ಹಾಸನ: ಏಕ ಸ್ಥಳದಲ್ಲಿ 126 ಮುನಿಗಳ ಚಾತುರ್ಮಾಸ್ಯ
ಹಾಸನ, ಜುಲೈ.27: ಆಷಾಢ ಮಾಸದ ವೈಶಿಷ್ಟ್ಯತೆಗಳಲ್ಲಿ ಒಂದು ಎಲ್ಲಾ ಮಠಗಳ ಚಾತುರ್ಮಾಸ್ಯ. ಎಲ್ಲಾ ಪೀಠಗಳ ಶ್ರೀಗಳು ಒಂದೊಂದು ಪ್ರದೇಶದಲ್ಲಿ ಚಾತುರ್ಮಾಸ್ಯ ಕೈಗೊಳ್ಳುತ್ತಾರೆ. ಆದರೆ ಈ ಬಾರಿ 88ನೇ ಮಹಾಮಸ್ತಕಾಭಿಷೇಕದ ಸಂಭ್ರಮದಲ್ಲಿರುವ ಶ್ರವಣಬೆಳಗೊಳದಲ್ಲಿ ಚಾತುರ್ಮಾಸ್ಯದ ದೀಕ್ಷೆ ಪಡೆದಿರುವ ಯತಿಗಳ ಸಂಖ್ಯೆ ಬರೋಬ್ಬರಿ 126.
ಇದೇ ಮೊದಲ ಬಾರಿಗೆ ಒಂದೇ ಸ್ಥಳದಲ್ಲಿ ಇಷ್ಟು ಸಂಖ್ಯೆಯ ಯತಿಗಳು ಚಾತುರ್ಮಾಸ್ಯದ ದೀಕ್ಷೆ ಕೈಗೊಂಡಿದ್ದಾರೆ. ಆಷಾಢದಿಂದ ಆಶ್ವಯುಜ ಮಾಸದ ವರೆಗೆ ಇವರು ಚಾತುರ್ಮಾಸ ಕೈಗೊಳ್ಳಲಿದ್ದಾರೆ. ಈ ಯತಿಗಳೆಲ್ಲಾ ಜೈನ ದಿಗಂಬರ ಪಂಥಕ್ಕೆ ಸೇರಿದವರು.
ಬೆಂಗಳೂರಿನಲ್ಲಿ ಸುಗುಣೇಂದ್ರ ತೀರ್ಥರ ಚಾತುರ್ಮಾಸ್ಯ ವ್ರತ
108 ವರ್ಧಮಾನ ಸಾಗರ ಮಹಾರಾಜ್, 6 ಆಚಾರ್ಯರು, ಸೇರಿದಂತೆ 126 ಯತಿಗಳು ಗುರುವಾರ ಚಾತುರ್ಮಾಸದ ದೀಕ್ಷೆ ಕೈಗೊಂಡರು. ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕೂಡಾ ಇದೇ ಸಂದರ್ಭದಲ್ಲಿ ಚಾತುರ್ಮಾಸ್ಯದ ದೀಕ್ಷೆ ಸ್ವೀಕರಿಸಿದರು.
1997ರಿಂದ ಚಾತುರ್ಮಾಸ್ಯ ಆಚರಿಸುತ್ತಿರುವ ಶ್ರೀಗಳಿಗೆ ಇದು 22ನೇ ಚಾತುರ್ಮಾಸ. ಈ ಚಾತುರ್ಮಾಸದ ಹಿನ್ನೆಲೆಯಲ್ಲಿ ಶ್ರವಣಬೆಳಗೊಳದಲ್ಲಿ ಮುಂದಿನ ಎರಡು ತಿಂಗಳ ಅವಧಿಯಲ್ಲಿ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.