ಪ್ರಾದೇಶಿಕ ಪಕ್ಷ ಆಡಳಿತ ರಾಜ್ಯಗಳು ಅಭಿವೃದ್ಧಿಯತ್ತ ಸಾಗುತ್ತಿವೆ, ಯೋಚ್ನೆ ಮಾಡಿ: ಹಾಸನದ ಮತದಾರರಿಗೆ ರೇವಣ್ಣ ಕಿವಿಮಾತು
ಹಾಸನ, ಏಪ್ರಿಲ್, 28: ವಿಧಾನಸಭೆ ಚುನಾವಣೆ ಹಿನ್ನೆಲೆ ಜೆಡಿಎಸ್ ಪಕ್ಷದಿಂದ ಗುರುವಾರ (ಏಪ್ರಿಲ್ 27) ಎಚ್.ಡಿ.ಕುಮಾರಸ್ವಾಮಿಯವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರು. ಈ ಕುರಿತು ಇಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಸನದಲ್ಲಿ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಪ್ರಾದೇಶಿಕ ಪಕ್ಷ ಇರುವ ರಾಜ್ಯಗಳು ಅಭಿವೃದ್ಧಿ ದಿಕ್ಕಿನತ್ತ ಹೋಗುತ್ತಿವೆ. ಆದ್ದರಿಂದ ಜೆಡಿಎಸ್ ಅನ್ನು ಈ ಬಾರಿಗೆ ಗೆಲ್ಲಿಸಿ ಎಂದು ಜನರಿಗೆ ಮನವಿ ಮಾಡಿದರು.
ತಮಿಳುನಾಡು, ತೆಲಂಗಾಣದಲ್ಲಿನ ಮುಖ್ಯಮಂತ್ರಿಗಳು ಜನರಿಗೆ ನೆರವಾಗುತ್ತಿದ್ದು, ಈ ರಾಜ್ಯಗಳು ಅಭಿವೃದ್ಧಿ ದಿಕ್ಕಿನತ್ತ ಸಾಗುತ್ತಿವೆ. ಅದೇ ರೀತಿ ದೆಹಲಿಯಲ್ಲಿ ಕೇಜ್ರಿವಾಲ್ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಇನ್ನು ಬಿಹಾರ, ಪಶ್ಚಿಮ ಬಂಗಾಲ, ಕೇರಳ ಸೇರಿದಂತೆ ಇತರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಇರುವುದರಿಂದ ಅವರು ಅಭಿವೃದ್ಧಿ ದಿಕ್ಕಿನತ್ತ ಸಾಗುತ್ತಿದ್ದಾರೆ. ಹೀಗೆ ಈ ರಾಜ್ಯಗಳು ಎರಡು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಅಭಿವೃದ್ಧಿ ದಿಕ್ಕಿನತ್ತ ಸಾಗುತ್ತಿವೆ ಎಂದರು.

ಬಿಜೆಪಿ, ಕಾಂಗ್ರೆಸ್ನವರು ಚುನಾವಣೆ ಮುಗಿದ ಮೇಲೆ ರಾಜ್ಯದ ದಿಕ್ಕುಗಳನ್ನು ತಿರುಗಿಯೂ ನೋಡುವುದಿಲ್ಲ. ಕಾಂಗ್ರೆಸ್ ಹತ್ತು ವರ್ಷ ಅಧಿಕಾರದಲ್ಲಿತ್ತು. ಮನಮೋಹನ್ ಸಿಂಗ್ ಅವರು ಈ ರಾಜ್ಯಕ್ಕೆ ಕೊಡುಗೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಹರಿಹಾಯ್ದರು.
ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ
ಇನ್ನು ಗ್ಯಾರಂಟಿ ಅಂದರೆ ಏನು? ಐದು ವರ್ಷ ಅಧಿಕಾರಲ್ಲಿದ್ದಾಗ ಗ್ಯಾರಂಟಿ ಕಾರ್ಡ್ ಯಾಕೆ ಕೊಡಲಿಲ್ಲ. ಮತ್ತೊಂದೆಡೆ ಐದು ವರ್ಷ ಸಂಪೂರ್ಣ ಅಧಿಕಾರ ಇದ್ದಾಗ ಒಬ್ಬ ಶಿಕ್ಷಕರನ್ನು ನೇಮಕ ಮಾಡಲು ಆಗಲಿಲ್ಲ, ಕುಡಿಯುವ ನೀರನ್ನು ಸಹ ಕೊಡಲು ಆಗಲಿಲ್ಲ. ಈಗ ಕೃಷ್ಣ, ಮೇಕೆದಾಟು ಉಳಿಸಲು ಹೊರಟಿದ್ದಾರೆ. ಮಾನ ಮಾರ್ಯಾದೆ ಇದ್ದರೆ ಕಾಂಗ್ರೆಸ್ನವರು ಈ ರಾಜ್ಯದಲ್ಲಿ ವೋಟು ಕೇಳಬಾರದು ಎಂದು ಗುಡುಗಿದರು.
ರಾಜ್ಯಕ್ಕೆ ಅನ್ಯಾಯವಾದ್ರೂ ಸ್ವಾಗತ ಬಯಸಿದ್ದರು
ಟ್ರಿಬ್ಯುನಲ್ ತೀರ್ಪು ಬಂದಾಗಲೂ ಕೆಲವರು ರಾಜ್ಯಕ್ಕೆ ಅನ್ಯಾಯವಾದರೂ ಸ್ವಾಗತ ಬಯಸಿದ್ದರು. ಹೀಗೆ ಎರಡು ರಾಷ್ಟ್ರೀಯ ಪಕ್ಷಗಳು ಅಡ್ಜಸ್ಟ್ಮೆಂಟ್ ಮಾಡಿಕೊಂಡು ಈ ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಅನ್ಯಾಯ ಮಾಡಿವೆ ಎಂದು ಹರಿಹಾಯ್ದರು.
ಕಾಂಗ್ರೆಸ್, ಬಿಜೆಪಿ ವಿರುದ್ಧ ಆಕ್ರೋಶ
ಹಾಗೆಯೆ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರನ್ನು ತೆಗೆಯಲು ಕಾಂಗ್ರೆಸ್ ಮತ್ತು ಬಿಜೆಪಿಯವರು ಒಂದಾಗಿದ್ದಾರೆ. ಇವರ ಕೈಯಲ್ಲಿ ಈ ಕೆಲಸ ಆಗಲ್ಲ ಅಂತಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕರೆದುಕೊಂಡು ಬರುತ್ತಿದ್ದಾರೆ. ಪ್ರಧಾನಮಂತ್ರಿಗಳು ಬಂದರೆ ಸ್ವಾಗತ, ಆದರೆ ಕೇಂದ್ರ ಮಟ್ಟದ ನಾಯಕರು ಬಂದು ಶಕ್ತಿ ತುಂಬುವ ಸ್ಥಿತಿ ಬಿಜೆಪಿಗೆ ಬಂದಿದೆ.
ಮೋದಿಯವರು ಬಂದು ಏನು ಮಾಡುತ್ತಾರೆ? ಅವರು ಪೊಲೀಸರಿಗೆ ಬ್ಯಾಟ್ ಕೊಡುತ್ತಾರೆ. ಆಗ ಪೊಲೀಸರು ಹೆಂಡತಿ, ಮಕ್ಕಳನ್ನು ಬಿಟ್ಟು ಮೂರು ದಿನ ರಜಾ ಹಾಕಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ಅಲ್ಲದೆ ಪ್ರಧಾನಮಂತ್ರಿಯವರು ಕುಮಾರಸ್ವಾಮಿ ಅವರನ್ನು ಕೂರಿಸಕೊಂಡು ರಾಜೀನಾಮೆ ಕೊಡು, ನಾಳೆ 10:30ಕ್ಕೆ ಪ್ರಮಾಣವಚನ ತೆಗೆದುಕೊಳ್ಳಿ ಎಂದಿದ್ದರು. ಧರ್ಮಸ್ಥಳದ ಮಂಜುನಾಥಸ್ವಾಮಿ ಮೇಲೆ ಆಣೆ ಮಾಡಲಿ, ಹಾಗೇ ಹೇಳಿಲ್ಲ ಎಂದರೆ ನಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದರು.
ನಾವು ಎಂದು ಅಧಿಕಾರಕ್ಕೆ ಆಸೆ ಪಟ್ಟಿಲ್ಲ. ಅವರು ಬ್ಲಾಕ್ ಮೇಲ್ ಮಾಡಲು ಹೊರಟಿದ್ದಾರೆ. ಈ ಜಿಲ್ಲೆಯನ್ನು ಲೂಟಿಕೋರರಿಂದ ತಪ್ಪಿಸಿ ಅಷ್ಟೇ ಎಂದು ಜನರಿಗೆ ಮನವಿ ಮಾಡಿದರು.












Click it and Unblock the Notifications