ಯಡಿಯೂರಪ್ಪರನ್ನು ತೆಗಳುವ ನೈತಿಕತೆ ಸಿದ್ದುಗಿಲ್ಲ: ರೇವಣ್ಣ ಹೊಸ ವರಸೆ
ಹಾಸನ, ಮಾರ್ಚ್ 8: ಮಾಜಿ ಪ್ರಧಾನಿ ದೇವೇಗೌಡರ ಬಿಗಿ ಹಿಡಿತ ಅರ್ಥಾತ್ ಜೆಡಿಎಸ್ ನ ಭದ್ರಕೋಟೆಯಾಗಿದ್ದ ಹಾಸನದಲ್ಲಿ ಐದು ವರ್ಷದಿಂದ ಕಾಂಗ್ರೆಸ್ ಹವಾ ನಡೆಯುತ್ತಾ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರ ಆಡಳಿತ ನಡೆಯುತ್ತಿದೆ.
ರಾಜಕೀಯ ಶತ್ರು, ಅಷ್ಟೇ ಅಲ್ಲ ಒಂದು ಕಾಲದ ರಾಜಕೀಯ ಗುರುವಾಗಿರುವ ದೇವೇಗೌಡರ ಪ್ರಾಬಲ್ಯವನ್ನು ಮುರಿದು ಅಲ್ಲಿ ಕಾಂಗ್ರೆಸ್ ಆಧಿಪತ್ಯ ಸಾಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹತ್ತು ಹಲವು ಕಸರತ್ತು ಮಾಡುತ್ತಲೇ ಬಂದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಮೂಲಕ ದೇವೇಗೌಡರು ಸೇರಿದಂತೆ ಅವರ ಕುಟುಂಬದ ಸದಸ್ಯರನ್ನು ಕಡೆಗಣಿಸಿ, ಜೆಡಿಎಸ್ ಅನ್ನು ಮೂಲೆಗುಂಪು ಮಾಡಿ ಕಾಂಗ್ರೆಸ್ ಪತಾಕೆ ಹಾರಿಸಲು ಸಿದ್ದರಾಮಯ್ಯ ಹೊರಟಿದ್ದಾರೆ.
ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸ್ಥಾನವನ್ನು ಭವಾನಿ ರೇವಣ್ಣ ಪಡೆಯಬೇಕಾಗಿತ್ತು. ಆದರೆ ಅದಕ್ಕೆ ಮೀಸಲಾತಿ ಅಸ್ತ್ರ ಬಳಸಿ, ಅವರ ಬಯಕೆಯನ್ನು ಮಣ್ಣು ಪಾಲು ಮಾಡಲಾಯಿತು. ಅದಾದ ಬಳಿಕವೂ ಒಂದಲ್ಲ ಒಂದು ರೀತಿಯಿಂದ ದೇವೇಗೌಡರ ಕುಟುಂಬಕ್ಕೆ ಶಾಕ್ ನೀಡುತ್ತಲೇ ಬರಲಾಗುತ್ತಿದೆ.
ಸರ್ಕಾರಕ್ಕೆ ಶಾಸಕ ಎಚ್.ಡಿ.ರೇವಣ್ಣ ಖಡಕ್ ಆವಾಜ್
ಇದೀಗ ವಿಧಾನಸಭಾ ಚುನಾವಣೆ ಹೊಸ್ತಿಲಿಗೆ ಬಂದಾಗಿದೆ. ಹಾಸನದಲ್ಲಿ ಚುನಾವಣೆ ಕಾವು ಜೋರಾಗಿದೆ. ಇದುವರೆಗೆ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಮಾಜಿ ಸಚಿವ ರೇವಣ್ಣ ಅವರು ಮೈಕೊಡವಿ ನಿಂತಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಆಡಳಿದಲ್ಲಿ ಆಗುತ್ತಿರುವ ಅಧ್ವಾನಗಳನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಹಾಸನದಲ್ಲಿ ಲೋಕಾಯುಕ್ತ, ಎಸಿಬಿ ಸತ್ತುಹೋಗಿದೆ
ಉಸ್ತುವಾರಿ ಸಚಿವ ಎ.ಮಂಜು ಅವರ ಕುಮ್ಮಕ್ಕಿನಲ್ಲಿ ಜಿಲ್ಲೆಯಲ್ಲಿ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಅಧಿಕಾರಿಗಳು ಸುಲಿಗೆ ಮಾಡಿ ಸಚಿವರಿಗೆ ಕಮಿಷನ್ ತಲುಪಿಸುತ್ತಿದ್ದಾರೆ. ಆರ್ಟಿಒ ಕಚೇರಿಯಲ್ಲಿ ಬ್ರೇಕ್ ಇನ್ಸ್ನ್ ಸ್ಪೆಕ್ಟರ್ ಅನ್ನು ಹಣ ವಸೂಲಿಗೆಂದೇ ನೇಮಕ ಮಾಡಿಕೊಂಡಿದ್ದಾರೆ. ಪರವಾನಗಿ ಇಲ್ಲದೆ ಗ್ರಾನೈಟ್ ಕಲ್ಲುಗಳನ್ನು ನಿರಂತರವಾಗಿ ಸಾಗಾಟ ಮಾಡಲಾಗುತ್ತಿದೆ. ಇನ್ನು ತಿಂಗಳಿಗೆ 50 ರಿಂದ 60 ಲಕ್ಷ ರುಪಾಯಿಗಳನ್ನು ಇಬ್ಬರು ಬ್ರೇಕ್ ಇನ್ ಸ್ಪೆಕ್ಟರ್ ರಿಂದ ವಸೂಲಿ ಮಾಡಲಾಗುತ್ತಿದೆ ಎಂದ ರೇವಣ್ಣ, ಜಿಲ್ಲೆಯಲ್ಲಿ ಎಸಿಬಿ ಮತ್ತು ಲೋಕಾಯುಕ್ತ ಎರಡು ಸತ್ತು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರಿಯ ಅಧಿಕಾರಿಯಿಂದ 500 ಕೋಟಿ ರುಪಾಯಿ ಆಸ್ತಿ
ಒಬ್ಬ ಹಿರಿಯ ಅಧಿಕಾರಿ 500 ಕೋಟಿ ರುಪಾಯಿ ಆಸ್ತಿ ಮಾಡಿದ್ದಾನೆ ಎಂದರೆ ಇಲ್ಲಿ ಯಾವ ರೀತಿಯ ಲಂಚಾವತಾರ ನಡೆಯುತ್ತಿರಬಹುದು ಎಂಬುದನ್ನು ಊಹಿಸಿ ಎಂದ ಅವರು, ರಾಜ್ಯದಲ್ಲಿ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಲೋಕಾಯುಕ್ತ, ಎಸಿಬಿ ಸತ್ತು ಹೋಗಿವೆ. ಕಮೀಷನ್ ಸರಕಾರ ಆಗಿರುವುದು ನಿಜ ಎಂದು ಪ್ರಧಾನಿ ಮೋದಿಯವರ ಮಾತನ್ನು ಉಲ್ಲೇಖಿಸಿದ್ದಾರೆ.
ದುಡ್ಡು ಪಡೆದರೂ ಯಡಿಯೂರಪ್ಪ ಕೆಲಸ ಮಾಡಿದ್ದಾರೆ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತೆಗಳುವ ನೈತಿಕತೆ ಸಿದ್ದರಾಮಯ್ಯರಿಗಿಲ್ಲ. ಯಡಿಯೂರಪ್ಪ ದುಡ್ಡು ಪಡೆದರೂ ಕೆಲಸ ಮಾಡಿದ್ದಾರೆ. ಆದರೆ ಹಣ ಪಡೆದು ಕೆಲಸ ಮಾಡದ ಸರಕಾರ ಸಿದ್ದರಾಮಯ್ಯ ಅವರದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಪಾಠ ಕಲಿಸಲು ಸಿದ್ಧತೆ
ಸದ್ಯಕ್ಕೆ ಹಾಸನ ಜಿಲ್ಲೆಯಲ್ಲಿ ಕುಮಾರ ಪರ್ವ ಯಾತ್ರೆ ನಡೆಯುತ್ತಿದ್ದು, ಜೆಡಿಎಸ್ ನಾಯಕರೆಲ್ಲ ಒಂದಾಗಿ ಕಾಂಗ್ರೆಸ್ ನಾಯಕರಿಗೆ ತಕ್ಕ ಪಾಠ ಕಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಜೆಡಿಎಸ್ ವೊಂದು ಪಕ್ಷವೇ ಅಲ್ಲ ಎಂಬ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ಸುಮ್ಮನೆ ಕೈ ಕಟ್ಟಿ ಕುಳಿತಿಲ್ಲ. ಬದಲಾಗಿ ಜೆಡಿಎಸ್ ಪಕ್ಷಕ್ಕಿಂತ ಹೆಚ್ಚಾಗಿ ದೇವೇಗೌಡರ ಕುಟುಂಬದ ಸದಸ್ಯರನ್ನು ಸೋಲಿಸಲು ಒಳಗಿನಿಂದಲೇ ತಂತ್ರ ಹೆಣೆಯುತ್ತಿದ್ದಾರೆ. ಜೆಡಿಎಸ್ ತನ್ನ ಭದ್ರಕೋಟೆಯನ್ನು ಗಟ್ಟಿ ಮಾಡಿಕೊಳ್ಳುತ್ತದೋ ಅಥವಾ ಕಾಂಗ್ರೆಸ್ ಗೆ ಬಿಟ್ಟುಕೊಡುತ್ತದೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.