ಶಿವಮೊಗ್ಗದ ಹರ್ಷ ಹತ್ಯೆಯ ಹಿಂದೆ ಕೋಮುಗಲಭೆ ಸೃಷ್ಟಿಸುವ ಹುನ್ನಾರ: ಸಿಟಿ ರವಿ
ಹಾಸನ, ಏಪ್ರಿಲ್ 2: ಶಿವಮೊಗ್ಗದಲ್ಲಿ ನಡೆದಿರುವ ಬಜರಂಗ ದಳ ಕಾರ್ಯಕರ್ತ ಹರ್ಷನ ಕೊಲೆಗೆ ವೈಯಕ್ತಿಕ ದ್ವೇಷ ಕಾರಣವಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆರೋಪಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ ಟಿ ರವಿ, ಹರ್ಷನಿಗಾಗಲಿ ಹಾಗೂ ಆಪಾದಿತರಿಗಾಗಲಿ ವ್ಯಕ್ತಿಗತ ಜಗಳ ಇಲ್ಲವೆಂದು ಮೇಲ್ನೋಟಕ್ಕೆ ಕಂಡು ಬಂದಿದೆ. ವೈಯಕ್ತಿಕ ಕಾರಣಗಳಿಂದ ಹರ್ಷನ ಕೊಲೆ ನಡೆದಿಲ್ಲ ಎಂದು ಎನ್ಐಎ ಕೂಡ ದೃಢೀಕರಿಸಿದೆ ಎಂದು ಹೇಳಿದರು.
ವೈಯಕ್ತಿಕ ಕಾರಣಕ್ಕಾಗಲಿ ಅಥವಾ ಬೇರೆ ಇನ್ಯಾವುದೋ ಕಾರಣಕ್ಕಾಗಿ ಹರ್ಷನ ಹತ್ಯೆ ನಡೆದಿಲ್ಲ. ಯಾರೋ ವೈಯಕ್ತಿಕವಾಗಿ ತೆಗೆದುಕೊಂಡ ತೀರ್ಮಾನ ಇದು ಎಂದು ನನಗೆ ಅನ್ನಿಸುವುದಿಲ್ಲ. ಈ ಹತ್ಯೆ ಹಿಂದೆ ವ್ಯಾಪಕ ಸಂಚು ಅಡಗಿರುವ ಬಗ್ಗೆ ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಪ್ರಾಥಮಿಕ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಸಿ ಟಿ ರವಿ ತಿಳಿಸಿದರು.

ಕೋಮುಗಲಭೆ ಸೃಷ್ಟಿಸುವ ಹುನ್ನಾರ:
ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆಯ ಹಿಂದೆ ಕೋಮುಗಲಭೆ ಸೃಷ್ಟಿಸುವ ಹುನ್ನಾರ ಅಡಗಿರುವ ಬಗ್ಗೆ ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳೇ ಹೇಳಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿರುವ ಸಾಧ್ಯತೆಯಿದೆ. ಕೋಮುಗಲಭೆ ಸೃಷ್ಠಿಸಬೇಕೆಂಬ ಸಂಚಿನಲ್ಲೇ ಹತ್ಯೆ ಮಾಡಿದ್ದಾರೆ. ಇದರ ನೆಟ್ವರ್ಕ್ ಎಲ್ಲಿದೆ ಎಂಬುದನ್ನು ನೋಡೋಣ, ಅಂಥವರು ರಾಜ್ಯದಲ್ಲೇ ಇದ್ದಾರೋ ಅಥವಾ ಹೊರರಾಜ್ಯದಲ್ಲಿ ಇದ್ದಾರೋ ಗೊತ್ತಾಗಲಿ. ಈ ನಿಟ್ಟಿನಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ತನಿಖೆ ನಡೆಸಬೇಕಿದೆ ಎಂದು ಸಿಟಿ ರವಿ ಆಗ್ರಹಿಸಿದರು.

ಕೋಮುಗಲಭೆ ಸೃಷ್ಟಿಸುವುದರ ಹಿಂದೆ ಇರುವವರು ಯಾರು?:
ಈ ಹಿಂದೆ ಪರೇಶ್ ಮೇಸ್ತಾ, ಇಂದು ಹರ್ಷ, ನಾಳೆ ಮತ್ತೊಬ್ಬರು ಎಂಬ ಪರಿಸ್ಥಿತಿ ಬರಬಾರದು. ಕೋಮುಗಲಭೆಯನ್ನು ಸೃಷ್ಟಿಸುವುದಕ್ಕಾಗಿಯೇ ಇಂಥ ಕೃತ್ಯಗಳಲ್ಲಿ ತೊಡಗಿಕೊಂಡವರು ಯಾರು ಎಂಬುದರ ಕುರಿತು ಸೂಕ್ತ ತನಿಖೆ ನಡೆಸಬೇಕು. ಇಂಥ ಕೃತ್ಯಗಳಿಗೆಲ್ಲ ಫೈನಾನ್ಸ್ ಮಾಡುವವರು ಯಾರು, ಪ್ರಚೋದನೆ ಕೊಟ್ಟವರು ಯಾರು, ಹಣದ ವ್ಯವಸ್ಥೆ ಮಾಡುವವರು ಯಾರು, ನ್ಯಾಯಾಲಯದಲ್ಲಿ ಬೆಂಬಲ ಕೊಡುವವರು ಯಾರು, ಇದೆಲ್ಲದರ ಸಮಗ್ರ ತನಿಖೆಯಾಗಬೇಕಾಗಿದ್ದು, ಈ ಹಿನ್ನೆಲೆ ಎನ್ಐಎಗೆ ಪ್ರಕರಣವನ್ನು ವಹಿಸಿದೆ ಎಂದು ಸಿಟಿ ರವಿ ಹೇಳಿದರು.












Click it and Unblock the Notifications