ಮಾಸಾಂತ್ಯಕ್ಕೆ ಕಾಮಗಾರಿ ಪೂರ್ಣ: ಜೂ.15ಕ್ಕೆ ಶಿರಾಡಿ ಸಂಚಾರಕ್ಕೆ ಮುಕ್ತ
ಸಕಲೇಶಪುರ, ಮೇ 21: ಮಂಗಳೂರು-ಬೆಂಗಳೂರು ನಡುವಿನ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮೇ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಜೂನ್ 15ರ ವೇಳೆಗೆ ವಾಹನ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.
ಕಾಂಕ್ರೀಟ್ ರಸ್ತೆ ಕಾಮಗಾರಿ, ಇದೀಗ ಅಂತಿಮ ಹಂತ ತಲುಪಿದ್ದು, 2.3 ಕಿ.ಮೀ ಕೆಲಸ ಮಾತ್ರ ಬಾಕಿ ಉಳಿದಿದೆ. ಮಂಗಳೂರಿನ ಓಪನ್ ಕನ್ಸ್ಟ್ರಕ್ಷನ್ ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಕಾಮಗಾರಿ ಅವಧಿ 18 ತಿಂಗಳಾಗಿದ್ದರೂ ನಾಲ್ಕೂವರೆ ತಿಂಗಳಲ್ಲಿ ಬಹುತೇಕ ಪೂರ್ಣಗೊಳಿಸಿದೆ.
ಶಿರಾಡಿ ಘಾಟ್ ಬಂದ್: ವಾಹನ ಸಂಚಾರ ನಿರ್ಬಂಧ
ಕಳೆದ ಜನವರಿ 20ರಿಂದ ಈ ಭಾಗದಲ್ಲಿ ಸಂಚಾರ ನಿಷೇಧ ಮಾಡಲಾಗಿದ್ದು, ಐದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ನೀಡಲಾಗಿತ್ತು. 12.38 ಕಿ.ಮೀ ಉದ್ದದ ಕೆಂಪುಹೊಳೆಯಿಂದ ಅಡ್ಡಹೊಳೆವರೆಗಿನ ರಸ್ತೆ ಕಾಂಕ್ರೀಟ್ ಕೆಲಸದಲ್ಲಿ ಗುಂಡ್ಯ ಗೇಟ್ ವರೆಗೂ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲಿಂದ ಅಡ್ಡಹೊಳೆ ಮಧ್ಯೆ ಸುಮಾರು 3 ಕಿ.ಮೀ ಭಾಗದಲ್ಲಿ ಬಿರುಸಿನಿಂದ ಕೆಲಸ ನಡೆಯುತ್ತಿದೆ.
ಮೂರು ಕಿರು ಸೇತುವೆ ಬಾಕಿ: ಒಟ್ಟು 74 ಮೋರಿಗಳ ಗುರಿ ಇರಿಸಲಾಗಿದ್ದು, ಎಲ್ಲವೂ ಪೂರ್ಣಗೊಂಡಿವೆ. ಆದರೆ ಮೂರು ಕಿರುಸೇತುವೆಗಳ ಕೆಲಸ ಪೂರ್ತಿಯಾಗಿಲ್ಲ. ಅದರ ಕೆಲಸ ನಡೆಯುತ್ತಿದೆ. ಈ ಸೇತುವೆಗಳ ಎರಡೂ ಭಾಗದ ಕೂಡು ರಸ್ತೆಗಳ ಕಾಂಕ್ರೀಟ್ ಕೆಲಸ ಬಾಕಿ ಉಳಿದಿದೆ. ಕೆಲ ದಿನಗಳಿಂದ ಮಳೆ ಸತತ ಸುರಿದಿರುವುದರಿಂದ ಕಾಮಗಾರಿ ವೇಗ ಒಂದಷ್ಟು ತಗ್ಗಿದೆ.
ಮೋಡ ಹಾಗೂ ಮಳೆ ಬರುವ ವಾತಾವರಣವಿದ್ದರೂ ಜರ್ಮನಿಯ ಅತ್ಯಾಧುನಿಕ ಸ್ಲಿಪ್ ಫಾರಂ ಪೇವರ್ ಯಂತ್ರದ ಮುಂದೆ ರಾಶಿ ರಾಶಿ ಕಾಂಕ್ರೀಟ್ ಅನ್ನು ಟಿಪ್ಪರ್ ತಂದು ಸುರಿಯುತ್ತಿದ್ದರೆ, ಬುಲ್ಡೋಜನರ್ ಅದನ್ನು ಮಟ್ಟವಾಗಿ ಹರಡಿಕೊಡುತ್ತಿದೆ.. ಸದ್ಯ 12.38 ಕಿ.ಮೀ ಒಟ್ಟು ಕಾಮಗಾರಿಯಲ್ಲಿ 2,299 ಮೀಟರ್ ಕಾಮಗಾರಿ ಮಾತ್ರ ಬಾಕಿ ಇದೆ.