ಚನ್ನರಾಯಪಟ್ಟಣ ಜೆಡಿಎಸ್ ಕಾರ್ಯಕರ್ತನ ಕೊಲೆ ಕೇಸಿಗೆ ಟ್ವಿಸ್ಟ್
ಚನ್ನರಾಯಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತನ ಹತ್ಯೆ ಪ್ರಕರಣದ ಆರೋಪಿ ಸಾವು. ಬಂಧಿಸಲು ಬಂದಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಲಾರಿಗೆ ಸಿಲುಕಿ ಸಾವನ್ನಪ್ಪಿದ ಆರೋಪಿ.
ಹಾಸನ, ಸೆಪ್ಟಂಬರ್ 1: ಚನ್ನರಾಯಪಟ್ಟಣ ತಾಲೂಕಿನ ದಂಡಿಗನ ಹಳ್ಳಿ ಹೋಬಳಿಯಲ್ಲಿ ಇತ್ತೀಚೆಗೆ ನಡೆದಿದ್ದ ಜೆಡಿಎಸ್ ಕಾರ್ಯಕರ್ತ ನವೀನ್ ಎಂಬಾತನ ಕೊಲೆ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ.
ಚನ್ನರಾಯಪಟ್ಟಣದಲ್ಲಿ ರುಂಡ ಕಡಿದು ಜೆಡಿಎಸ್ ಕಾರ್ಯಕರ್ತನ ಕೊಲೆ
ಕೊಲೆಯ ತನಿಖೆ ನಡೆಸುತ್ತಿದ್ದ ಪೊಲೀಸರು ಅನಿಲ್ ಎಂಬಾತ ಈ ಕೊಲೆ ನಡೆಸಿದ್ದನ್ನು ಪತ್ತೆ ಹಚ್ಚಿದ್ದಾರೆ. ಆತನ ಜಾಡನ್ನು ಬೇಧಿಸಿದ ಪೊಲೀಸರು ಗುರುವಾರ (ಆಗಸ್ಟ್ 31) ರಾತ್ರಿ ಆತನನ್ನು ಸೆರೆಹಿಡಿಯಲು ಮುಂದಾದಾಗ, ಪೊಲೀಸರಿಂದ ತಪ್ಪಿಸಿಕೊಂಡು ಓಡುತ್ತಿದ್ದ ಅನಿಲ್, ಬರಗೂರು ಪೋಸ್ಟ್ ಬಳಿ ಲಾರಿಯೊಂದಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.
ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಜೆಡಿಎಸ್ ಕಾರ್ಯಕರ್ತ ನವೀನ್ (27) ರುಂಡವನ್ನು ಕತ್ತರಿಸಿ ಕೊಲೆ ಮಾಡಲಾಗಿತ್ತು. ಎ.ಕಾಳೇನಹಳ್ಳಿ ಬಳಿಯ ಕಬ್ಬಿನ ಗದ್ದೆಯಲ್ಲಿ ಸೋಮವಾರ ಹಾಡಹಗಲೇ ನವೀನ್ ರ ತಲೆ ಕಡಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಗದ್ದೆ ಶ್ರೀನಾಥ್ ಎಂಬವರಿಗೆ ಸೇರಿದ್ದು ಕಬ್ಬಿನ ಗದ್ದೆಯಲ್ಲಿ ರುಂಡವಿಲ್ಲದ ಶವ ಪತ್ತೆಯಾಗಿದೆ.