HD Revanna- ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ- ಎಚ್ಡಿ ರೇವಣ್ಣ ಹೊಸ ಬಾಂಬ್
ಹಾಸನ ಆಗಸ್ಟ್ 14: ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪ ಮಾಡಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,'ಒಂದು ಪೋಸ್ಟ್ಗೆ ಮೂರು ಜನ ವರ್ಗಾವಣೆ ಮಾಡುತ್ತಿದ್ದಾರೆ' ಎಂದು ದೂರಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಕೆಲವು ಘಟನೆಗಳನ್ನು ನಾನು ನೋಡಿದ್ದೇನೆ. 25 ವರ್ಷಗಳ ರಾಜಕೀಯ ಜೀವನದಲ್ಲಿ ಏರುಪೇರು ನೋಡಿದ್ದೇನೆ. 1990 ರಲ್ಲಿ ದೇವೇಗೌಡರು, ನಮ್ಮ ಪಕ್ಷದ ಎಲ್ಲಾ ಎಂಎಲ್ಎಗಳು ಸೋತರು. ಆದಾದ ಒಂದೇ ವರ್ಷದಲ್ಲಿ ಚುನಾವಣೆ ನಡೆಯಿತು. 1994 ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾದರು. ಮತ್ತೆ ಹದಿನೆಂಟು ತಿಂಗಳಿನಲ್ಲಿ ಪ್ರಧಾನಮಂತ್ರಿಯಾದರು. ಸೋಲು ಗೆಲುವು ಎಲ್ಲಾ ನೋಡಿದ್ದೇವೆ ಎಮದು ಹೇಳಿದರು.

2004ರಲ್ಲಿ ದೇವರು, ಜಿಲ್ಲೆಯ, ಹೊಳೆನರಸೀಪುರದ ಜನರ ಆಶೀರ್ವಾದದಿಂದ ನಾಲ್ಕು ಬಾರಿ ಸತತವಾಗಿ ಗೆದ್ದಿದ್ದೇನೆ. ಮಂತ್ರಿಯಾಗಿ, ಶಾಸಕನಾಗಿ ಎಲ್ಲಾ ರೀತಿಯ ಕೆಲಸ ಮಾಡಿದ್ದೇನೆ. ಜಿಲ್ಲಾಮಟ್ಟದ ಅಧಿಕಾರಿಗಳು ಯಾವ ರೀತಿ ವರ್ತಿಸುತ್ತಿದ್ದಾರೆ ನೋಡುತ್ತಿದ್ದೇನೆ. ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಒಂದು ಪೋಸ್ಟ್ಗೆ ಮೂರು ಜನ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಅವರು ಕಿಡಿ ಕಾರಿದರು.
ದೇವೇಗೌಡರು, ಕುಮಾರಸ್ವಾಮಿ, ನಾನು, ನಮ್ಮ ಪಕ್ಷದ ಎಲ್ಲಾ ಶಾಸಕರು ಮುಂದಿನ ಇಪ್ಪತ್ತೈದು ವರ್ಷಗಳ ಕಾಲ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಿದ್ದೇವೆ. ಆಡಳಿತ, ವಿರೋಧ ಪಕ್ಷದಲ್ಲೂ ಕೆಲಸ ಮಾಡಿದ್ದೇನೆ. ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಜಿ.ಪಂ. ಹೇಗೆ ನಡೆಯುತ್ತಿದೆ ಎಂದು ನೋಡುತ್ತಿದ್ದೇನೆ. ಕೆಲವು ಅಧಿಕಾರಿಗಳು ದೇವೇಗೌಡರು, ರೇವಣ್ಣ ಅವರದ್ದು ಮುಗಿದೇ ಹೊಯ್ತು ಎನ್ನುತ್ತಿದ್ದಾರೆ. ನಾನು ಅಧಿಕಾರಿಗಳಿಂದ ರಾಜಕೀಯ ಮಾಡಲು ಬಂದಿಲ್ಲ. ದೇವರು, ಜನರ ಆಶೀರ್ವಾದದಿಂದ ಉಳಿದಿದ್ದೇನೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಐಐಟಿಗೆ ಮೀಸಲಿಟ್ಟ ಭೂಮಿಯನ್ನು ಕೆಲವರು ಕಬಳಿಸಲು ಹುನ್ನಾರ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಗೆ ಐಐಟಿ ಕೊಡಬೇಕು ಎಂಬ ಆಸೆ ಪ್ರಧಾನಮಂತ್ರಿಗೆ ಇದೆ. ಆದರೆ ಕೆಲವರು ಭೂಮಿ ಮೇಲೆ ಕಣ್ಣು ಹಾಕಿದ್ದಾರೆ. ನಾನೇನು ಸುಮ್ಮನೆ ಕೂರಲ್ಲ, ಏನು ಮಾಡಬೇಕೆಂದು ನನಗೂ ಗೊತ್ತಿದೆ. ಅದೇನೇನು ಮಾಡುತ್ತಾರೋ ಮಾಡಲಿ. ರಾಜಕೀಯ ಏನಾದರೂ ಮಾಡಿಕೊಳ್ಳಿ. ನಮ್ಮ ಜಿಲ್ಲೆಯ ಅಭಿವೃದ್ಧಿ ಹಾಳು ಮಾಡಬೇಡಿ. ಮಾಡುವ ಆಗಿದ್ರೆ ಮಾಡಿ, ಕೆಲಸಗಳನ್ನು ಅರ್ಧಂಬರ್ದ ಮಾಡಬೇಡಿ. ದೇವೇಗೌಡರು, ರೇವಣ್ಣ ಮುಗಿಸಲು ಹೋಗಿ ನಮ್ಮ ಜಿಲ್ಲೆಯ ಜನರನ್ನು ಕೊಲ್ಲಲು ಹೋಗಬೇಡಿ ಎಂದು ಹೇಳಿದರು.
ಯಾವುದೋ ಉದ್ದೇಶದಿಂದ ಈ ಜಿಲ್ಲೆಯ ಬೆಳವಣಿಗೆ ಹಾಳು ಮಾಡಬೇಡಿ. ದೇವೇಗೌಡರು, ರೇವಣ್ಣ, ಕುಮಾರಸ್ವಾಮಿ, ಪ್ರಜ್ವಲ್ರೇವಣ್ಣ ಅಲ್ಲಾ... ಜಿಲ್ಲೆಯ ಜನರ ಹಿತ ನಮಗೆ ಮುಖ್ಯ. ದೇವೇಗೌಡರು ಇರೊದರಿಂದ ಹಾಸನ ಜಿಲ್ಲೆ, ಈ ಮಟ್ಟಕ್ಕೆ ಬೆಳೆಯುತ್ತಿದೆ. ಲ್ಯಾಂಡ್ ಮಾಫಿಯದವರು ರಾಜಕೀಯ ಬಳಸಿ ಭೂಮಿ ಹೊಡೆಯಲು ಹುನ್ನಾರ ಮಾಡುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಸಹಕಾರ ನೀಡುತ್ತಿದೆ. ಹಾಗೇನಾದರೂ ಮಾಡಿದರೆ ನೀವೇ ಮುಂದೆ ಅನುಭವಿಸುತ್ತೀರಿ. ನಾವ್ಯಾರು ಹಿಂಬಾಗಿಲಿನಿಂದ ಬಂದವರಲ್ಲ. ಈ ತಿಂಗಳು ನೋಡುತ್ತೀನಿ, ಇದೇ ರೀತಿ ನಮ್ಮ ಜನಕ್ಕೆ ನೋವು ಕೊಡಲು ಬಂದರೆ ಏನು ಮಾಡಬೇಕು ಅದನ್ನೇ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.












Click it and Unblock the Notifications