ಹಾಸನ: ಕಾಲೇಜಿನ 5ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ, ಕಾರಣ ಏನು?, ಇಲ್ಲಿದೆ ವಿವರ
ಹಾಸನ, ನವೆಂಬರ್, 02: ಕಾಲೇಜಿನ ಕಟ್ಟಡದಿಂದ ಜಿಗಿದು ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ. ಹಾಗಾದರೆ ಈ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ್ರೂ ಏನೆಂದು ಇಲ್ಲಿ ತಿಳಿಯಿರಿ.
ಮಾನ್ಯ (19) ಮೃತ ವಿದ್ಯಾರ್ಥಿನಿಯಾಗಿದ್ದಾರೆ. ಈ ವಿದ್ಯಾರ್ಥಿನಿ ಮೂಲತಃ ಚನ್ನರಾಯಪಟ್ಟಣ ತಾಲೂಕಿನ, ದಂಡಿಗನಹಳ್ಳಿ ಹೋಬಳಿ, ಹೊನ್ನಶೆಟ್ಟಿಹಳ್ಳಿ ಗ್ರಾಮದವರಾಗಿದ್ದು, ಇವರು ಹಾಸನ ಹೊರವಲಯದ ರಾಜೀವ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಪ್ರಥಮ ವರ್ಷದ ಎಲೆಕ್ಟ್ರಾನಿಕ್ ಅಂಡ್ ಕಮೂನಿಕೆಷನ್ ವ್ಯಾಸಂಗ ಮಾಡುತ್ತಿದ್ದರು.

ಹಾಸನ ಹೊರವಲಯದಲ್ಲಿರುವ ರಾಜೀವ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಇಂದು ಮೊದಲ ವರ್ಷದ ಆಂತರಿಕ ಪರೀಕ್ಷೆ ನಡೆಯುತ್ತಿದ್ದು, ಈ ವೇಳೆ ನಕಲು ಮಾಡಿದ ಆರೋಪ ಹಿನ್ನೆಲೆ ಉಪನ್ಯಾಸಕರು ಕಾಲೇಜು ಪ್ರಾಂಶುಪಾಲರಿಗೆ ಅಪಾಲಜಿ ಬರೆದುಕೊಡುವಂತೆ ಹೇಳಿದ್ದಾರೆ. ಆಗ ವಿದ್ಯಾರ್ಥಿನಿ ಮಾನ್ಯ ಮೊದಲು ಪ್ರಾಂಶುಪಾಲರ ಕೊಠಡಿಗೆ ಬಂದು ಬಳಿಕ ಕಾಲೇಜಿನ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಘಟನೆ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ತಂಗಲಿ ಗ್ರಾಮದಲ್ಲಿ ಮಹಿಳೆ ಆತ್ಮಹತ್ಯೆ
ಸಾಲ ತೀರಿಸುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನೀಡಿದ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ತಂಗಲಿ ಗ್ರಾಮದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ದೇವೀರಮ್ಮ (64) ಆತ್ಮಹತ್ಯೆ ಮಾಡಿಕೊಂಡ ಮಹಿಳೆ, ಕಡೂರಿನ ಗ್ರಾಮೀಣ ಕೂಟದಿಂದ ಫೈನಾನ್ಸ್ 78 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಅರ್ಥಿಕ ಸಂಕಷ್ಟದಿಂದ ಒಂದು ತಿಂಗಳಿನಿಂದ ಸಾಲದ ಕಂತನ್ನು ಮರುಪಾವತಿ ಮಾಡಿರಲಿಲ್ಲ. ಒಂದು ತಿಂಗಳಿನಿಂದ ಪ್ರತಿ ವಾರ ಫೈನಾನ್ಸ್ಗೆ ಸಾಲ ಮರುಪಾವತಿ ಮಾಡದ ಹಿನ್ನೆಲೆ ದೇವೀರಮ್ಮ ಅವರ ಮನೆ ಬಳಿ ಬಂದು ಕಿರುಕುಳ ನೀಡಿದ ಆರೋಪ ಫೈನಾನ್ಸ್ ಸಿಬ್ಬಂದಿ ವಿರುದ್ಧ ಕೇಳಿಬಂದಿತ್ತು.
ಉಳಿದ ಬಾಕಿ ಮೊತ್ತ ಕಟ್ಟುವಂತೆ ಒತ್ತಡ ಹೇರಿದ್ದಾರೆ. ಅಲ್ಲದೆ ಅವರ ಕಚೇರಿಗೆ ಮಹಿಳೆ ಕರೆಸಿ ಇಡೀ ದಿನ ಫೈನಾನ್ಸ್ ಕಚೇರಿಯಲ್ಲಿ ಹಣ ಕಟ್ಟುವಂತೆ ಒತ್ತಡ ಹೇರಿದ್ದಾರೆ. ಸಿಬ್ಬಂದಿ ಕಿರುಕುಳಕ್ಕೆ ಮನನೊಂದ ದೇವೀರಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ಸಂಬಂಧ ಗ್ರಾಮಿಣ ಕೂಟ ಫೈನಾನ್ಸ್ ಸಿಬ್ಬಂದಿ ಶಂಕರ್ ನಾಯಕ್, ಉಷಾ, ರುಬೀನಾ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಇಂತಹ ಘಟನೆಗಳು ಇದೇ ಮೊದಲ ಬಾರಿ ಅಲ್ಲ. ಈಗಾಗಲೇ ಹಲವೆಡೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ನಡೆದಿರುವ ಉದಾಹರಣೆಗಳು ಇವೆ. ಆದ್ದರಿಂದ ಇಂತಹ ಘಟನೆಗಳು ಸಂಭವಿಸದಂತೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿತ್ತು.












Click it and Unblock the Notifications