕೊಡಿಸುತ್ತೇನೆ ಎಂದಿದ್ರಿ ಎಂದು ರೇವಣ್ಣನವರ ಮಾತಿಗೆ ಪ್ರೀತಮ್ ಮಧ್ಯ ಪ್ರವೇಶಿಸಿ ಹಳೇಬೀಡು ಕೆರೆಗೆ ಅನುದಾನ ಕೊಟ್ಟಿಲ್ವಾ ಎಂದರು. ಸಚಿವರ ಜೊತೆ ಮಾತನಾಡುವಾಗ ಮಧ್ಯ ಪ್ರವೇಶಿಸುವುದಕ್ಕೆ ನಿಮಗೆ ನಾಚಿಕೆ ಆಗಬೇಕು ಎಂದು ರೇವಣ್ಣ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಪ್ರೀತಮ್ ಅವರು ನಾಚಿಕೆ ಯಾರಿಗೆ ಆಗಬೇಕು ಅವರಿಗೆ ಆಗಲಿ ಎಂದು ಗುಡಿಗಿದರು.
ನಂತರ ಹಳೇಬೀಡಿನ ಕೆರೆಗೆ ಕುಮಾರಸ್ವಾಮಿ ಅನುಧಾನ ನೀಡಿದ್ದು ಎಂದಿದ್ದಕ್ಕೆ ಉತ್ತರಿಸಿದ ಶಾಸಕ ಪ್ರೀತಮ್, ಬಜೆಟ್ನಲ್ಲಿ ಅನೌನ್ಸ್ ಮಾಡಿ ಮನೆಗೆ ಹೋಗುವುದಲ್ಲ. ಕೆಲಸ ಮಾಡಿಸಬೇಕು ಎಂದ ಅವರು, ರಾಜಕೀಯವನ್ನು ಹೊರಗೆ ಮಾತನಾಡೋಣ, ನಾವೇನು ಹೆದರಿಕೊಂಡು ಓಡಿಹೋಗುವುದಿಲ್ಲ. 2023ಕ್ಕೆ ನೀವು ಬನ್ನಿ ಎಂದು ಕರೆಯುತ್ತಲೇ ಇದ್ದೇನೆ ಎಂಧು ರೇವಣ್ಣರನ್ನು ಛೇಡಿಸಿದರು.
ಯಡಿಯೂರಪ್ಪ ಸರಕಾರದಿಂದ ಜಿಲ್ಲೆಗೆ ತಾರತಮ್ಯವಾಗಿದೆ, ಕೇಂದ್ರದಿಂದಲೂ ಜಿಲ್ಲೆಗೆ ತಾರತಮ್ಯವಾಗಿದೆ ಎಂಬ ರೇವಣ್ಣ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರೀತಮ್ ಗೌಡ, " ಯಡಿಯೂರಪ್ಪ ಅವರ ಸರಕಾರದಿಂದಲೇ ಹಾಸನದ ವಿಮಾನ ನಿಲ್ದಾಣ ಕಾಮಗಾರಿ ಆರಂಭಗೊಂಡಿದ್ದು, ಹಾಸನ ನಗರದ ಹಾಗೂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮೂಲ ಸೌಕರ್ಯಗಳಿಗೆ ಯಡಿಯೂರಪ್ಪರೇ ಬರಬೇಕಾಯಿತು. ಹಾಸನ ನಗರದ ಹೊಸ ಯುಜಿಡಿ ಅಳವಡಿಕೆಗೂ ಯಡಿಯೂರಪ್ಪನವರೇ ಬರಬೇಕಾಯಿತು. ಇಲ್ಲಿ ಯಡಿಯೂರಪ್ಪ ಅವರ ಬಗ್ಗೆ ಮಾತನಾಡಲು ಯಾರಿಗೂ ನೈತಿಕತೆ ಇಲ್ಲವೆಂದು ರೇವಣ್ಣರನ್ನು ತರಾಟೆಗೆ ತೆಗೆದುಕೊಂಡರು.
ನೀವು ಕೇಂದ್ರ ಸರಕಾರದ ಬಳಿ ಮೋದಿ ಅವರ ಬಳಿ, ನಿತಿನ್ ಗಡ್ಕರಿ ಅವರ ಬಳಿ ಹೋಗಿ ಸಾವಿರಾರು ಕೋಟಿ ತಂದಿದ್ದೀರಿ , ನೀವೆ 2018ರಲ್ಲಿ ನಗರದಲ್ಲಿ ಬೃಹತ್ ಕಾರ್ಯಕ್ರಮ ಮಾಡಿ ಗಡ್ಕರಿ ಅವರನ್ನು ಹೊಗಳಿದ್ದೀರಿ, ಈಗ ಕೆಡಿಪಿ ಸಭೆಯಲ್ಲಿ ಕೇಂದ್ರದಿಂದ ಅನ್ಯಾಯವಾಗಿದೆ ಎಂದು ಬೊಬ್ಬೆ ಇಡುತ್ತಿದ್ದೀರಿ ಎಂದು ರೇವಣ್ಣ ವಿರುದ್ಧ ಪ್ರೀತಮ್ ವಾಗ್ದಾಳಿ ನಡೆಸಿದರು.












Click it and Unblock the Notifications